ನವದೆಹಲಿ: ಸೇನೆ ಸೇರುವ ಆಸೆಯಿಂದ ಸಧೃಡತೆಗಾಗಿ ಕೆಲಸ ಮುಗಿದ ನಂತರ ದಿನ ಓಡುತ್ತಲೇ ಮನೆ ಸೇರುತ್ತಿದ್ದ ಪ್ರದೀಪ್ ಮೆಹ್ರಾ ನೆರವಿಗೆ ಈಗ ಶಾಪರ್ ಸ್ಟಾಪ್ ಮುಂದೆ ಬಂದಿದ್ದು, ತಾಯಿಯ ಚಿಕಿತ್ಸೆಗೆ ಹಾಗೂ ತನ್ನ ಗುರಿ ಸಾಧನೆಗಾಗಿ 2.5 ಲಕ್ಷ ಮೊತ್ತದ ಚೆಕ್ ಅನ್ನು ನೀಡಿದೆ. ಪ್ರದೀಪ್ ಮೆಹ್ರಾ(Pradeep Mehra) ನೋಯ್ಡಾದ ಸೆಕ್ಟರ್ 16 ರಲ್ಲಿರುವ ಮೆಕ್ಡೊನಾಲ್ಡ್ನಲ್ಲಿ (McDonald) ಕೆಲಸ ಮಾಡುತ್ತಿದ್ದರು. ಸೇನೆ ಸೇರುವ ಗುರಿ ಹೊಂದಿದ್ದ ಮೆಹ್ರಾಗೆ ಜಿಮ್ಗೆ ಹೋಗಿ ವ್ಯಾಯಾಮ ಮಾಡಲು ಸಮಯ, ಹಣ ಎರಡು ಇರಲಿಲ್ಲ. ಹೀಗಾಗಿ ಅವರು ಕೆಲಸ ಬಿಟ್ಟ ನಂತರ 10 ಕಿಲೋ ಮೀಟರ್ ದೂರದಲ್ಲಿರುವ ಮನೆಗೆ ಓಡುತ್ತಲೇ ಹೋಗಿ ಮನೆ ಸೇರುತ್ತಿದ್ದರು. ಇದರ ವಿಡಿಯೋವನ್ನು ಸಿನಿಮಾ ನಿರ್ದೇಶಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ವಿನೋದ್ ಕಪ್ರಿ (Vinod Kapri) ಟ್ವಿಟ್ ಮಾಡಿದ್ದು, ಎಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ಮಿಡ್ನೈಟ್ ರನ್ನರ್ ಪ್ರದೀಪ್ ಮೆಹ್ರಾ ಅವರು ಭಾವುಕರಾಗಿದ್ದಾರೆ. ಶಾಪರ್ ಸ್ಟಾಪ್ ಅವರಿಗೆ 2.5 ಲಕ್ಷ ಮೌಲ್ಯದ ಚೆಕ್ ಅನ್ನು ನೀಡಿದ್ದು ಆತನತಾಯಿ ಚಿಕಿತ್ಸೆಗೆ ಹಾಗೂ ತನ್ನ ಕನಸ್ಸನ್ನು ನನಸಾಗಿಸುವುದಕ್ಕೆ ಇದನ್ನು ಬಳಸುವಂತೆ ಹೇಳಿದ್ದಾರೆ. ನಿನಗೆ ಒಳ್ಳೆಯದಾಗಲಿ ಎಂದು ಬರೆದಿದ್ದಾರೆ.
ಓಡುತ್ತಾ ಮನೆ ಸೇರುತ್ತಿದ್ದ ಪ್ರದೀಪ್ ಮೆಹ್ರಾ ನೆರವಿಗೆ ಬಂದ ಲೆಫ್ಟಿನೆಂಟ್ ಜನರಲ್
ಈ ಹಿಂದೆ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ (Sathish Dua) ಅವರ ಗಮನವನ್ನು ಪ್ರದೀಪ್ ಮೆಹ್ರಾ ಅವರ ವಿಡಿಯೋ ಸೆಳೆದಿದ್ದು, ಪ್ರದೀಪ್ ಮೆಹ್ರಾಗೆ ಸೇನೆ ಸೇರಲು ಸಹಾಯ ಮಾಡುವುದಾಗಿ ಅವರು ಹೇಳಿದ್ದರು. ಸೇನೆ ಸೇರುವ ಆಸೆಯಿಂದ ಪ್ರತಿದಿನ ಕೆಲಸ ಮುಗಿಸಿ ಓಡುತ್ತಲೇ ಮನೆ ಸೇರುತ್ತಿದ್ದ 19ರ ಹರೆಯದ ತರುಣ ಪ್ರದೀಪ್ ಮೆಹ್ರಾ ಅವರ ವಿಡಿಯೋವನ್ನು ನೀವು ಈಗಾಗಲೇ ನೋಡಿರಬಹುದು.
ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ತರುಣ ಪ್ರದೀಪ್ ಮೆಹ್ರಾ ಅವರ ಜೋಶ್ ಶ್ಲಾಘನೀಯವಾಗಿದೆ. ಅವರ ಅರ್ಹತೆಯ ಆಧಾರದ ಮೇಲೆ ನೇಮಕಾತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಅವರಿಗೆ ಸಹಾಯ ಮಾಡಲು, ನಾನು ಕುಮಾನ್ ರೆಜಿಮೆಂಟ್ನ ಕರ್ನಲ್, ಈಸ್ಟರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಣಾ ಕಲಿತಾ ಅವರೊಂದಿಗೆ ಸಂವಾದ ನಡೆಸಿದ್ದೇನೆ. ಅವರು ತನ್ನ ರೆಜಿಮೆಂಟ್ಗೆ ನೇಮಕಾತಿಗಾಗಿ ಹುಡುಗನಿಗೆ ತರಬೇತಿ ನೀಡಲು ಅಗತ್ಯವಾದುದನ್ನು ಒದಗಿಸಲಿದ್ದಾರೆ ಎಂದು ಟ್ವಿಟ್ ಮಾಡಿದ್ದರು.
ಮೆಕ್ ಡೊನಾಲ್ಡ್ನಲ್ಲಿ (Mecdonald) ಕೆಲಸ ಮಾಡುವ ಪ್ರದೀಪ್ ಮೆಹ್ರಾ (Pradeep Mehra), ಪ್ರತಿದಿನ ತಮ್ಮ ಕೆಲಸ ಮುಗಿಸಿದ ಬಳಿಕ ರಾತ್ರಿ ಓಡುತ್ತಲೇ ತಮ್ಮ ಮನೆಗೆ ಹೋಗಿ ತಲುಪುತ್ತಿದ್ದರು. ಹೀಗೆ ಓಡುತ್ತಾ ಮನೆಗೆ ಹೋಗುತ್ತಿರಬೇಕಾದರೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ವಿನೋದ್ ಕಪ್ರಿ (Vinod Kapri) ಅವರಿಗೆ ಪ್ರದೀಪ್ ಮೆಹ್ರಾ ದಾರಿ ಮಧ್ಯೆ ಸಿಕ್ಕಿದ್ದಾನೆ.
ಈ ವೇಳೆ ಅವರು ಮಧ್ಯರಾತ್ರಿ ರಸ್ತೆಯಲ್ಲಿ ಹುಡುಗ ಓಡುವುದನ್ನು ನೋಡಿ ಏನೋ ಸಂಕಷ್ಟಕ್ಕೊಳಗಾಗಿರಬೇಕು ಎಂದು ಭಾವಿಸಿ ಕಾರನ್ನು ನಿಧನ ಮಾಡಿ ಆತನನ್ನು ಮಾತನಾಡಿಸಿದ್ದಾರೆ. ಅಲ್ಲದೇ ಏಕೆ ಓಡಿಕೊಂಡು ಹೋಗುತ್ತಿರುವೆ ನಾನು ನಿನಗೆ ಡ್ರಾಪ್ ನೀಡುವೆ ಎಂದು ಕೇಳುತ್ತಾರೆ. ಆದರೆ ಅದನ್ನು ನಯವಾಗಿ ಆತ ತಿರಸ್ಕರಿಸುತ್ತಾನೆ. ಈ ವೇಳೆ ಏನು ಕೆಲಸ ಮಾಡುತ್ತಿರುವುದು ಈ ಓಟ ಏಕೆ ಎಂದು ಕೇಳಿದ ಅವರಿಗೆ ತಾನು ಮ್ಯಾಕ್ಡೊನಾಲ್ಡ್ನಲ್ಲಿ ಕೆಲಸ ಮಾಡುತ್ತಿರುವುದಾಗಿ ತರುಣ ಉತ್ತರಿಸಿದ್ದಾನೆ. ಅಲ್ಲದೇ ಸೇನೆಗೆ ಸೇರಲು ನಿರಂತರ ಅಭ್ಯಾಸ ಬೇಕು. ನನಗೆ ಅಭ್ಯಾಸಕ್ಕೆಂದೇ ಸಮಯ ನಿಗದಿಗೊಳಿಸಲು ಸಮಯವಿಲ್ಲ. ಹೀಗಾಗಿ ಮನೆಗೆ ಹೋಗುವಾಗ ಓಡುತ್ತಾ ಸಾಗಿ ಅಭ್ಯಾಸ ನಡೆಸುತ್ತಿರುವುದಾಗಿ ಹೇಳಿದ್ದಾನೆ.
ಈ ವಿಡಿಯೋವನ್ನು ವಿನೋದ್ ಕಪ್ರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಯುವ ಸಮೂಹಕ್ಕೆ ಪ್ರದೀಪ್ ಮೆಹ್ರಾ ಸ್ಪೂರ್ತಿಯ ಸೆಲೆಯಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ