
ಭೋಪಾಲ್: ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೋರ್ವ ದುರ್ಯೋಧನನಂತೆ 5 ಗಂಟೆಗಳ ಕಾಲ ಕೆರೆಯೊಳಗೆ ನೀರಿನ ಒಳಗೆ ಅಡಗಿ ಕುಳಿತಂತಹ ವಿಚಿತ್ರ ಘಟನೆ ನಡೆದಿದೆ. ಕಡೆಗೂ ಆತನನ್ನು ಹೆಡೆಮುರಿ ಕಟ್ಟಿ ನೀರಿನಿಂದ ಹೊರ ತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವಿಚಿತ್ರ ಘಟನೆಯ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ...
ಆ ಕಳ್ಳ ರೈಲಿನಲ್ಲಿ ಮಹಿಳಾ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಅಂತಾರಾಜ್ಯ ಕಳ್ಳ, ರೈಲಿನ ಬೋಗಿಗಳೇ ಆತನ ಟಾರ್ಗೆಟ್ ಆಗಿತ್ತು. ಐದಕ್ಕೂ ಹೆಚ್ಚು ರಾಜ್ಯಗಳ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಕಳ್ಳ ಬಹಳ ಚಾಲಾಕಿ ಯಾರ ಕೈಗೂ ಸಿಗದೇ ಕಳ್ಳತನ ಮಾಡುತ್ತಲೇ ಎಸ್ಕೇಪ್ ಆಗುತ್ತಲೇ ಇದ್ದ. ಆದರೆ ಅಂದು ಮಾತ್ರ ಆತನ ಗೃಹಚಾರ ಕೆಟ್ಟಿತ್ತೆಂದು ಕಾಣಿಸುತ್ತೆ. ಹಲವು ಸಾಹಸಮಯ ಪ್ರಯತ್ನಗಳ ಬಳಿಕವೂ ಆತನನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಏಪ್ರಿಲ್ 6ರಂದು ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕೆ ಮಾಡಿದ ಕಳ್ಳನ ರೋಚಕ ಸಾಹಸದ ಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮಾತಿಲ್ಲ, ಕಿವಿನೂ ಕೇಳಲ್ಲಾಆದ್ರೂ ಕೊಲೆ ಮಾಡಿದ್ರು : ವಾಕ್ ಮತ್ತು ಶ್ರವಣ ಸಂಸ್ಥೆ ನೆರವಿನಿಂದ ಹಂತಕರ ಬೇಟೆಯಾಡಿದ ಪೊಲೀಸರು!
ಪೊಲೀಸ್ ಅಧಿಕಾರಿಗಳ ಪ್ರಕಾರ, ರೈಲ್ವೆ ರಕ್ಷಣಾ ಪಡೆ (Railway Protection Force)ಗೆ ನಸುಕಿನ ಜಾವದ ಸಮಯದಲ್ಲಿ ಕಳ್ಳನೋರ್ವ ರೇವಾ-ಇಟ್ವಾರಿ ಎಕ್ಸ್ಪ್ರೆಸ್ನ ಎ -2 ಕೋಚ್ ಒಳಗೆ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆತನನ್ನು ಸೆರೆಹಿಡಿಯುವುದಕ್ಕೆ ಪೊಲೀಸರು ಸಿಹೋರಾ ರೈಲು ನಿಲ್ದಾಣದಲ್ಲಿ ಬಲೆ ಬೀಸಿದ್ದರು. ಪೊಲೀಸರು ಇನ್ನೇನು ಆತನ ಸಮೀಪ ತಲುಪಬೇಕು ಅನ್ನುವಷ್ಟರಲ್ಲಿ ಆ ಕಳ್ಳ ರೈಲಿನಿಂದ ಹಾರಿ ಟ್ರ್ಯಾಕ್ಗಳಲ್ಲಿ ಓಡಿದ್ದಾನೆ. ಅಲ್ಲದೇ ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆತ ಅಲ್ಲೇ ಸಮೀಪದಲ್ಲಿದ್ದ ಕೆರೆಗೆ ಹಾರಿದ್ದಾನೆ. ಆದರೆ ಮುಂದಾಗಿದ್ದೇನು?
ಇತ್ತ ರೈಲಿನಿಂದ ಹಾರಿದ ಕಳ್ಳನನ್ನು ಪೊಲೀಸರು ಚೇಸ್ ಮಾಡುತ್ತಾ ಹೋಗಿದ್ದಾರೆ. ಆದರೆ ಆ ಕಳ್ಳ ಕೆರೆಗೆ ಹಾರಿ ಸುಳಿವೆ ಇಲ್ಲದಂತೆ ಮಾಯವಾಗಿದ್ದಾನೆ. ಇದರಿಂದ ಕೆಲ ಕಾಲ ಪೊಲೀಸರೇ ಗೊಂದಲಕ್ಕೊಳಗಾಗಿದ್ದಾರೆ. ಆತ ಹಾರಿದ ಕೆರೆಗೆ ರೈಲ್ವೆ ಪೊಲೀಸರು ಕೂಡ ಇಳಿದಿದ್ದು, ಹುಡುಕಾಟ ಶುರು ಮಾಡಿದ್ದಾರೆ. ಆದರೆ ಆರೋಪಿ ಮಾತ್ರ ಯಾವುದೇ ಸುಳಿವು ಬಿಟ್ಟುಕೊಡದೇ ನೀರಿನಾಳದಲ್ಲಿ ಅಡಗಿದ್ದ. ಅಲ್ಲಿದ್ದ ಅಸ್ಪಷ್ಟವಾದ ಗೋಚರತೆಯಿಂದಾಗಿ ಪೊಲೀಸರಿಗೆ ಈತನನ್ನು ಹುಡುಕುವುದಕ್ಕೆ ಸಾಧ್ಯವೇ ಇಲ್ಲ ಎಂಬಂಥಹ ಸ್ಥಿತಿ ನಿರ್ಮಾಣವಾಗಿತ್ತು. ಆದರೂ ತಾಳ್ಮೆ ಕಳೆದುಕೊಳ್ಳದ ಪೊಲೀಸರು ಕೆರೆಗೆ ಇಳಿಯುವುದಕ್ಕೆ ಸ್ಥಳಕ್ಕೆ ಮುಳುಗುತಜ್ಞರನ್ನು ಕರೆಸಿದ್ದಾರೆ.
ಮುಳುಗುತಜ್ಞರು ಆಗಮಿಸಿ ಸುಮಾರು 5 ಗಂಟೆಗಳ ಕಾಲ ಹುಡುಕಾಟ ನಡೆಸಿದ ನಂತರ ಈ ಕಳ್ಳನನ್ನು ಕೊನೆಗೂ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು ನೀರಿನಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆತನನ್ನು ಜೀವಂತವಾಗಿ ನೋಡಿದ ಪೊಲೀಸರೇ ಸ್ವತಃ ಶಾಕ್ ಆಗಿದ್ದು, ಆತ ಹೇಗೆ ನೀರಿನಲ್ಲಿ ಅಷ್ಟು ಹೊತ್ತಿನವರೆಗೆ ಜೀವಂತವಾಗಿದ್ದ ಎಂಬುದನ್ನು ಅಚ್ಚರಿಪಟ್ಟಿದ್ದಾರೆ.
ವಿಚಾರಿಸಿದಾಗ ಆತ ತಾನು ಕಮಲದ ಕಾಂಡಾವನ್ನು ಬಳಸಿ ನೀರೊಳಗೆಯೇ ಉಸಿರಾಡುತ್ತಿದಿದ್ದುದಾಗಿ ಹೇಳಿದ್ದಾನೆ. ಕಮಲದ ಹೂವಿನ ಕಾಂಡವೂ ಕೊಳವೆಯಂತೆ ಇದ್ದು ನೀರೊಳಗಿದ್ದು, ನೀರಿನ ಮೇಲಿನಿಂದ ಆಮ್ಲಜನಕ ಎಳೆದುಕೊಳ್ಳುವುದಕ್ಕೆ ಆತನಿಗೆ ಸಹಾಯ ಮಾಡಿದೆ.. ಹೀಗಾಗಿಯೇ ಆತ ಸುಮಾರು 5 ಗಂಟೆಗೂ ಅಧಿಕ ಕಾಲ ನೀರೊಳಗೆ ಯಾವುದೇ ಅಪಾಯವಿಲ್ಲದೇ ಅಡಗಿ ಕುಳಿತಿದ್ದಾನೆ. ಆತ ಸರೋವರದಲ್ಲಿ ಅಡಗಿ ಕುಳಿತ ದುರ್ಯೋಧನನಾದರೆ ಪೊಲೀಸರು ಭೀಮಾನಂತೆ ಆತನನ್ನು ಹುಡುಕಿ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗೆ ಪೊಲೀಸರನ್ನು ಆಟ ಆಡಿಸಿ ಸೆರೆಯಾದ ಆರೋಪಿಯನ್ನು ಹರ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ, 32 ವರ್ಷದ ಹರ್ವಿಂದರ್ ಸಿಂಗ್ ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿಯಾಗಿದ್ದು, ಕೇರಳದಿಂದ ಜಮ್ಮುವಿನವರೆಗೆ ದೇಶಾದ್ಯಂತ 400 ಕ್ಕೂ ಹೆಚ್ಚು ಕಳ್ಳತನ ಕೃತ್ಯದ ದಾಖಲೆಯನ್ನು ಹೊಂದಿರುವ ಅನುಭವಿ ಕಳ್ಳ. ಅಚ್ಚರಿಯ ವಿಚಾರ ಎಂದರೆ 2017 ರಲ್ಲಿ ಹಲ್ದೌರ್ ನಗರ ಪಂಚಾಯತ್ನಲ್ಲಿ ಸ್ವತಂತ್ರ ವಾರ್ಡ್ ಕೌನ್ಸಿಲರ್ ಆಗಿಯೂ ಆತ ಸೇವೆ ಸಲ್ಲಿಸಿದ್ದ.
ಇದನ್ನೂ ಓದಿ: ಬೇಸಿಗೆ ರಜೆಯಾಯ್ತು ಪೋಷಕರಿಗೆ ಸಜೆ: ಈಜಲು ಹೋಗಿದ್ದ ಬಾಲಕ ನೀರಲ್ಲಿ ಮುಳುಗಿ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ