
ಉದಕಮಂಡಲಂ (ತಮಿಳುನಾಡು) (ಮೇ.21): ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಸೇರಿದಂತೆ ದೇಶಾದ್ಯಂತ 18 ಅಣುಸ್ಥಾವರ ಸ್ಥಾಪನೆಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಹಿರಿಯ ಪರಮಾಣು ವಿಜ್ಞಾನಿ, ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ, ಕನ್ನಡಿಗ ಎಂ.ಆರ್. ಶ್ರೀನಿವಾಸನ್ (95) ಮಂಗಳವಾರ ನಿಧನರಾಗಿದ್ದಾರೆ. ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಗಣ್ಯರು, ವಿಜ್ಞಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
1930ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಶ್ರೀನಿವಾಸನ್ ಬೆಂಗಳೂರು ಹಾಗೂ ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ್ದರು. ದೇಶದ ಪರಮಾಣು ಯೋಜನೆಗೆ ಸಂಬಂಧಿಸಿದ ಹಲವು ಪ್ರಾಜೆಕ್ಟ್ಗಳನ್ನು ಶ್ರೀನಿವಾಸನ್ ಪರಿಚಯಿಸಿದ್ದರು, ಅವರ ನಿಧನದ ಬಗ್ಗೆ ಹೇಳಿಕೆ ನೀಡಿರುವ ಪುತ್ರಿ ಶಾರದಾ, ’ಊಟಿಗೆ ತೆರಳಿದ್ದ ತಂದೆ ಸೋಮವಾರ ರಾತ್ರಿ ಹಠಾತ್ತನೆ ಅನಾರೋಗ್ಯಕ್ಕೆ ಒಳಗಾದರು ಮತ್ತು ಮಂಗಳವಾರ ಬೆಳಿಗ್ಗೆ 4 ಗಂಟೆಗೆ ಆಸ್ಪತ್ರೆಯಲ್ಲಿ ಶಾಂತಿಯುತವಾಗಿ ನಿಧನರಾದರು. ನಾವು ಅವರ ಪಾರ್ಥಿವ ಶರೀರ ತರಲು ಬೆಂಗಳೂರಿನಿಂದ ಹೋಗುತ್ತಿದ್ದೇವೆ’ ಎಂದಿದ್ದಾರೆ.
ಸಾಧಕ ಶ್ರೀನಿವಾಸನ್: 1955ರಲ್ಲಿ ಪರಮಾಣು ಇಂಧನ ಇಲಾಖೆ ಉದ್ಯೋಗಕ್ಕೆ ಸೇರಿದ್ದರು. ಆ ಬಳಿಕ ದೇಶ ಖ್ಯಾತ ಪರಮಾಣು ವಿಜ್ಞಾನಿಗಳಾಗಿದ್ದ ಡಾ. ಹೋಮಿ ಭಾಬಾ ಅವರೊಂದಿಗೆ ದೇಶದ ಮೊದಲ ಪರಮಾಣು ರಿಯಾಕ್ಟರ್ ಅಪ್ಸರಾ ನಿರ್ಮಾಣದಲ್ಲಿ ಕೆಲಸ ಮಾಡಿದ್ದರು. ಅವರು 1959ರಲ್ಲಿ ಮೊದಲ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣದ ಯೋಜನೆಯ ಎಂಜಿನಿಯರ್ ಆಗಿದ್ದರು.
ಇಂದಿರಾ ಗಾಂಧಿ ಕನಸು ಸಿದ್ದು ನನಸು: ಸಿಎಂಗೆ ರಾಹುಲ್ ಗಾಂಧಿ ಶ್ಲಾಘನೆ
1967ರಲ್ಲಿ ಮದ್ರಾಸ್ ಪರಮಾಣು ವಿದ್ಯುತ್ ಸ್ಥಾವರದ ಯೋಜನಾ ಎಂಜಿನಿಯರ್, ಅಣು ಶಕ್ತಿ ಆಯೋಗದ ಎಂಜಿನಿಯರ್ ಹುದ್ದೆ, ಡಿಎಇಯ ವಿದ್ಯುತ್ ಯೋಜನೆಗಳ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕ, ಅಣು ವಿದ್ಯುತ್ ಮಂಡಳಿ ಅಧ್ಯಕ್ಷ, ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿ, ಪರಮಾಣು ವಿದ್ಯುತ್ ನಿಗಮ ಲಿಮಿಟೆಡ್ (ಎನ್ಪಿಸಿಐಎಲ್) ಸ್ಥಾಪಕ ಅಧ್ಯಕ್ಷರು ಸೇರಿದಂತೆ ಹಲವಾರು ಜವಾಬ್ದಾರಿ ನಿರ್ವಹಿಸಿದ್ದರು. ಇನ್ನು ಅವರು ದೇಶದ ಪರಮಾಣು ಇಂಧನ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ