
ಮೊರಾದಾಬಾದ್ (ಮಾ.16): ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಡಿಲಾರಿ ಎಂಬಲ್ಲಿ ಸಿನಿಮೀಯ ಶೈಲಿಯ ಘಟನೆಯೊಂದು ನಡೆದಿದೆ. ನವವಿವಾಹಿತೆಯೊಬ್ಬಳು ತನ್ನ ಪತಿ, ಅತ್ತೆ ಸೇರಿದಂತೆ ಮನೆಮಂದಿಗೆ ಹಾಲಿನಲ್ಲಿ ಅಮಲು ಪದಾರ್ಥ ಬೆರೆಸಿ ಅವರೆಲ್ಲಾ ನಿದ್ರೆಗೆ ಜಾರಿದ ಬಳಿಕ, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ನಗದು ಮತ್ತು ಆಭರಣಗಳೊಂದಿಗೆ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.
ಡಿಲಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈಕೆ, ಮನೆಯವರ ಪ್ರೀತಿ-ನಂಬಿಕೆಗೆ ದ್ರೋಹ ಬಗೆದಿದ್ದಾಳೆ. ಮಾರ್ಚ್ 10ರ ರಾತ್ರಿ ಊಟದ ನಂತರ ತನ್ನ ಪತಿ, ಅತ್ತೆ, ಮಾವ ಮತ್ತು ನಾದಿನಿಗೆ ಕುಡಿಯಲು ಹಾಲು ನೀಡಿದ್ದಾಳೆ. ಆದರೆ ಆ ಹಾಲಿನಲ್ಲಿ ಮೊದಲೇ ನಿದ್ರೆ ಮಾತ್ರೆ ಬೆರೆಸಿದ್ದಳು. ಹಾಲು ಕುಡಿದ ಕೆಲವೇ ನಿಮಿಷಗಳಲ್ಲಿ ಇಡೀ ಕುಟುಂಬ ಪ್ರಜ್ಞೆ ತಪ್ಪಿ ಬಿದ್ದಿದೆ.
ಮನೆಮಂದಿಯೆಲ್ಲಾ ಅರೆಪ್ರಜ್ಞಾವಸ್ಥೆಗೆ ತಲುಪುತ್ತಿದ್ದಂತೆ, ಆಕೆ ಮನೆಯಲ್ಲಿದ್ದ 1 ಲಕ್ಷ ರೂಪಾಯಿ ನಗದು ಮತ್ತು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು ದೋಚಿಕೊಂಡು ತನ್ನ ಪ್ರಿಯಕರನೊಂದಿಗೆ ಕಾಲ್ಕಿತ್ತಿದ್ದಾಳೆ.
ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪತಿ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾನೆ. "ನನ್ನ ಮದುವೆಯಾಗಿ ಕೇವಲ ಒಂದು ವರ್ಷವಾಗಿತ್ತು. ವಿವಾಹಕ್ಕೂ ಮುನ್ನವೇ ನನ್ನ ಪತ್ನಿಗೆ ಹರ್ವಿಂದರ್ ಎಂಬ ಯುವಕನೊಂದಿಗೆ ಪ್ರೇಮ ಸಂಬಂಧವಿತ್ತು. ಮದುವೆಯ ನಂತರವೂ ಅದು ಮುಂದುವರಿದಿತ್ತು. ನಾನು ಹಲವು ಬಾರಿ ಅವಳನ್ನು ಎಚ್ಚರಿಸಿದ್ದೆ, ಆದರೆ ಅವಳು ಸುಧಾರಿಸುವ ಬದಲು ಇಡೀ ಕುಟುಂಬವನ್ನೇ ಸಂಚಿನ ಮೂಲಕ ಮಟ್ಟಹಾಕಲು ಸ್ಕೆಚ್ ಹಾಕಿದ್ದಳು" ಎಂದು ನೋವು ತೋಡಿಕೊಂಡಿದ್ದಾನೆ. ಅಲ್ಲದೆ, ಪತ್ನಿಯು ಪದೇ ಪದೇ ತನಗೆ ಸುಳ್ಳು ಕೇಸ್ಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದೂ ಆತ ಆರೋಪಿಸಿದ್ದಾನೆ.
ಮರುದಿನ ಮಧ್ಯಾಹ್ನದವರೆಗೂ ಮನೆಯಲ್ಲಿ ಯಾವುದೇ ಸದ್ದುಗದ್ದಲವಿಲ್ಲದೆ ಸ್ಮಶಾನ ಮೌನ ಆವರಿಸಿದ್ದನ್ನು ಕಂಡು ನೆರೆಹೊರೆಯವರಿಗೆ ಅನುಮಾನ ಬಂದಿದೆ. ಕೂಡಲೇ ಅವರು ಬಂದು ಮನೆಯವರನ್ನು ಎಚ್ಚರಿಸಿದ್ದಾರೆ. ಕುಟುಂಬಸ್ಥರು ಪ್ರಜ್ಞೆ ಬಂದ ನಂತರ ನೋಡಿದಾಗ ಮನೆಯ ಅಲ್ಮೇರಾಗಳು ಖಾಲಿಯಾಗಿದ್ದವು ಮತ್ತು ಸೊಸೆ ನಾಪತ್ತೆಯಾಗಿದ್ದಳು.
ಪತಿಯ ದೂರಿನ ಮೇರೆಗೆ ಡಿಲಾರಿ ಪೊಲೀಸರು ಆರೋಪಿ ಪತ್ನಿ ಮತ್ತು ಆಕೆಯ ಪ್ರಿಯಕರ ಹರ್ವಿಂದರ್ ವಿರುದ್ಧ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ