
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡುವ ಸೂಕ್ಷ್ಮ ಹಾಗೂ ಕಾನೂನುಬಾಹಿರ ಮಾಹಿತಿಗಳನ್ನು ತಡೆಯಲು ಕೇಂದ್ರ ಸರ್ಕಾರ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿಸಿದೆ. ಸರ್ಕಾರ ಅಥವಾ ನ್ಯಾಯಾಲಯದ ಆದೇಶ ಬಂದ ನಂತರ ಅಂತಹ ವಿಷಯಗಳನ್ನು ತೆಗೆದುಹಾಕಲು (Takedown) ನೀಡಲಾಗಿದ್ದ ಕಾಲಾವಕಾಶವನ್ನು ಸರ್ಕಾರವು ಈ ಹಿಂದೆ ಇದ್ದ 36 ಗಂಟೆಗಳಿಂದ ಕೇವಲ 3 ಗಂಟೆಗಳಿಗೆ ಕಡಿತಗೊಳಿಸಿದೆ. ಜೊತೆಗೆ, ತೀವ್ರ ಸೂಕ್ಷ್ಮ ಹಾಗೂ ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವ ವಿಷಯಗಳನ್ನು ತೆರವುಗೊಳಿಸುವ ಅವಧಿಯನ್ನು 24 ಗಂಟೆಗಳಿಂದ 2 ಗಂಟೆಗಳಿಗೆ ಇಳಿಸಲಾಗಿದೆ.
ಆನ್ಲೈನ್ನಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು 'ಡೀಪ್ಫೇಕ್' (Deepfakes) ತಂತ್ರಜ್ಞಾನದ ದುರ್ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಿಂಥೆಟಿಕಲಿ ಜೆನರೇಟೆಡ್ ಇನ್ಫಾರ್ಮೆಷನ್ನಿಂದ ಉಂಟಾಗುವ ಹಾನಿಗಳನ್ನು ತಡೆಯಲು ಫೆಬ್ರವರಿ 10, 2026 ರಂದು ಐಟಿ ನಿಯಮಗಳು 2021 ಕ್ಕೆ ಪ್ರಮುಖ ತಿದ್ದುಪಡಿಗಳನ್ನು ತರಲಾಗಿದೆ. ಈ ಮೂಲಕ ದೇಶದಲ್ಲಿ ಡಿಜಿಟಲ್ ಸುರಕ್ಷತೆಯನ್ನು ಹೆಚ್ಚಿಸಲು ಕಾನೂನು ಚೌಕಟ್ಟನ್ನು ಬಲಪಡಿಸಲಾಗಿದೆ.
ಹೊಸ ತಿದ್ದುಪಡಿಗಳ ಪ್ರಕಾರ ಸರ್ಕಾರ ಅಥವಾ ನ್ಯಾಯಾಲಯದ ಮಾನ್ಯ ಆದೇಶದ ಆಧಾರದ ಮೇಲೆ ಕಾನೂನುಬಾಹಿರ ಮಾಹಿತಿಯನ್ನು ತೆಗೆದುಹಾಕಲು ನೀಡಲಾಗಿದ್ದ ಸಮಯವನ್ನು 36 ಗಂಟೆಗಳಿಂದ 3 ಗಂಟೆಗಳಿಗೆ ಇಳಿಸಲಾಗಿದೆ. ವ್ಯಕ್ತಿಯ ನಗ್ನತೆ, ನಕಲಿ ಫೋಟೋ/ವೀಡಿಯೊ ಅಥವಾ ನಕಲು ಮಾಡುವಿಕೆಗೆ ಸಂಬಂಧಿಸಿದ ದೂರುಗಳ ಮೇಲೆ ಕ್ರಮ ಕೈಗೊಳ್ಳಲು ನೀಡಲಾಗಿದ್ದ ಕಾಲಾವಕಾಶವನ್ನು 24 ಗಂಟೆಗಳಿಂದ ಕೇವಲ 2 ಗಂಟೆಗಳಿಗೆ ಇಳಿಸಲಾಗಿದೆ. ಸಾರ್ವಜನಿಕರ ಇತರ ಸೂಕ್ಷ್ಮ ವಿಷಯಗಳ ದೂರುಗಳನ್ನು ಪರಿಹರಿಸಲು ಇದ್ದ 72 ಗಂಟೆಗಳ ಕಾಲಾವಧಿಯನ್ನು 36 ಗಂಟೆಗಳಿಗೆ ಕಡಿತಗೊಳಿಸಲಾಗಿದೆ.
ಭಾರತದಲ್ಲಿ 50 ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಪ್ರಮುಖ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಅತ್ಯಾ**ರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ (CSAM) ಅಥವಾ ಯಾವುದೇ ಅಶ್ಲೀಲ ಕೃತ್ಯಗಳನ್ನು ಚಿತ್ರಿಸುವ ವೀಡಿಯೊಗಳು/ಚಿತ್ರಗಳನ್ನು ಪತ್ತೆಹಚ್ಚಲು ಆಟೋಮೇಟೆಡ್ ಸಾಫ್ಟ್ವೇರ್ ಮತ್ತು ಕೃತಕ ಬುದ್ಧಿಮತ್ತೆಯಂತಹ ಸೂಕ್ತ ತಾಂತ್ರಿಕ ಉಪಕರಣಗಳನ್ನು ಕಡ್ಡಾಯವಾಗಿ ಬಳಸಬೇಕು. ಈ ಹಿಂದೆ ತೆಗೆದುಹಾಕಲಾದ ಆಕ್ಷೇಪಾರ್ಹ ಮಾಹಿತಿಯನ್ನು ಮತ್ತೆ ಪೋಸ್ಟ್ ಮಾಡದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಅಂತಹ ವಿಷಯಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ ತಡೆಯಲು ವೇದಿಕೆಗಳು ಸ್ವತಃ ಕ್ರಮ ಕೈಗೊಳ್ಳಬೇಕು.
ಸಾಮಾಜಿಕ ಮಾಧ್ಯಮ ಕಂಪನಿಗಳು ಐಟಿ ನಿಯಮಗಳಲ್ಲಿ ನಿಗದಿಪಡಿಸಲಾದ ಈ ಕಾನೂನು ಬಾಧ್ಯತೆಗಳನ್ನು ಪಾಲಿಸಲು ವಿಫಲವಾದರೆ, ಅವು ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಪಡೆಯುವ 'ಸೇಫ್ ಹಾರ್ಬರ್' ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಲಿವೆ. ಇದರರ್ಥ, ಬಳಕೆದಾರರು ಪೋಸ್ಟ್ ಮಾಡುವ ಕಾನೂನುಬಾಹಿರ ವಿಷಯಗಳಿಗೆ ಕಂಪನಿಗಳೇ ನೇರ ಹೊಣೆಗಾರರಾಗುತ್ತವೆ ಮತ್ತು ದೇಶದ ಚಾಲ್ತಿಯಲ್ಲಿರುವ ಕಾನೂನುಗಳ ಅಡಿಯಲ್ಲಿ ತಕ್ಷಣದ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ. ಆನ್ಲೈನ್ ವಂಚನೆ, ಡೀಪ್ಫೇಕ್ ದೌರ್ಜನ್ಯ ಮತ್ತು ತಪ್ಪು ಮಾಹಿತಿಯ ಹರಡುವಿಕೆಗೆ ತಡೆಹಾಕಿ, ಬಳಕೆದಾರರಿಗೆ ಸುರಕ್ಷಿತ ಡಿಜಿಟಲ್ ವಾತಾವರಣ ನಿರ್ಮಿಸುವುದು ಸರ್ಕಾರದ ಈ ಕ್ರಮದ ಮುಖ್ಯ ಉದ್ದೇಶವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ