
ನವದೆಹಲಿ(ಫೆ.07): ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಸೋಮವಾರ ಸಂಜೆ ಲೋಕಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಈ ಮೂಲಕ ರಾಷ್ಟ್ರಪತಿಗಳ ವಂದನಾ ನಿರ್ಣಯಕ್ಕೆ(Motion of Thanks to President address) ಉತ್ತರ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರ ಈ ಹಿಂದಿನ ಭಾಷಣಕ್ಕೂ ಪ್ರತ್ಯುತ್ತರ ಕೊಡುವ ಸಾಧ್ಯತೆ ಇದೆ. ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ವೀರಾವೇಶದಿಂದ ಮಾತಾಡಿದ್ದ ರಾಹುಲ… ಗಾಂಧಿ, ‘ಕೇಂದ್ರ ಸರ್ಕಾರ ರಾಜ್ಯಗಳ ಒಕ್ಕೂಟ ಧ್ವನಿಯನ್ನು ಹತ್ತಿಕ್ಕುತ್ತಿದೆ. ದೇಶದಲ್ಲಿ ಬಿಜೆಪಿ ಆಳ್ವಿಕೆಯಲ್ಲಿ ರಾಜನ ಪರಿಕಲ್ಪನೆ ಮರುಕಳಿಸುತ್ತಿದೆ’ ಎಂದು ಗಂಭೀರ ಆರೋಪ ಮಾಡಿದ್ದರು.
ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್(Ram Nath Kovind) ಅವರು ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಕಳೆದ ಜ.31ರಂದು ಭಾಷಣ ಮಾಡಿದ್ದರು. ರಾಷ್ಟ್ರಪತಿ ವಂದನಾ ನಿರ್ಣಯ ಚರ್ಚೆಯಲ್ಲಿ ರಾಹುಲ್ ಸೃಷ್ಟಿಸಿದ ವಿವಾದಕ್ಕೂ ಮೋದಿ ತಿರುಗೇಟು ನೀಡುವ ಸಾಧ್ಯತೆ ಇದೆ.
UP Elections : ಬಿಜೆಪಿಗೆ ಇರುವ ಬೆಂಬಲ ಕಂಡು ಎದುರಾಳಿಗಳಿಗೆ ಕನಸಿನಲ್ಲಿ ಕೃಷ್ಣ ಬರಲು ಆರಂಭಿಸಿದ್ದಾನೆ!
ರಾಷ್ಟ್ರಪತಿ ಭಾಷಣ ವಂದನಾ ನಿರ್ಣಯ ಚರ್ಚೆ, ರಾಹುಲ್ ಗಾಂಧಿ ವಿವಾದ:
ರಾಷ್ಟ್ರಪತಿ ಭಾಷಣ ಕುರಿತು ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ‘ರಾಜ್ಯಗಳ ಒಕ್ಕೂಟದ ದನಿ ಅಡಗಿಸಲು ಕೇಂದ್ರ ಸರ್ಕಾರವು ನ್ಯಾಯಾಂಗ ವ್ಯವಸ್ಥೆ, ಚುನಾವಣಾ ಆಯೋಗ ಹಾಗೂ ಪೆಗಾಸಸ್ ಸ್ಪೈವೇರ್ಗಳನ್ನು ಸಾಧನವಾಗಿ ಬಳಸಿಕೊಳ್ಳುತ್ತಿದೆ’ ಎಂದು ಅವರು ಲೋಕಸಭೆಯಲ್ಲಿ ಹೇಳಿದ್ದು ತೀವ್ರ ಪ್ರತಿರೋಧಕ್ಕೆ ಕಾರಣವಾಗಿದೆ. ಇದು ನ್ಯಾಯಾಂಗ ವ್ಯವಸ್ಥೆ ಹಾಗೂ ಚುನಾವಣಾ ಆಯೋಗಕ್ಕೆ ಮಾಡಿದ ಅವಮಾನ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸೇರಿದಂತೆ ಆಡಳಿತಾರೂಢ ಬಿಜೆಪಿಯ ಅನೇಕ ನಾಯಕರು ಟೀಕಿಸಿದ್ದಾರೆ. ಕೂಡಲೇ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.
1947ರಲ್ಲಿ ನಾವು ರಾಜಪ್ರಭುತ್ವದ ಪರಿಕಲ್ಪನೆಯನ್ನು ಬಿಟ್ಟು, ರಾಜ್ಯಗಳ ಒಕ್ಕೂಟದ ಪರಿಕಲ್ಪನೆಯನ್ನು ಆಯ್ದುಕೊಂಡಿದ್ದೆವು. ಆದರೆ ಬಿಜೆಪಿ ಆಳ್ವಿಕೆಯಲ್ಲಿ ರಾಜನ ಪರಿಕಲ್ಪನೆ ಮರುಕಳಿಸುತ್ತಿದೆ’ ಎಂದು ಪ್ರಧಾನಿಯ ಹೆಸರೆತ್ತದೇ ಪರೋಕ್ಷವಾಗಿ ಕಿಡಿಕಾರಿದರು. ‘ಭಾರತವು ಒಂದು ‘ದೇಶ’ ಅಲ್ಲ ‘ರಾಜ್ಯಗಳ ಒಕ್ಕೂಟ’ ಎಂದು ಸಂವಿಧಾನವೇ ಹೇಳುತ್ತದೆ. ಯಾವುದೇ ಒಬ್ಬ ವ್ಯಕ್ತಿ ಇಡೀ ದೇಶದ ಮೇಲೆ ಪ್ರಭುತ್ವ ಸಾಧಿಸಲು ಆಗದು. ದೇಶದಲ್ಲಿ ಬಹುಸಂಸ್ಕೃತಿ ಹಾಗೂ ಬಹುಭಾಷೆ ಇವೆ. ಇವನ್ನು ದಮನಿಸಲು ಆಗದು. ಇದು ಒಂದು ಒಕ್ಕೂಟ ವ್ಯವಸ್ಥೆಯೇ ಹೊರತು ಸಾಮ್ರಾಜ್ಯವಲ್ಲ’ ಎಂದರು.
Hijab Row ಶಿಕ್ಷಣಕ್ಕೆ ಹಿಜಾಬ್ ಅಗತ್ಯವಿಲ್ಲ, ರಾಹುಲ್ ಗಾಂಧಿ ಭಾರತದ ಭವಿಷ್ಯಕ್ಕೆ ಅಪಾಯಕಾರಿ, ಬಿಜೆಪಿ ತಿರುಗೇಟು!
ರಾಹುಲ್ ಹೇಳಿಕೆ ಅನುಮೋದಿಸಲ್ಲ, ಅಮೆರಿಕ ಸ್ಪಷ್ಟನೆ:
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಗಳು ಚೀನಾ ಹಾಗೂ ಪಾಕಿಸ್ತಾನವನ್ನು ಭಾರತ ವಿರುದ್ಧ ಒಗ್ಗೂಡಿಸಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಬುಧವಾರ ಮಾಡಿದ ಭಾಷಣ ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಹೇಳಿಕೆಯನ್ನು ಅನುಮೋದಿಸುವುದಿಲ್ಲ ಎಂದು ಅಮೆರಿಕ ಹಾಗೂ ಹಲವು ಹಿರಿಯ ರಾಜತಂತ್ರಜ್ಞರು ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಬುಧವಾರ ಲೋಕಸಭೆಯಲ್ಲಿ ಮಾತನಾಡಿದ್ದ ರಾಹುಲ್, ಚೀನಾ ಹಾಗೂ ಪಾಕಿಸ್ತಾನವನ್ನು ಪರಸ್ಪರ ದೂರ ಇಡುವುದು ಭಾರತದ ವ್ಯೂಹಾತ್ಮಕ ಗುರಿ. ಆದರೆ ಈ ಸರ್ಕಾರ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಎರಡು ಶತ್ರುಗಳ ಪರಿಕಲ್ಪನೆಯನ್ನು ಮರೆತು ಒಂದೇ ಶತ್ರುವಾಗಿಸಿದೆ. ಚೀನಾ ಹಾಗೂ ಪಾಕಿಸ್ತಾನದ ಯೋಜನೆಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತಿದೆ. ಆ ದೇಶಗಳು ಹೇಗೆ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿವೆ ನೋಡಿ. ಅವರ ಚಟುವಟಿಕೆ ನೋಡಿ. ಹೇಗೆ ಮಾತನಾಡುತ್ತಿದ್ದಾರೆ ನೋಡಿ ಎಂದು ಹೇಳಿದ್ದರು.
ಇದನ್ನು ಒಪ್ಪಲ್ಲ- ಅಮೆರಿಕ:
ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಗಳು ಚೀನಾ ಹಾಗೂ ಪಾಕಿಸ್ತಾನವನ್ನು ಭಾರತ ವಿರುದ್ಧ ಒಗ್ಗೂಡಿಸಿವೆ ಎಂಬ ರಾಹುಲ್ ಹೇಳಿಕೆಯನ್ನು ಅನುಮೋದಿಸುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ. ತಮ್ಮ ಸಂಬಂಧದ ಕುರಿತು ಪಾಕಿಸ್ತಾನ ಹಾಗೂ ಚೀನಾಗಳೇ ಹೇಳಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ