ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಮಾರ್ಚ್ ತಿಂಗಳಲ್ಲಿ ಲಾಕ್ಡೌನ್ ಘೋಷಿಸಿತ್ತು. ಈ ವೇಳೆ ಲಕ್ಷಾಂತರ ವಲಸೆ ಕಾರ್ಮಿಕರು ತವರಿಗೆ ಮರಳಲು ಹರಸಾಹಸ ಪಟ್ಟಿದ್ದರು. ಕಾಲ್ನಡಿಗೆ ಮೂಲಕ, ರೈಲಿನ ಮೂಲಕ ಮನೆ ತಲುಪಿದ್ದ ವಲಸೆ ಕಾರ್ಮಿಕರು ಇದೀಗ ಮತ್ತೆ ದೆಹಲಿಗೆ ವಾಪಸಾಗುತ್ತಿದ್ದಾರೆ.
ದೆಹಲಿ(ಆ.08): ಕೊರೋನಾ ವೈರಸ್ ಲಾಕ್ಡೌನ್ ವೇಳೆ ಹರಸಾಹಸಪಟ್ಟು ತವರು ಸೇರಿಕೊಂಡ ವಲಸೆ ಕಾರ್ಮಿಕರು ಇದೀಗ ದೆಹಲಿಯತ್ತ ಮುಖ ಮಾಡಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರದಂತೆ ಹಲವು ರಾಜ್ಯಗಳ ವಲಸೆ ಕಾರ್ಮಿಕರು ಮತ್ತೆ ದೆಹಲಿಗೆ ಆಗಮಿಸುತ್ತಿದ್ದಾರೆ. ಕೊರೋನಾದಿಂದ ಕೆಂಗಟ್ಟಿರುವ ವಲಸೆ ಕಾರ್ಮಿರು ಇದೀಗ ಜೀವನ ನಿರ್ವಹಣೆಗಾಗಿ ಮತ್ತೆ ದೆಹಲಿಗೆ ಆಗಮಿಸುತ್ತಿದ್ದಾರೆ.
ಕೆಲಸವೂ ಇಲ್ಲ, ಹಣವೂ ಇಲ್ಲ; ಬೆಂಗಳೂರು ಬಿಟ್ಟು ಊರು ಸೇರುತ್ತಿದ್ದಾರೆ ಜನ.
ಲಾಕ್ಡೌನ್ ಘೋಷಣೆಯಾದ ಬೆನ್ನಲ್ಲೇ ಕೆಲಸ ಹಾಗೂ ಆದಾಯ ನಿಂತುಹೋಗಿತ್ತು. ಹೀಗಾಗಿ ವಲಸ ಕಾರ್ಮಿಕರು ತಮ್ಮ ತಮ್ಮ ಮನೆಯತ್ತ ಮುಖ ಮಾಡಿದ್ದರು. ಹಲವು ಸಾವಿರ ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಸಂಚರಿಸಿದ್ದರು. ಇನ್ನು ಕೆಲವರು ಸೈಕಲ್ ಮೂಲಕವೂ ತೆರಳಿದ್ದರು. 2 ತಿಂಗಳಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ ಎಂದುಕೊಂಡಿದ್ದ ಎಲ್ಲರ ಲೆಕ್ಕಾಚಾರ ತಲೆಕೆಳಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಮನೆಯಲ್ಲಿ ಕೆಲಸ ಹಾಗೂ ಆದಾಯವಿಲ್ಲದೆ ದಿನದೂಡಿದ ವಲಸೆ ಕಾರ್ಮಿಕರು ಇದೀಗ ತುತ್ತು ಅನ್ನಕ್ಕಾಗಿ ಮತ್ತೆ ಕೆಲಸ ಹುಡುಕಿ ದೆಹಲಿಗೆ ಮರಳುತ್ತಿದ್ದಾರೆ.
ಕರ್ನಾಟಕದ 6 ಸೇರಿ 7 ರಾಜ್ಯದಿಂದ 63 ಶ್ರಮಿಕ್ ರೈಲಿಗೆ ಬೇಡಿಕೆ!
ದೆಹಲಿಯ ಆನಂದ್ ವಿಹಾರ ಹಾಗೂ ಕೌಶಾಂಬಿ ಬಸ್ ನಿಲ್ದಾಣದ ವಿವಿದ ರಾಜ್ಯಗಳಿಂದ ಆಗಮಿಸುವ ವಲಸೆ ಕಾರ್ಮಿಕರಿಂದ ತುಂಬಿ ಹೋಗಿದೆ. ದೆಹಲಿಯಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಕಟ್ಟಡ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳು ಸಂಪೂರ್ಣವಾಗಿ ಆರಂಭಗೊಂಡಿಲ್ಲ. ಹೀಗಾಗಿ ಮರಳಿದ ವಲಸೆ ಕಾರ್ಮಿಕರಿಗೆ ಇದೀಗ ಕೆಲಸ ಹುಡುಕುವುದೇ ಬಹುದೊಡ್ಡ ಚಿಂತೆಯಾಗಿದೆ.