ದಿಲ್ಲಿ ಹಿಂಸೆ: ತಾಹಿರ್‌ ವಿರುದ್ಧ ದಂಗೆ, ಲೂಟಿಯ ಆರೋಪ, ಹಿಂದೂಗಳನ್ನು ಗುರಿಯಾಗಿಸಿ ಹಿಂಸಾಚಾರ

By Suvarna NewsFirst Published May 7, 2022, 5:54 AM IST
Highlights

* 2020ರಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣ

* ದಿಲ್ಲಿ ಹಿಂಸೆ: ತಾಹಿರ್‌ ವಿರುದ್ಧ ದಂಗೆ, ಲೂಟಿಯ ಆರೋಪ

-ಹಿಂದೂಗಳನ್ನು ಗುರಿಯಾಗಿಸಿ ಹಿಂಸಾಚಾರ

ನವದೆಹಲಿ(ಮೇ.07):: 2020ರಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಆಮ್‌ಆದ್ಮಿ ಪಕ್ಷದ ಕೌನ್ಸಿಲರ್‌ ಆಗಿದ್ದ ತಾಹಿರ್‌ ಹುಸ್ಸೇನ್‌, ಗಲಭೆಗೆ ಸಂಚು ರೂಪಿಸಿದ್ದು ಮಾತ್ರವಲ್ಲದೇ ಅದರಲ್ಲಿ ಸಕ್ರಿಯರಾಗಿ ಭಾಗಿಯಾಗದ್ದರು. ಹೀಗಾಗಿ ಅವರ ವಿರುದ್ಧ ಗಲಭೆ ನಡೆಸಿದ, ಆಸ್ತಿಗಳನ್ನು ಲೂಟಿ ಮಾಡಿದ, ಬೆಂಕಿ ಹಚ್ಚಿದ ಆರೋಪಗಳನ್ನು ಹೊರಿಸುವಂತೆ ದೆಹಲಿ ನ್ಯಾಯಾಲಯ ಶುಕ್ರವಾರ ತನಿಖಾ ತಂಡಕ್ಕೆ ಸೂಚಿಸಿದೆ.

‘ತಾಹಿರ್‌ ಕೇವಲ ದೆಹಲಿ ಗಲಭೆಗೆ ಸಂಚು ರೂಪಿಸಿದ್ದು ಮಾತ್ರವಲ್ಲದೇ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಹಿಂದೂ ಸಮುದಾಯಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಕಾನೂನುಬಾಹಿರವಾಗಿ ಸಭೆ ನಡೆಸಿ ಜನರನ್ನು ಗಲಭೆಗೆ ಪ್ರಚೋದಿಸಿದ್ದರು. ಹೀಗಾಗಿ ಕೇವಲ ಗಲಭೆಗೆ ಸಂಚು ರೂಪಿಸಿದ್ದು ಮಾತ್ರವಲ್ಲದೇ ಗಲಭೆ ನಡೆಸಿದ ಹಾಗೂ ಆಸ್ತಿಗಳಿಗೆ ಬೆಂಕಿ ಹಚ್ಚಿದ ಆರೋಪವನ್ನೂ ತಾಹಿರ್‌ ವಿರುದ್ಧ ದಾಖಲಿಸಬೇಕು’ ಎಂದು ಕೋರ್ಚ್‌ ಹೇಳಿದೆ.

ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ವೀರೇಂದ್ರ ಭಟ್‌ ಅವರು ತಾಹೀರ್‌ ಸೇರಿದಂತೆ ಅನಾಸ್‌, ಫಿರೋಜ್‌, ಜಾವೇದ್‌, ಗುಲ್ಫಾಮ್‌ ಹಾಗೂ ಸೋಹೇಬ್‌ ಆಲಂ ಎಂಬುವವರ ವಿರುದ್ಧ ಹಿಂದೂ ಸಮುದಾಯಗಳನ್ನು ಗುರಿಯಾಗಿಸಿ ಗಲಭೆ ನಡೆಸಿದ್ದು ಹಾಗೂ ಹಿಂದೂಗಳ ಆಸ್ತಿಗಳಿಗೆ ಬೆಂಕಿ ಹಚ್ಚುವಂತೆ ಸಂಚು ರೂಪಿಸಿದ ಆರೋಪ ದಾಖಲಿಸಲು ಆದೇಶಿಸಿದ್ದಾರೆ.

ದಿಲ್ಲಿ ಹಿಂಸೆ ವರದಿ: ಟೀವಿ ಚಾನೆಲ್‌ಗಳಿಗೆ ಕೇಂದ್ರದ ಎಚ್ಚರಿಕೆ

ಉಕ್ರೇನ್‌ ಯುದ್ಧ ಹಾಗೂ ದಿಲ್ಲಿ ನಗರದ ಜಹಾಂಗೀರ್‌ಪುರಿ ಕೋಮುಗಲಭೆ ಬಗ್ಗೆ ಟೀವಿ ಚಾನೆಲ್‌ಗಳು ನಡೆಸಿದ ವರದಿಗಾರಿಕೆ ಬಗ್ಗೆ ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಚೋದಕ ಹೆಡ್‌ಲೈನ್‌ಗಳು ಹಾಗೂ ಉತ್ಪ್ರೇಕ್ಷಿತ ವರದಿಗಾರಿಕೆಯ ಬಗ್ಗೆ ಕಟು ಶಬ್ದಗಳಲ್ಲಿ ಅದು ಚಾನೆಲ್‌ಗಳನ್ನು ತರಾಟೆಗೆ ತೆಗೆದುಕೊಂಡಿದೆ.

‘ಪರಮಾಣು ಪುಟಿನ್‌ ಸೇ ಜೆಲೆನ್‌ಸ್ಕಿ ಕೋ ಡಿಪ್ರೆಶನ್‌’ (ಪುಟಿನ್‌ರ ಅಣುಬಾಂಬ್‌ನಿಂದ ಜೆಲೆನ್‌ಸ್ಕಿಗೆ ಭಯ) ಹಾಗೂ ‘ಅಲಿ, ಬಲಿ ಔರ್‌ ಖಲ್‌ಬಲಿ’ (ಅಲಿ, ಬಲಿ ಮತ್ತು ಅಶಾಂತಿ) ಎಂಬ ಟೀವಿ ಚಾನೆಲ್‌ಗಳ ಹೆಡ್‌ಲೈನ್‌ಗಳನ್ನು ಪ್ರಸ್ತಾಪಿಸಿರುವ ಅದು, ‘ಚಾನೆಲ್‌ಗಳು ಘಟನಾವಳಿಗಳ ಬಗ್ಗೆ ತಪ್ಪು ವರದಿಗಾರಿಕೆ ಮಾಡುತ್ತಿವೆ. ಉಕ್ರೇನ್‌ ಯುದ್ಧದ ವರದಿಗಾರಿಕೆಯಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳ ಹೆಸರು ಹೇಳಿ ತಪ್ಪು ವರದಿಗಳನ್ನು ಪ್ರಸಾರ ಮಾಡುತ್ತಿವೆ. ಇನ್ನು ದಿಲ್ಲಿ ಜಹಾಂಗೀರ್‌ಪುರಿ ಘಟನೆಗೆ ಕೋಮು ಬಣ್ಣ ಹಚ್ಚುತ್ತಿವೆ’ ಎಂದು ಎಲ್ಲ ಉಪಗ್ರಹ ಚಾನೆಲ್‌ಗಳಿಗೆ ಬರೆದ ಪತ್ರದಲ್ಲಿ ವಾರ್ತಾ ಸಚಿವಾಲಯ ತಿಳಿಸಿದೆ.

‘ಜಹಾಂಗೀರ್‌ಪುರಿ ಹಿಂಸಾಚಾರ ಘಟನೆಯ ಟೀವಿ ಚರ್ಚೆಗಳು ಸ್ವೀಕಾರಾರ್ಹವಲ್ಲದ, ಅಸಂಸದೀಯ ಹಾಗೂ ಪ್ರಚೋದಕ ಭಾಷೆಗಳಿಂದ ಕೂಡಿದ್ದವು. ಆದರೆ ತಕ್ಷಣದಿಂದಲೇ ಇಂಥ ಯಾವುದೇ ವರದಿಗಾರಿಕೆ ಮಾಡಕೂಡದು. ಇಂಥ ವರದಿಗಾರಿಕೆಯು ಕೇಬಲ್‌ ಟೀವಿ ಜಾಲ ಕಾಯ್ದೆ-1995ರ ಉಲ್ಲಂಘನೆ ಆಗುತ್ತದೆ’ ಎಂದು ಅದು ಕಟು ಶಬ್ದಗಳಲ್ಲಿ ಎಚ್ಚರಿಸಿದೆ.

click me!