
ಬೆಂಗಳೂರು/ನವದೆಹಲಿ: ಸೆಪ್ಟೆಂಬರ್ 18 ರಿಂದ 22ರವರೆಗೆ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ‘ಮಹತ್ವದ ಅಂಶಗಳಿವೆ ಮತ್ತು ಅದನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು’ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಇದರ ನಡುವೆ ವಿಶೇಷ ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಸಂಸದರ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಈ ಎರಡೂ ವಿಷಯಗಳು ಈಗಲೇ ಸಂಸತ್ ಅಧಿವೇಶನದ ವಿಸರ್ಜನೆ ಆಗಬಹುದು ಹಾಗೂ ಅವಧಿಪೂರ್ವ ಚುನಾವಣೆ ನಡೆಯಬಹುದು ಎಂಬ ಚರ್ಚೆಗೆ ನಾಂದಿ ಹಾಡಿವೆ.
ಕೇಂದ್ರ ಸರ್ಕಾರ ಅಧಿವೇಶನದ ಅಜೆಂಡಾ ಪ್ರಕಟಿಸದೇ ರಹಸ್ಯ ಕಾಪಾಡಿಕೊಂಡಿದೆ ಹಾಗೂ ಕೊನೆಯ ಅಧಿವೇಶನದಲ್ಲಿ ಮಾಡಿದಂತೆ ಈ ಅಧಿವೇಶನದಲ್ಲೇ ಫೋಟೋ ಸೆಷನ್ ಹಮ್ಮಿಕೊಂಡಿದೆ. ಇದು ನಾನಾ ಊಹಾಪೋಹದ ಮೂಲವಾಗಿದೆ. ಇತ್ತೀಚೆಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಈ ಬಾರಿ ನಿಗದಿತ ಅವಧಿಗೂ ಮುನ್ನವೇ ಅಂದರೆ ಡಿಸೆಂಬರ್ನಲ್ಲಿ ಚುನಾವಣೆ ನಡೆಸಲು ಮೋದಿ ಸರ್ಕಾರ ಪ್ಲಾನ್ ಮಾಡಿದೆ ಎಂದಿದ್ದರು. ಹೀಗಾಗಿ ಈಗಿನ ವಿದ್ಯಮಾನಗಳನ್ನು ನೋಡಿದಾಗ ಇದು ಸಂಸತ್ತಿನ ಕೊನೆಯ ಅಧಿವೇಶನ ಆಗಿರಬಹುದು. ಪ್ರಲ್ಹಾದ್ ಜೋಶಿ ಹೇಳಿದಂತೆ ‘ಮಹತ್ವದ ಅಂಶ’ವು ಸಂಸತ್ ವಿಸರ್ಜನೆ ಆಗಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
ಇದನ್ನು ಓದಿ: ಒಂದು ದೇಶ - ಒಂದೇ ಚುನಾವಣೆ ಅಧ್ಯಯನಕ್ಕೆ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ: ವಿಶೇಷ ಅಧಿವೇಶನ ಕರೆದ ಬೆನ್ನಲ್ಲೇ ಘೋಷಣೆ
ಜೋಶಿ ಹೇಳಿದ್ದೇನು?:
ಶುಕ್ರವಾರ ಬೆಂಗಳೂರಿನಲ್ಲಿ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಜೋಶಿ ಅವರು ‘ನಾವು ಸಂಸತ್ತಿನ ಅಧಿವೇಶನ ಕರೆದಿದ್ದೇವೆ. ಇದು 5 ದಿನಗಳ ಪೂರ್ಣಾವಧಿ ಅಧಿವೇಶನವಾಗಿದ್ದು ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಈ ಪ್ರಕ್ರಿಯೆ ಅಂತಿಮ ಹಂತದ ತಯಾರಿಯಲ್ಲಿದೆ ಮತ್ತು ಶೀಘ್ರವೇ ಅದನ್ನು ಪ್ರಕಟಿಸಲಾಗುವುದು’ ಎಂದರು.
ಇನ್ನು ಜೈಪುರದಲ್ಲಿ ಮಾತನಾಡಿದ ಅವರು, ‘ಏಕದೇಶ ಏಕ ಚುನಾವಣೆ ಬಗ್ಗೆ ಕೋವಿಂದ್ ಸಮಿತಿ ವರದಿ ನೀಡಿದ ನಂತರ ಅದನ್ನು ಸಂಸತ್ತಿನಲ್ಲಿ ಹಾಗೂ ಸಾರ್ವಜನಿಕವಾಗಿ ಚರ್ಚಿಸಲಾಗುವುದು’ ಎಂದರು.
ಕೇಂದ್ರ ಸರ್ಕಾರವು ಈವರೆಗೂ ಈ ಅಧಿವೇಶನದ ಅಜೆಂಡಾ ಏನು ಎಂದು ಬಾಯಿಬಿಟ್ಟಿಲ್ಲ.
ಒನ್ ಇಂಡಿಯಾ ಒನ್ ಎಲೆಕ್ಷನ್ಗೆ ಮುಂದಾಯ್ತಾ ಕೇಂದ್ರ ಸರ್ಕಾರ? ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ