ಬಂಧಿತ ವ್ಯಕ್ತಿ ಹುದ್ದೆ ತ್ಯಜಿಸಬೇಕು ಅಂತ ಕಾನೂನು ಹೇಳಲ್ಲ: ತಜ್ಞರು

By Kannadaprabha NewsFirst Published Mar 23, 2024, 10:39 AM IST
Highlights

ಬಂಧನಕ್ಕೆ ಒಳಗಾಗಿ  ದಿನ ಕಳೆದರೂ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿಲ್ಲ. ಹಾಗಾದರೆ ಬಂಧನಕ್ಕೊಳಗಾದ ಜನಪ್ರತಿನಿಧಿಗಳು ರಾಜೀನಾಮೆ ನೀಡಬೇಕಿಲ್ಲವೇ ಎಂದು ಕಾನೂನು ತಜ್ಞರನ್ನು ಪ್ರಶ್ನಿಸಿದಾಗ, ಇಲ್ಲ ಎನ್ನುತ್ತಾರೆ.

ನವದೆಹಲಿ (ಮಾ.23): ಅಬಕಾರಿ ಹಗರಣ ಸಂಬಂಧ ಬಂಧನಕ್ಕೆ ಒಳಗಾಗಿ ದಿನ ಕಳೆದರೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿಲ್ಲ. ಮತ್ತೊಂದೆಡೆ, ಅವರು ರಾಜೀನಾಮೆ ನೀಡುವುದಿಲ್ಲ, ಅಗತ್ಯ ಬಿದ್ದರೆ ಜೈಲಿನಿಂದಲೇ ಆಡಳಿತ ನಡೆಸುತ್ತಾರೆ ಎಂದು ಅವರ ಪಕ್ಷ ಆಪ್‌ ಹೇಳುತ್ತಿದೆ. ಹಾಗಾದರೆ ಬಂಧನಕ್ಕೊಳಗಾದ ಜನಪ್ರತಿನಿಧಿಗಳು ರಾಜೀನಾಮೆ ನೀಡಬೇಕಿಲ್ಲವೇ ಎಂದು ಕಾನೂನು ತಜ್ಞರನ್ನು ಪ್ರಶ್ನಿಸಿದಾಗ, ‘ಇಲ್ಲ’ ಎಂದು ಅವರು ಹೇಳುತ್ತಾರೆ.

ಬಂಧಿತರಾದ ಬಳಿಕ ಯಾವುದೇ ವ್ಯಕ್ತಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬಾರದು ಎಂದು ಕಾನೂನು ಹೇಳುವುದಿಲ್ಲ ಎಂದು ಹಿರಿಯ ನ್ಯಾಯವಾದಿ ಗೋಪಾಲ್‌ ಶಂಕರನಾರಾಯಣ ಅವರು ತಿಳಿಸಿದ್ದಾರೆ. ಕಾನೂನಿನಲ್ಲಿ ಸಮಸ್ಯೆ ಇಲ್ಲ ನಿಜ, ಆದರೆ ಆಡಳಿತಾತ್ಮಕವಾಗಿ ಅದು ಅಸಾಧ್ಯವಾದ ಕೆಲಸ ಎಂದು ಮತ್ತೊಬ್ಬ ಹಿರಿಯ ವಕೀಲ ವಿಕಾಸ್‌ ಸಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪತ್ನಿ ಸುನಿತಾಗೆ ಕೇಜ್ರಿವಾಲ್‌ ಉತ್ತರಾಧಿಕಾರಿ ಪಟ್ಟ? ಸಿಎಂ ರೇಸ್‌ನಲ್ಲಿದ್ದಾರೆ ಮೂವರು!

ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ, ಯಾವುದೇ ಶಾಸಕ ದೋಷಿ ಎಂದು ಸಾಬೀತಾದರೆ ಅನರ್ಹಗೊಳ್ಳುತ್ತಾರೆ. ತನ್ಮೂಲಕ ಮಂತ್ರಿ ಸ್ಥಾನದಿಂದ ಪದಚ್ಯುತಗೊಳ್ಳುತ್ತಾರೆ ಎಂದು ಇಬ್ಬರೂ ತಿಳಿಸಿದ್ದಾರೆ.

ಜೈಲಿನಿಂದ ಅಸಾಧ್ಯ: ಈ ನಡುವೆ, ಜೈಲಿನಲ್ಲಿ ವಾರಕ್ಕೆ 2 ಸಲ ಮಾತ್ರ ಇತರರನ್ನು ಭೇಟಿ ಮಾಡಲು ಅವಕಾಶವಿದೆ. ಅದಕ್ಕೆ ನಿರ್ದಿಷ್ಟ ಸಮಯದ ಮಿತಿ ಇರುತ್ತದೆ. ಸ್ನೇಹಿತರು, ಆಪ್ತೇಷ್ಟರು, ಕುಟುಂಬಸ್ಥರು- ಹೀಗೆ ನಿರ್ದಿಷ್ಟ ಜನರಿಗೆ ಮಾತ್ರ ಭೇಟಿಗೆ ಅವಕಾಶ ಇರುತ್ತದೆ. ಇಂಥದ್ದರಲ್ಲಿ ಜೈಲಿನಲ್ಲಿ ದೈನಂದಿನ ಕರ್ತವ್ಯ ನಿರ್ವಹಣೆ ಕೇಜ್ರಿವಾಲ್‌ಗೆ ಅಸಾಧ್ಯ ಎಂದು ಮೂಲಗಳು ಹೇಳಿವೆ.

ಆಪ್‌ ಆಡಳಿತ ಭ್ರಷ್ಟಾಚಾರಕ್ಕೆ ಬಳಸುತ್ತಿದೆ, ಕೇಜ್ರಿವಾಲ್‌ ಬಗ್ಗೆ ನನಗೆ ತೀವ್ರ ನಿರಾಶೆಯಾಗಿದೆ: ಸಂತೋಷ್ ಹೆಗ್ಡೆ

ರಾಷ್ಟ್ರಪತಿ, ಗೌರ್ನರ್‌ಗಷ್ಟೇ ಬಂಧನದಿಂದ ವಿನಾಯಿತಿ; ಪ್ರಧಾನಿ, ಸಿಎಂಗಳಿಗೆ ಇಲ್ಲ: ಸಂವಿಧಾನದ 361ನೇ ಪರಿಚ್ಛೇದದಡಿ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ಬಂಧನ ಮತ್ತು ಕೋರ್ಟ್‌ಗಳ ವಿಚಾರಣೆಯಿಂದ ವಿನಾಯಿತಿ ಇದೆ. ಆದರೆ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಅಂತಹ ಯಾವುದೇ ವಿನಾಯಿತಿ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಜೈಲಿಗೆ ಕಳಿಸ್ತೇವೆ ಹುಷಾರ್‌: ಆಪ್‌ ಸಚಿವಗೆ ಕೋರ್ಟ್‍ ಎಚ್ಚರಿಕೆ
ಅಬಕಾರಿ ಹಗರಣ ಸಂಬಂಧ ದೆಹಲಿಯ ಆಪ್‌ ಸರ್ಕಾರದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಂಧನದ ಬೆನ್ನಲ್ಲೇ, ಅವರ ಸಂಪುಟದ ಆರೋಗ್ಯ ಮಂತ್ರಿಯಾಗಿರುವ ಸೌರಭ್‌ ಭಾರದ್ವಾಜ್‌ ಅವರನ್ನು ಜೈಲಿಗೆ ಕಳುಹಿಸುವುದಾಗಿ ದೆಹಲಿ ಹೈಕೋರ್ಟ್‌ ಛೀಮಾರಿ ಹಾಕಿದೆ.

ದೆಹಲಿಯಲ್ಲಿ ಕ್ಲಿನಿಕ್‌ ಹಾಗೂ ಡಯಾಗ್ನೋಸ್ಟಿಕ್‌ ಕೇಂದ್ರಗಳನ್ನು ನಿಯಂತ್ರಿಸುವ ಸಂಬಂಧ ಕೋರ್ಟ್‌ ಆದೇಶವಿದ್ದರೂ ಕಾಯ್ದೆ ಜಾರಿ ಮಾಡದ ಹಿನ್ನೆಲೆಯಲ್ಲಿ ಸೌರಭ್‌ ಭಾರದ್ವಾಜ್‌ ಹಾಗೂ ಆರೋಗ್ಯ ಕಾರ್ಯದರ್ಶಿ ದೀಪಕ್‌ ಕುಮಾರ್‌ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಹೈಕೋರ್ಟ್‌ ಸೂಚನೆ ನೀಡಿತ್ತು. ಹಾಜರಾದ ವೇಳೆ ಛೀಮಾರಿ ಹಾಕಿದ ಕೋರ್ಟ್‌, ನೀವು ಸರ್ಕಾರದ ಸೇವಕರು. ದೊಡ್ಡ ಅಹಂ ಬೇಡ. ನಿಮ್ಮಿಬ್ಬರ ಜಗಳದಿಂದಾಗಿ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳಬಾರದು. ನಿಮ್ಮನ್ನು ಜೈಲಿಗೆ ಕಳುಹಿಸಲೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿತು.

click me!