- ಈ ವರ್ಷದ ಉಳಿದ ಅವಧಿಗೆ 2 ಕೋಟಿ ರು. ನೀಡಿಕೆ
- ಮುಂದಿನ ವರ್ಷದಿಂದ ಯಥಾರೀತಿ 5 ಕೋಟಿ ರು.
- ಕೇಂದ್ರ ಸಚಿವ ಸಂಪುಟ ನಿರ್ಧಾರ
- ಕೋವಿಡ್ ಕಾರಣ ಸ್ಥಗಿತಗೊಂಡಿದ್ದ ಸಂಸದರ ನಿಧಿ
ನವದೆಹಲಿ(ನ.11): ಕೋವಿಡ್-19 ಹಾವಳಿ(Coronavirus) ಆರಂಭವಾದ ನಂತರ ಸ್ಥಗಿತಗೊಂಡಿದ್ದ ಸಂಸದರ ಪ್ರದೇಶಾಭಿವೃದ್ಧಿ ನಿಧಿಗೆ (MPLAD) ಮರುಚಾಲನೆ ನೀಡಲು ಕೇಂದ್ರ ಸಚಿವ ಸಂಪುಟ(Cabinet) ನಿರ್ಧಾರ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ(PM Narendra Modi) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್(Anurag Thakur) ಅವರು, 2021-22ನೇ ಸಾಲಿನ ಉಳಿದ ಭಾಗದಲ್ಲಿ ಯೋಜನೆಗೆ ಮರುಚಾಲನೆ ನೀಡಲಾಗುವುದು. ಈ ಅವಧಿಯಲ್ಲಿ 2 ಕೋಟಿ ರು. ನಿಧಿಯನ್ನು ಮಾತ್ರ ನೀಡಲಾಗುವುದು. 2025-26ರವರೆಗೆ ಯೋಜನೆ ಮುಂದುವರಿಯಲಿದೆ ಎಂದು ಪ್ರಕಟಿಸಿದರು.
2022-23ರಿಂದ ಎಂದಿನಂತೆ ವರ್ಷಕ್ಕೆ 5 ಕೋಟಿ ರು. ನಿಧಿಯನ್ನು ನೀಡಲಾಗುವುದು. ಇದನ್ನು 2.5 ಕೋಟಿ ರು.ನಂತೆ 2 ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಕಳೆದ ವರ್ಷ ಏಪ್ರಿಲ್ನಲ್ಲಿ ದೇಶದಲ್ಲಿ ಕೋವಿಡ್ ಮೊದಲ ಅಲೆ ಕಾಣಿಸಿಕೊಂಡಿತ್ತು. ಆಗ 2020-21 ಹಾಗೂ 2021-22ರ ಸಂಸದರ ನಿಧಿಯನ್ನು ಅಮಾನತು ಮಾಡಲಾಗುವುದು ಹಾಗೂ ಈ ಹಣವನ್ನು ಕೊರೋನಾ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಈ ಪ್ರಕಾರ ಈವರೆಗೆ ಸಂಗ್ರಹವಾದ 7900 ಕೋಟಿ ರು.ಗಳನ್ನು ಕೊರೋನಾ ನಿಯಂತ್ರಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗಿದೆ. ಸಂಸದರ ನಿಧಿಯನ್ನು ಸಂಸದರು ತಮ್ಮ ಕ್ಷೇತ್ರದಲ್ಲಿನ ಅಭಿವೃದ್ಧಿ ಚಟುವಟಿಕೆಗಳಿಗೆ ನೀಡಬಹುದಾಗಿದೆ.
ಸಂಸದರ ನಿಧಿ ಬಳಕೆ: ಪ್ರತಾಪ್ ಸಿಂಹ ಫಸ್ಟ್, ಸುಮಲತಾ ದ್ವಿತೀಯ!
ಯೋಜನೆಯ ವಿವರಗಳು:
ಎಂಪಿ ಲಾಡ್ಸ್ ಕೇಂದ್ರ ವಲಯದ ಯೋಜನೆಯಾಗಿದ್ದು, ಭಾರತ ಸರ್ಕಾರದಿಂದ ಸಂಪೂರ್ಣವಾಗಿ ಧನಸಹಾಯ ನೀಡಲಾಗುತ್ತದೆ. ಕುಡಿಯುವ ನೀರು, ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಮತ್ತು ರಸ್ತೆಗಳು ಮುಂತಾದ ಕ್ಷೇತ್ರಗಳಲ್ಲಿ ದೀರ್ಘಕಾಲ ಬಾಳಿಕೆ ಬರುವ ಸಾಮುದಾಯಿಕ ಸ್ವತ್ತುಗಳ ಸೃಷ್ಟಿಗೆ ಒತ್ತು ನೀಡುವ ಅಭಿವೃದ್ಧಿ ಸ್ವರೂಪದ ಕೆಲಸಗಳನ್ನು ಶಿಫಾರಸು ಮಾಡಲು ಸಂಸದರಿಗೆ ಅನುವು ಮಾಡಿಕೊಡುವುದು ಈ ಯೋಜನೆಯ ಉದ್ದೇಶವಾಗಿದೆ.
ಪ್ರತಿ ಸಂಸದರ (ಎಂಪಿ) ಕ್ಷೇತ್ರಕ್ಕೆ ವಾರ್ಷಿಕ ಎಂಪಿ ಲಾಡ್ಸ್ ನಿಧಿಯು 5 ಕೋಟಿ ರೂ.ಗಳಾಗಿರುತ್ತದೆ, ಎಂಪಿ ಲಾಡ್ಸ್ ಮಾರ್ಗಸೂಚಿಗಳ ಪ್ರಕಾರ ಷರತ್ತುಗಳ ಈಡೇರಿಕೆಗೆ ಒಳಪಟ್ಟು ತಲಾ 2.5 ಕೋಟಿ ರೂ.ಗಳ ಎರಡು ಕಂತುಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಸಮಾಜದಲ್ಲಿ ಕೋವಿಡ್ -19ರ ಆರೋಗ್ಯ ಮತ್ತು ಪ್ರತಿಕೂಲ ಪರಿಣಾಮಗಳನ್ನು ನಿರ್ವಹಿಸಲು, 2020-21 ಮತ್ತು 2021-22 ನೇ ಹಣಕಾಸು ವರ್ಷದಲ್ಲಿ ಎಂಪಿ ಲಾಡ್ಸ್ ಅನ್ನು ನಿರ್ವಹಿಸದಿರಲು ಮತ್ತು ಕೋವಿಡ್ -19 ಸಾಂಕ್ರಾಮಿಕದ ಪರಿಣಾಮಗಳನ್ನು ನಿರ್ವಹಿಸಲು ಹಣಕಾಸು ಸಚಿವಾಲಯದ ಬಳಿ ನಿಧಿ ಇಟ್ಟುಕೊಳ್ಳಲು ಸಂಪುಟವು 2020ರ ಏಪ್ರಿಲ್ 6 ರಂದು ನಡೆದ ಸಭೆಯಲ್ಲಿ ನಿರ್ಧರಿಸಿತ್ತು.
ದೇಶವು ಈಗ ಆರ್ಥಿಕ ಚೇತರಿಕೆಯ ಹಾದಿಯಲ್ಲಿರುವುದರಿಂದ ಮತ್ತು ಈ ಯೋಜನೆಯು ಬಾಳಿಕೆ ಬರುವ ಸಾಮುದಾಯಿಕ ಸ್ವತ್ತುಗಳ ಸೃಷ್ಟಿಗೆ ಪ್ರಯೋಜನಕಾರಿಯಾಗಿ ಮುಂದುವರೆದಿದೆ, ಸಮುದಾಯದ ಸ್ಥಳೀಯವಾಗಿ ಅಗತ್ಯವೆಂದು ಭಾವಿಸಲಾದ ಆಕಾಂಕ್ಷೆಗಳನ್ನು ಪೂರೈಸುವಲ್ಲಿ, ದೇಶಾದ್ಯಂತ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಗಳ ಸೃಷ್ಟಿಗೆ, ಆ ಮೂಲಕ ಆತ್ಮ ನಿರ್ಭರ ಭಾರತದ ಉದ್ದೇಶವನ್ನು ಸಾಧಿಸಲು ಸಹಕಾರಿಯಾಗಿದೆ. ಅದರಂತೆ, ಕೇಂದ್ರ ಸಚಿವ ಸಂಪುಟವು ಈಗ 2021-22ರ ಹಣಕಾಸು ವರ್ಷದ ಉಳಿದ ಭಾಗದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂಪಿ ಲಾಡ್ಸ್) ಮರುಸ್ಥಾಪಿಸಲು ಮತ್ತು 15ನೇ ಹಣಕಾಸು ಆಯೋಗದ ಅವಧಿಯವರೆಗೆ ಅಂದರೆ 2025-26ರವರೆಗೆ ಎಂಪಿ ಲಾಡ್ಸ್ ಅನ್ನು ಮುಂದುವರಿಸಲು ನಿರ್ಧರಿಸಿದೆ.
ಕೊರೋನಾ ಆತಂಕ: ಸಂಸದರ ನಿಧಿ ಪಿಎಂ ಫಂಡ್ಗೆ ಸಿದ್ದರಾಮಯ್ಯ ಆಕ್ರೋಶ
2021-22ನೇ ಹಣಕಾಸು ವರ್ಷದ ಉಳಿದ ಅವಧಿಗೆ ಪ್ರತಿ ಸಂಸದರಿಗೆ 2 ಕೋಟಿ ರೂ.ಗಳ ದರದಲ್ಲಿ ಮತ್ತು 2022-23ರಿಂದ 2025-26ನೇ ಹಣಕಾಸು ವರ್ಷಗಳಲ್ಲಿ ಸಂಸದರಿಗೆ ವಾರ್ಷಿಕ 5.00 ಕೋಟಿ ರೂ.ಗಳ ದರದಲ್ಲಿ ತಲಾ 2.5 ಕೋಟಿ ರೂ.ಗಳ ಕಂತಿನಲ್ಲಿ ಸಚಿವಾಲಯವು ಎಂಪಿ ಲಾಡ್ಸ್ ನಿಧಿಯನ್ನು ಬಿಡುಗಡೆ ಮಾಡಲಿದೆ. ಯೋಜನೆ ಪ್ರಾರಂಭವಾದಾಗಿನಿಂದ, ಒಟ್ಟು 19,86,206 ಕಾಮಗಾರಿಗಳು/ಯೋಜನೆಗಳು ಪೂರ್ಣಗೊಂಡಿದ್ದು, ಇದರ ಆರ್ಥಿಕ ವೆಚ್ಚ 54171.09 ಕೋಟಿ ರೂ. ಆಗಿದೆ.
ಆರ್ಥಿಕ ಪರಿಣಾಮ:
2021-22ರ ಹಣಕಾಸು ವರ್ಷದ ಉಳಿದ ಭಾಗ ಮತ್ತು 2025-26ರ ವರೆಗಿನ ಎಂಪಿ ಲಾಡ್ಸ್ ನ ಮರು ಸ್ಥಾಪನೆ ಮತ್ತು ಮುಂದುವರಿಕೆಗೆ ಒಟ್ಟು ಆರ್ಥಿಕ ಪರಿಣಾಮ 17417.00 ಕೋಟಿ ರೂ. ಆಗಿದೆಯ
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:
ಎಂಪಿ ಲಾಡ್ ಯೋಜನೆಯು ಮಾರ್ಗಸೂಚಿಗಳ ಒಂದು ಸಮೂಹದಿಂದ ನಿಯಂತ್ರಿಸಲ್ಪಡುತ್ತದೆ, ಅವುಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ.
ಎಂಪಿ ಲಾಡ್ಸ್ ಅಡಿಯಲ್ಲಿ ಪ್ರಕ್ರಿಯೆಯು ಸಂಸದರು ನೋಡಲ್ ಜಿಲ್ಲಾ ಪ್ರಾಧಿಕಾರಕ್ಕೆ ಕಾಮಗಾರಿಗಳನ್ನು ಶಿಫಾರಸು ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಸಂಬಂಧಪಟ್ಟ ನೋಡಲ್ ಜಿಲ್ಲೆಯು ಸಂಸದರು ಶಿಫಾರಸು ಮಾಡಿದ ಅರ್ಹ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮತ್ತು ಕಾರ್ಯಗತಗೊಳಿಸಿದ ವೈಯಕ್ತಿಕ ಕಾಮಗಾರಿಗಳ ವಿವರಗಳನ್ನು ಮತ್ತು ಯೋಜನೆಯಡಿ ಖರ್ಚು ಮಾಡಿದ ಮೊತ್ತವನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸುತ್ತದೆ.
ಪರಿಣಾಮ:
ಹಿನ್ನೆಲೆ: