
ಶ್ರೀಹರಿಕೋಟಾ(ಜು.14) ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ನೌಕೆ ಉಡಾವಣೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ. ಈಗಾಗಲೇ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ. ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲು ಭಾರತ ಮಾತ್ರವಲ್ಲ ವಿಶ್ವವೇ ಕಾದು ಕುಳಿತಿದೆ. ಚಂದ್ರಯಾನ-3 ಯಶಸ್ವಿ ಉಡಾವಣೆಗಾಗಿ ಇಸ್ರೋ ಮುಖ್ಯಸ್ಥ ಸೇರಿದಂತೆ ವಿಜ್ಞಾನಿಗಳ ತಂಡ ಆಂಧ್ರ ಪ್ರದೇಶದ ತಿರುಪತಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿತ್ತು. ಚಂದ್ರಯಾನ-3ರ ಮಿನಿ ಮಾಡೆಲ್ ದೇವಸ್ಥಾನದಲ್ಲಿಟ್ಟು ಪೂಜೆ ಸಲ್ಲಿಸಲಾಗಿತ್ತು. ಇಸ್ರೋ ವಿಜ್ಞಾನಿಗಳ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಭಾರತದಲ್ಲಿ ಪ್ರತಿ ಶುಭಕಾರ್ಯಕ್ಕೆ ದೇವರ ಅನುಗ್ರಹ ಪಡೆಯುವುದು ಅತೀ ಅವಶ್ಯಕ. ಇಸ್ರೋಗೆ ಶುಭವಾಗಲಿ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳ ನಡೆಗೆ ವಿರೋಧವೂ ವ್ಯಕ್ತವಾಗಿದೆ.
ಇಸ್ರೋ ವಿಜ್ಞಾನಿಗಳು ದೇವರ ಮೇಲೆ ಬಾರ ಹಾಕಿದ್ದಾರಾ? ತಮ್ಮ ಸಂಶೋಧನೆ ಮೇಲೆ ನಂಬಿಕೆ ಇಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ನಡೆ ಸಮಾಜಕ್ಕೆ ಮಾರಕ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇಸ್ರೋ ವಿಜ್ಞಾನದ ಮೇಲೆ ನಂಬಿಕೆ ಇಟ್ಟಿದೆ ಎಂದುಕೊಂಡಿದ್ದೆ. ವಿಜ್ಞಾನ ಹಾಗೂ ಆಧ್ಯಾತ್ಮವನ್ನು ಜೊತೆಯಾಗಿಸುವುದು ಉತ್ತಮ ಬೆಳವಣಿಗೆ ಅಲ್ಲ. ಉಡಾವಣೆ ರಾಕೆಟ್ಗೆ ನಿಂಬೆ ಹಾಗೂ ಹಸಿ ಮೆಣಸು ಕಟ್ಟಬೇಕಿತ್ತು ಎಂದು ಲೇವಡಿ ಮಾಡಿದ್ದಾರೆ.
ಚಂದ್ರಯಾನ-3 ಯಶಸ್ವಿಗೆ ತಿರುಪತಿ ತಿಮ್ಮಪ್ಪನ ದರ್ಶನ; ಇಸ್ರೋ ವಿಜ್ಞಾನಿಗಳ ನಡೆಗೆ ಪ್ರಗತಿಪರ ಸಾಹಿತಿಗಳು ಖಂಡನೆ
ತಿರುಪತಿ ದೇಗುಲಕ್ಕೆ ಬೇಟಿ ನೀಡಿದ ಬಳಿಕ ಮಾತನಾಡಿದ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್, ಚಂದ್ರಯಾನ-3 ಯಶಸ್ವಿ ಉಡಾವಣೆಗೆ ದೇವರ ಆಶೀರ್ವಾದ ಪಡೆದಿದ್ದೇವೆ. ಚೆಂಗಲಮ್ಮ ದೇವಿಯ ಆಶೀರ್ವಾದ ಪಡೆಯಲು ನಾವು ಬಂದಿದ್ದೇವೆ. ಪೂಜೆ ಸಲ್ಲಿಸಿದ್ದೇವೆ. ನಮ್ಮ ಪ್ರಯತ್ನ ಯಶಸ್ವಿಯಾಗಲಿದೆ ಎಂದು ಎಸ್ ಸೋಮನಾಥ್ ಹೇಳಿದ್ದರು.
ಇದೇ ವೇಳೆ ಇಸ್ರೋ ವಿಜ್ಞಾನಿಗಳ ನಡೆಯನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಇಸ್ರೋಗೆ ಶುಭವಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳ ಸುರಿಮಳೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇಸ್ರೋಗೆ ಶುಭಹಾರೈಸಿದ್ದಾರೆ. ಭಾರತದ ಬಾಹ್ಯಾಕಾಶದಲ್ಲಿ ಜುಲೈ 14 ಐತಿಹಾಸಿಕ ದಿನ. ಭಾರತದ ಮೂರನೇ ಚಂದ್ರಯಾನ ನೌಕೆ ಪಯಣ ಆರಂಭಿಸಲಿದೆ. ಇದು ಭಾರತದ ಕನಸು ಹಾಗೂ ಭರವಸೆಗಳನ್ನು ಹೊತ್ತ ನೌಕೆಯಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಚಂದ್ರಯಾನ 3 ಉಡಾವಣೆಗೆ ಸಕಲ ಸಿದ್ದತೆ: ಮತ್ತೊಂದು ಮೈಲಿಗಲ್ಲು ಬರೆಯಲು ಸಜ್ಜಾದ ವಿಜ್ಞಾನಿಗಳು
ವಿಕ್ರಮ್ ಲ್ಯಾಂಡರ್ನಿಂದ ಹೊರಬರುವ ರೋವರ್ಗೆ ಪ್ರಗ್ಯಾನ್ ಎಂದು ಹೆಸರಿಡಲಾಗಿದ್ದು, ಇದರ ಜೀವಿತಾವಧಿ ಭೂಮಿಯ 14 ದಿನಗಳಾಗಿದೆ (ಚಂದ್ರನ 1 ದಿನ). ಇದರಲ್ಲಿ ಸುಧಾರಿತ ಲೇಸರ್ ಸ್ಪೆಕ್ಟ್ರೋ ಮೀಟರ್ಗಳನ್ನು ಅಳವಡಿಸಲಾಗಿದ್ದು, ಇದು ಚಂದ್ರನಲ್ಲಿರುವ ಖನಿಜಗಳು ಮತ್ತು ರಾಸಾಯನಿಕ ಸಂಯೋಜನೆಗಳನ್ನು ಅಧ್ಯಯನ ನಡೆಸಲಿದೆ. ಇದು ಚಂದ್ರನ ಮೇಲ್ಮೈನ ಬಗ್ಗೆ ಮತ್ತಷ್ಟುತಿಳಿದುಕೊಳ್ಳಲು ನೆರವು ನೀಡಲಿದೆ. ಅಲ್ಲದೆ, ಇದರಲ್ಲಿ ಸುಧಾರಿತ ಆಲ್ಫಾ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಅಳವಡಿಸಲಾಗಿದ್ದು, ಇದು ಚಂದ್ರನಲ್ಲಿರುವ ಕಲ್ಲು ಮತ್ತು ಮಣ್ಣಿನಲ್ಲಿರುವ ಮೆಗ್ನಿಸಿಯಂ, ಅಲ್ಯುಮಿನಿಯಂ, ಸಿಲಿಕಾನ್, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಟೈಟಾನಿಯಂ ಮತ್ತು ಕಬ್ಬಿಣದ ಅಂಶಗಳ ಬಗ್ಗೆ ಮಾಹಿತಿ ಕಲೆಹಾಕಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ