
ಮುಂಬೈ (ನ.19): ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಪ್ರಚಾರ ಸಮಾವೇಶವೊಂದರಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವಾಗ ‘ಪತ್ರಕರ್ತರು ಒಂದು ರೀತಿಯಲ್ಲಿ ಬಿಜೆಪಿ ಗುಲಾಮರು’ ಎಂದು ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿಯವರ ಹೇಳಿಕೆಯನ್ನು ಖಂಡಿಸಿರುವ ಮುಂಬೈ ಪ್ರೆಸ್ ಕ್ಲಬ್, ‘ಇಂತಹ ಮಾತು ಪತ್ರಕರ್ತರ ಸಮುದಾಯಕ್ಕೆ ಘಾಸಿ ಉಂಟುಮಾಡುತ್ತದೆ. ರಾಹುಲ್ ಯಾವತ್ತಾದರೂ ಭಾರತದಲ್ಲಿ ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳು, ಅವರಿಗಿರುವ ಕಷ್ಟಗಳಿಗೆ ಕಾರಣಗಳು ಹಾಗೂ ಒಟ್ಟಾರೆ ಪತ್ರಿಕೋದ್ಯಮದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರಾ’ ಎಂದು ಪ್ರಶ್ನಿಸಿದೆ.
Delhi air pollution crisis: ದೆಹಲಿಯಲ್ಲಿ 1 ದಿನ ವಾಸಿಸಿದರೆ 49 ಸಿಗರೇಟ್ ಸೇದಿದ್ದಕ್ಕೆ ಸಮ!
ರಾಹುಲ್ ಗಾಂಧಿ ಹೇಳಿದ್ದೇನು?:
ಶನಿವಾರ ಅಮರಾವತಿಯಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ‘ನಾನು ಮೀಸಲಾತಿ ಮಿತಿ ಹೆಚ್ಚಿಸಬೇಕು ಎಂದು ಹೇಳಿದರೆ ಪ್ರಧಾನಿ ಮೋದಿ ‘ರಾಹುಲ್ ಗಾಂಧಿ ಮೀಸಲಾತಿಗೆ ವಿರುದ್ಧವಾಗಿದ್ದಾರೆ’ ಎಂದು ಆರೋಪಿಸುತ್ತಾರೆ. ಅದನ್ನು ಮಾಧ್ಯಮಗಳೂ ಪ್ರಶ್ನಿಸದೆ ವರದಿ ಮಾಡುತ್ತವೆ. ಪತ್ರಕರ್ತರು ಬಿಜೆಪಿಗೆ ಸೇರಿದವರೇ ಆಗಿದ್ದಾರೆ. ಅವರು ನನ್ನನ್ನು ನೋಡಿ ನಕ್ಕಾಗ ನನಗೆ ‘ಹೌದೌದು, ನಾವು ಬಿಜೆಪಿಗೆ ಸೇರಿದವರು’ ಎಂದು ಹೇಳಿದಂತೆ ಅನ್ನಿಸುತ್ತದೆ. ಇದರಲ್ಲಿ ಅವರ ತಪ್ಪಿಲ್ಲ. ಅವರಿಗೆ ಕೆಲಸ ಬೇಕು, ಸಂಬಳ ಬೇಕು, ಮಕ್ಕಳನ್ನು ಸಾಕಬೇಕು, ಶಿಕ್ಷಣ ಕೊಡಿಸಬೇಕು, ಊಟ ಮಾಡಬೇಕು. ಅವರು ತಮ್ಮ ಮಾಲಿಕರ ವಿರುದ್ಧ ಕೆಲಸ ಮಾಡಲು ಸಾಧ್ಯವಿಲ್ಲ. ಒಂದು ರೀತಿಯಲ್ಲಿ ಅವರು ಗುಲಾಮರಿದ್ದಂತೆ’ ಎಂದು ಹೇಳಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ವರದಿಗಳನ್ನು ಉಲ್ಲೇಖಿಸಿ ಮುಂಬೈ ಪ್ರೆಸ್ ಕ್ಲಬ್ ಖಂಡನೆ ವ್ಯಕ್ತಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ