
ಉಧಂಪುರ: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಗ್ರರ ನುಸುಳುವಿಕೆ ಪ್ರಮಾಣ ಕಡಿಮೆಯಾಗಿದೆಯಾದರೂ, ಭಾರತದ ಗಡಿಯೊಳಗೆ ನುಗ್ಗಲೂ ಈಗಲೂ ಪಾಕಿಸ್ತಾನದ ಲಾಂಚ್ ಪ್ಯಾಡ್ಗಳಲ್ಲಿ ಕನಿಷ್ಠ 200 ಉಗ್ರರು ಕಾದು ಕುಳಿತಿದ್ದಾರೆ ಎಂದು ಸೇನೆ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸೇನೆಯ ನಾರ್ದನ್ ಕಮಾಂಡ್ನ ಲೆ.ಜ.ಉಪೇಂದ್ರ ದ್ವಿವೇದಿ, 2021 ಫೆಬ್ರವರಿ ಬಳಿಕ ಪಾಕಿಸ್ತಾನದ ಜೊತೆ ಮಾಡಿಕೊಂಡ ಕದನ ವಿರಾಮ ಉತ್ತಮವಾಗಿಯೇ ಮುಂದುವರೆದಿದೆ. ಪಾಕ್ ಉಗ್ರರಿಗೆ ಸ್ಥಳೀಯರ ಆಶ್ರಮ ಇಲ್ಲದ ಕಾರಣ, ಉಗ್ರರಿಗೆ ನುಸುಳಿ ಬರುವುದು ಮತ್ತು ಇಲ್ಲಿ ನೆಲೆಯೂರುವುದು ಕಷ್ಟವಾಗುತ್ತಿದೆ. ಈ ವರ್ಷವೊಂದರಲ್ಲೇ ಇದುವರೆಗೆ ಹೀಗೆ ನುಸುಳಿಬಂದಿದ್ದ 21 ಪಾಕ್ ಉಗ್ರರನ್ನು ಹತ್ಯೆಗೈಯಲಾಗಿದೆ. ಹೀಗಾಗಿ ಒಳನುಸುಳುವಿಕೆ ದಿನೇ ದಿನೇ ಕಡಿಮೆಯಾಗುತ್ತಿದೆ’
‘ಇದರ ಹೊರತಾಗಿಯೂ, ಈಗಲೂ ಪಾಕಿಸ್ತಾನದ ಲಾಂಚ್ ಪ್ಯಾಡ್ಗಳಲ್ಲಿ 200 ಉಗ್ರರು ಭಾರತದೊಳಗೆ ನುಸುಳಲು ಕಾದು ಕುಳಿತಿದ್ದಾರೆ. ಇವರನ್ನೆಲ್ಲಾ 6 ದೊಡ್ಡ ಮತ್ತು 19 ಸಣ್ಣ ಕ್ಯಾಂಪ್ಗಳಲ್ಲಿ ಇಡಲಾಗಿದೆ. ಗಡಿಯಾಚೆಗೆ ಪಾಕ್ನ ಸೇನಾ ನೆಲೆಗಳ ಬಳಿಯಲ್ಲೇ ಇಂಥ ಕ್ಯಾಂಪ್ಗಳನ್ನು ಸ್ಥಾಪಿಸಲಾಗಿದೆ. ಇವರ ಜೊತೆಗೆ ದೇಶೀಯವಾಗಿ ಸ್ಥಳೀಯವಾಗಿ ಕನಿಷ್ಠ 50 ಉಗ್ರರು ಸಕ್ರಿಯರಾಗಿದ್ದಾರೆ’ ಎಂದು ದ್ವಿವೇದಿ ಹೇಳಿದ್ದಾರೆ.
ಅಮರನಾಥ ಯಾತ್ರೆ ರಸ್ತೆಯಲ್ಲಿ ಮೂವರು ಉಗ್ರರ ಹಿಜ್ಬುಲ್ ಹತ್ಯೆ
ಮುಂದಿನ ತಿಂಗಳು ನಡೆಯಲಿರುವ ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಸಂಚನ್ನು ಸೇನಾಪಡೆಗಳು ವಿಫಲಗೊಳಿಸಿದ ಬೆನ್ನಲ್ಲೇ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೂವರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಗೆ ಸೇರಿದವರಾಗಿದ್ದು ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.
ಪಹಲ್ಗಾಮ್, ಅನಂತ್ನಾಗ್ ಜಿಲ್ಲೆಗಳ ಶ್ರೀಚಂದ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯ ಮೇಲೆ ಸೇನಾಪಡೆಗಳು ಕಾರ್ಯಾಚರಣೆ ನಡೆಸಿವೆ. ಈ ವೇಳೆ ಅಡಗಿಕೊಂಡಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರಿಂದ ಯೋಧರು ನಡೆಸಿದ ಪ್ರತಿದಾಳಿಗೆ ಉಗ್ರರು ಹತರಾಗಿದ್ದಾರೆ. ಮೃತರಲ್ಲಿ ಒಬ್ಬನನ್ನು ಅಶ್ರಫ್ ಮೊಲ್ವಿ ಎಂದು ಗುರುತಿಸಲಾಗಿದ್ದು, ಈತ ಈ ಸಂಘಟನೆಯಲ್ಲಿ ಬಹಳಷ್ಟುವರ್ಷಗಳಿಂದ ಸಕ್ರಿಯನಾಗಿದ್ದಾನೆ. ಈ ಕಾರ್ಯಾಚರಣೆ ಸೇನಾಪಡೆಗಳ ಪ್ರಮುಖ ಗೆಲುವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ