
ಬೆಂಗಳೂರು: ಸರಕು ಸಾಗಣೆ ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರದಿಂದ ದೊಡ್ಡ ಶಾಕ್ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸದ್ದಿಲ್ಲದೇ ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದು, ಓವರ್ಲೋಡ್ ಮೂಲಕ ಹೆಚ್ಚುವರಿ ಸಂಪಾದನೆ ಮಾಡುವವರಿಗೆ ಬ್ರೇಕ್ ಹಾಕಲು ಮುಂದಾಗಿದೆ. ರಸ್ತೆ ಹಾನಿಯನ್ನು ತಡೆಯುವ ಉದ್ದೇಶದಿಂದ ಟೋಲ್ ಪ್ಲಾಜಾಗಳಲ್ಲಿ ನೂತನ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ.
ಇನ್ನು ಮುಂದೆ ದೇಶದ ಎಲ್ಲಾ ಪ್ರಮುಖ ಟೋಲ್ ಪ್ಲಾಜಾಗಳಲ್ಲಿ ಓವರ್ಲೋಡ್ ವಾಹನಗಳ ಮೇಲೆ ಕಣ್ಣಿಡಲಾಗುತ್ತದೆ. ವಾಹನಗಳ ತೂಕವನ್ನು ಟೋಲ್ಗಳಲ್ಲೇ ನೇರವಾಗಿ ಮಾಪನ ಮಾಡುವ ವ್ಯವಸ್ಥೆ ಜಾರಿಗೊಳ್ಳಲಿದೆ. ಈ ಮೂಲಕ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ತೂಕ ಸಾಗಿಸುತ್ತಿರುವ ವಾಹನಗಳನ್ನು ತಕ್ಷಣವೇ ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತದೆ.
ಹೊಸ ನಿಯಮಗಳ ಭಾಗವಾಗಿ ಟೋಲ್ ಪ್ಲಾಜಾಗಳಲ್ಲಿ “Weigh-in-Motion” ಎಂಬ ಡಿಜಿಟಲ್ ತೂಕ ಮಾಪನ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ವಾಹನಗಳು ನಿಲ್ಲದೇ ಚಲಿಸುತ್ತಿರುವಾಗಲೇ ಅವುಗಳ ತೂಕವನ್ನು ಅಳೆಯುವ ಈ ತಂತ್ರಜ್ಞಾನದಿಂದ ಓವರ್ಲೋಡ್ ವಾಹನಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು.
ಈ ನಿಯಮದಿಂದ ಓವರ್ಲೋಡ್ ವಾಹನಗಳಿಗೆ ಭಾರೀ ದಂಡದ ಹೊರೆ ಬೀಳಲಿದ್ದು, ನಿಯಮ ಉಲ್ಲಂಘನೆಗೆ ಕಟ್ಟುನಿಟ್ಟಿನ ಕ್ರಮ ಜಾರಿಯಾಗಲಿದೆ.
ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ FASTag ಅಥವಾ UPI ಮೂಲಕವೇ ಪಾವತಿ ಮಾಡುವುದು ಕಡ್ಡಾಯವಾಗಲಿದೆ. ಜೊತೆಗೆ, ಓವರ್ಲೋಡ್ ವಾಹನಗಳ ವಿವರಗಳನ್ನು VAHAN ಆ್ಯಪ್ನಲ್ಲಿ ದಾಖಲಿಸಲಾಗುತ್ತದೆ. ಇದರಿಂದ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಮೇಲಿನ ನಿಗಾವನ್ನು ಹೆಚ್ಚಿಸಲು ಸಾಧ್ಯವಾಗಲಿದೆ.
ರಸ್ತೆಗಳ ಹಾನಿಯನ್ನು ತಡೆಯಲು ಟೋಲ್ ಸಿಬ್ಬಂದಿಗೆ ಹೆಚ್ಚುವರಿ ಅಧಿಕಾರ ನೀಡಲಾಗಿದೆ. ಓವರ್ಲೋಡ್ ವಾಹನಗಳು ಪತ್ತೆಯಾದಲ್ಲಿ, ಅವುಗಳನ್ನು ಟೋಲ್ ಪ್ಲಾಜಾದಲ್ಲೇ ತಡೆಹಿಡಿಯುವ ಅಧಿಕಾರವೂ ನೀಡಲಾಗಿದೆ.
ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಲಾರಿ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಓವರ್ಲೋಡ್ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದೆ” ಎಂದು ಆರೋಪಿಸಿರುವ ಅವರು, ಈ ನಿಯಮಗಳನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ, “ಹೈವೇಯಲ್ಲಿ ದಂಡ ಕಟ್ಟಿದ ನಂತರ ಓವರ್ಲೋಡ್ ಸಾಗಾಣಿಕೆಗೆ ಅನುಮತಿ ನೀಡಲಾಗುತ್ತದೆಯೇ?” ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಓವರ್ಲೋಡ್ ಮಾಡುವುದಕ್ಕೆ ಕಾರಣವಾಗಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಲಾರಿ ಮಾಲೀಕರು ಒತ್ತಾಯಿಸಿದ್ದಾರೆ. ಕೇವಲ ವಾಹನ ಚಾಲಕರ ಮೇಲೆ ದಂಡ ವಿಧಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ತೂಕ ಮಾಪನ ಯಂತ್ರಗಳಿರುವ ಟೋಲ್ ಪ್ಲಾಜಾಗಳಲ್ಲಿ ಮಾತ್ರ ಈ ನಿಯಮಗಳು ಅನ್ವಯವಾಗಲಿವೆ. ತೂಕ ಯಂತ್ರಗಳಿಲ್ಲದ ಟೋಲ್ಗಳಲ್ಲಿ ಈ ನಿಯಮ ಜಾರಿಯಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ, ರಸ್ತೆ ಸುರಕ್ಷತೆ ಮತ್ತು ಮೂಲಸೌಕರ್ಯಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಈ ಕ್ರಮವು ದೇಶದ ಸರಕು ಸಾಗಣೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ