
ನವದೆಹಲಿ: ನೀಟ್ ಪರೀಕ್ಷೆ ಅಕ್ರಮ (NEET Exam Scam) ಸಂಸತ್ನಲ್ಲಿ ಸದ್ದು ಮಾಡುತ್ತಿದೆ. ವಿರೋಧ ಪಕ್ಷದ ನಾಯಕರು ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಇಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಸಂಸದೆ ಪ್ರಿಯಾಂಕಾ ಚತುರ್ವೇದಿ, ನೀಟ್ ಪರೀಕ್ಷೆಯ ವಿಚಾರವಾಗಿ ಮಾತನಾಡುವ ಸಂದರ್ಭದಲ್ಲಿ ಆರ್ಎಸ್ಎಸ್ ಹೆಸರು ಉಲ್ಲೇಖ ಮಾಡಿದ್ದಕ್ಕೆ ಸಭಾಪತಿ ಜಗದೀಪ್ ಧನಖರ್ ವಿರೋಧ ವ್ಯಕ್ತಪಡಿಸಿದರು. ಇದರಿಂದ ಉದ್ದವ್ ಠಾಕ್ರೆ ಬಣದ ಸಂಸದರು ಸಭಾತ್ಯಾಗ ಮಾಡಿದರು. ಸಂಸತ್ ಹೊರಗೆ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಸಂಸದೆ ಪ್ರಿಯಾಂಕಾ ಚತುರ್ವೇದಿ ಅಸಮಾಧಾನ ಹೊರ ಹಾಕಿದರು.
ನಾನು ಸದನದಲ್ಲಿ ನೀಟ್ ವಿಷಯವನ್ನು ಪ್ರಸ್ತಾಪಿಸಿದ್ದೆ. ಎನ್ಟಿಎ ಅಧ್ಯಕ್ಷರು ಆರ್ಎಸ್ಎಸ್ ವಿಚಾರಧಾರೆಯುಳ್ಳವರಾಗಿದ್ದಾರೆ. ಹಾಗಾಗಿ ನಾನು ಪೇಪರ್ ಲೀಕ್ ಸಂಬಂಧ ಎನ್ಟಿಎಸ್ ಅಧ್ಯಕ್ಷರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಳಬೇಕಿತ್ತು. ಆದ್ರೆ ಅದಕ್ಕೂ ಮೊದಲೇ ನಮ್ಮನ್ನು ತಡೆಯುವ ಪ್ರಯತ್ನ ನಡೆಯುತ್ತದೆ. ಹಾಗಾಗಿ ಇದನ್ನು ವಿರೋಧಿಸಿ ನಾವು ಸಭಾತ್ಯಾಗ ಮಾಡಿದ್ದೇವೆ. ನಮ್ಮ ಪ್ರತಿ ಪ್ರಶ್ನೆಗಳಿಗೆ ಸೆನ್ಸಾರ್ ಹಿಡಿಯುವ ಕೆಲಸ ಮಾಡಲಾಗುತ್ತದೆ ಎಂದು ಪ್ರಿಯಾಂಕಾ ಚತುರ್ವೇದಿ ಆರೋಪಿಸಿದರು.
ಆರು ಜನರ ನಿಯಂತ್ರಣದಲ್ಲಿರೋ ಚಕ್ರವ್ಯೂಹದಲ್ಲಿ ದೇಶ ಸಿಲುಕಿದೆ: ರಾಹುಲ್ ಗಾಂಧಿ
ಆರ್ಎಸ್ಎಸ್ ವಿಶ್ವಾಸರ್ಹ ಸಂಸ್ಥೆ ಎಂದು ಹೇಳಿ ಸರ್ಕಾರಿ ಅಧಿಕಾರಿಗಳಿಗೆ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ. ಹಾಗಾದ್ರೆ ಆರ್ಎಸ್ ಎಸ್ ಬಗ್ಗೆ ಮಾತನಾಡಲು ನಮ್ಮನ್ನು ತಡೆಯುವ ಕೆಲಸ ಆಗುತ್ತಿರೋದು ಯಾಕೆ ಎಂದು ಪ್ರಿಯಾಂಕಾ ಚತುರ್ವೇದಿ ಪ್ರಶ್ನೆ ಮಾಡಿದರು.
ಪ್ರಿಯಾಂಕಾ ಚತುರ್ವೇದಿ ಬಳಿಕ ಪ್ರಶ್ನೋತ್ತರ ಸಮಯದಲ್ಲಿ ಸಮಾಜವಾದಿ ಪಕ್ಷದ ಸಂಸದ ಲಾಲ್ ಜೀ ಸುಮನ್ ಸಹ ರಾಜ್ಯಸಭೆಯಲ್ಲಿ ಎನ್ಟಿಎ ವಿಷಯವಾಗಿ ಮಾತನಾಡುವಾಗ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಉತ್ತರ ನೀಡಿದ ಸಭಾಪತಿಗಳು, ಆರ್ಎಸ್ಎಸ್ ಒಂದು ರಾಷ್ಟ್ರೀಯ ಕಲ್ಯಾಣಕ್ಕೆ ಮತ್ತು ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಸಂಸ್ಥೆಯಾಗಿದೆ. ಹಾಗಾಗಿ ಎಲ್ಲರೂ ಈ ಬಗ್ಗೆ ಹೆಮ್ಮೆಪಡಬೇಕು. ಆರ್ಎಸ್ಎಸ್ ವಿಶ್ವಾಸರ್ಹತೆಗೆ ಸಾಟಿಯೇ ಇಲ್ಲ. ಇದೊಂದು ಜಾಗತಿಕಮಟ್ಟದ ಚಿಂತಕರ ಚಾವಡಿಯಾಗಿದೆ ಎಂದರು.
Wayanad Landslides: ಜನ ಅಲ್ಲಿ ಸಾಯ್ತಿದ್ದಾರೆ, ನೀವು ನಗ್ತಿದ್ದೀರಾ? ಸಭಾಪತಿ-ಖರ್ಗೆ ನಡುವೆ ವಾಕ್ಸಮರ
ನಿಸ್ವಾರ್ಥದಿಂದ ದೇಶ ಸೇವೆ ಮಾಡುವ ಮನೋಭಾವ ಹೊಂದಿರುವ ಜನರು ಆರ್ಎಸ್ಎಸ್ ನಲ್ಲಿರುತ್ತಾರೆ. ಇಲ್ಲಿರುವ ವ್ಯಕ್ತಿಗಳು ದೇಶಸೇವೆಗೆ ಪ್ರತಿಬದ್ಧರಾಗಿರುತ್ತಾರೆ. ಸಂವಿಧಾನದ ಅಡಿಯಲ್ಲಿ ಇಂತಹ ಸಂಘಟನೆಯನ್ನು ಪ್ರತ್ಯೇಕಿಸಲು ನಾನು ಅನುಮತಿ ನೀಡಲ್ಲ. ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡಲು ಆರ್ಎಸ್ಎಸ್ಗೆ ಸಂಪೂರ್ಣ ಹಕ್ಕಿದೆ. ರಾಷ್ಟ್ರದ ಅಭಿವೃದ್ಧಿ ತೊಡಗಿಕೊಳ್ಳಲು ಆರ್ಎಸ್ಎಸ್ ಗೆ ಸಂಪೂರ್ಣ ಸಾಂವಿಧಾನಿಕ ಅಧಿಕಾರವಿದೆ ಎಂದು ಜಗದೀಪ್ ಧನಕರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ