
ನವದೆಹಲಿ: ‘ಮಧ್ಯಪ್ರಾಚ್ಯ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಮುಂದುವರಿಸಿದೆ. ತೈಲ ಮತ್ತು ಅನಿಲ ಪೂರೈಕೆ ವಿಚಾರವಾಗಿ ವಿವಿಧ ದೇಶಗಳ ಪೂರೈಕೆದಾರರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಆದರೂ ಪ್ರಪಂಚದಾದ್ಯಂತ ಸಂಘರ್ಷದ ಪರಿಣಾಮಗಳು ದೀರ್ಘಕಾಲ ಉಳಿಯುವ ನಿರೀಕ್ಷೆಯಿದೆ. ಹೀಗಾಗಿ ಭಾರತದ ಕಳವಳ ಸಹಜವಾಗಿಯೇ ಹೆಚ್ಚಿದೆ. ಹೀಗಾಗಿ ಕೋವಿಡ್ ಸಂದರ್ಭದಲ್ಲಿ ತೋರಿದ ಒಗ್ಗಟ್ಟನ್ನೇ ಈಗಲೂ ತೋರುವ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮನವಿ ಮಾಡಿದ್ದಾರೆ.
ಲೋಕಸಭಾ ಅಧಿವೇಶನದಲ್ಲಿ ಯುದ್ಧದಿಂದ ಭಾರತದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಮಾತನಾಡಿದ ಅವರು, ‘ಭಾರತವು ಯಾವಾಗಲೂ ಮಾನವೀಯತೆಯ ಹಿತದೃಷ್ಟಿಯಿಂದ ಶಾಂತಿಗಾಗಿ ಧ್ವನಿ ಎತ್ತಿದೆ. ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಈ ಸಮಸ್ಯೆಗೆ ಪರಿಹಾರ. ನಮ್ಮ ಪ್ರಯತ್ನಗಳು ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಮತ್ತು ಈ ಸಂಘರ್ಷವನ್ನು ಕೊನೆಗೊಳಿಸುವುದು’ ಎಂದು ತಿಳಿಸಿದರು.
‘ಪ್ರಪಂಚದಾದ್ಯಂತ ಸಂಘರ್ಷದ ಪರಿಣಾಮಗಳು ದೀರ್ಘಕಾಲ ಉಳಿಯುವ ನಿರೀಕ್ಷೆಯಿದೆ. ಆದ್ದರಿಂದ, ನಾವು ಎಲ್ಲದಕ್ಕೂ ಸಿದ್ಧರಾಗಿರಬೇಕು, ಒಗ್ಗಟ್ಟಿನಿಂದ ಇರಬೇಕು. ಕೋವಿಡ್ ಸಮಯದಲ್ಲಿಯೂ ನಾವು ಒಗ್ಗಟ್ಟಿನಿಂದ ನಿಂತು ಎಲ್ಲವನ್ನೂ ಎದುರಿಸಿದ್ದೇವೆ. ಅದೇ ರೀತಿ, ಈ ಬಾರಿಯೂ ಸಿದ್ಧರಾಗಿರಬೇಕು. ಪ್ರತಿಯೊಂದು ಸವಾಲನ್ನು ತಾಳ್ಮೆ ಮತ್ತು ಪರಿಶ್ರಮದಿಂದ ಎದುರಿಸಬೇಕು. ಇದು ನಮ್ಮ ಗುರುತು, ನಮ್ಮ ಶಕ್ತಿ’ ಎಂದು ಕರೆ ನೀಡಿದರು.
‘ವಾಣಿಜ್ಯ ಹಡಗುಗಳ ಮೇಲಿನ ದಾಳಿ ಮತ್ತು ಹೋರ್ಮುಜ್ ಜಲಸಂಧಿಯ ನಿರ್ಬಂಧ ಖಂಡಿತಾ ಒಪ್ಪತಕ್ಕಂಥದ್ದಲ್ಲ. ಯುದ್ಧಗ್ರಸ್ತ ಪ್ರದೇಶವು ವಿಶ್ವದ ಇತರ ದೇಶಗಳೊಂದಿಗೆ ಭಾರತದ ವ್ಯಾಪಾರಕ್ಕೆ ಪ್ರಮುಖ ಮಾರ್ಗವಾಗಿದೆ. ಕಚ್ಚಾತೈಲ, ಅನಿಲ ಮತ್ತು ರಸಗೊಬ್ಬರಗಳಂತಹ ಅಗತ್ಯ ವಸ್ತುಗಳು ಹೋರ್ಮುಜ್ ಜಲಸಂಧಿಯ ಮೂಲಕ ಭಾರತಕ್ಕೆ ಬರುತ್ತವೆ. ಯುದ್ಧ ಪ್ರಾರಂಭವಾದಾಗಿನಿಂದ, ಹೋರ್ಮುಜ್ ಮೂಲಕ ಹಡಗುಗಳ ಸಂಚಾರ ಸವಾಲಿನದ್ದಾಗಿದೆ. ಇದರ ಹೊರತಾಗಿಯೂ, ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಪೂರೈಕೆಯಲ್ಲಿ ಅತಿಯಾದ ಅಡ್ಡಿಯಾಗದಂತೆ ನೋಡಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ತಿಳಿಸಿದರು.
ಭಾರತೀಯರು ಸುರಕ್ಷಿತ:
‘ಯುದ್ಧಪೀಡಿತ ಪ್ರದೇಶದ ಪ್ರತಿಯೊಬ್ಬ ಭಾರತೀಯನಿಗೂ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ. ಪಶ್ಚಿಮ ಏಷ್ಯಾ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇವೆ. ಅವರೆಲ್ಲ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
ಪೆಟ್ರೋಲಿಯಂಗೆ ಕೊರತೆಯಿಲ್ಲ:
‘ಭಾರತವು 53 ಲಕ್ಷ ಮೆಟ್ರಿಕ್ ಟನ್ಗಳಿಗಿಂತ ಹೆಚ್ಚು ಪೆಟ್ರೋಲಿಯಂ ಸಂಗ್ರಹವನ್ನು ಹೊಂದಿದೆ. ಇದನ್ನು 65 ಲಕ್ಷ ಮೆಟ್ರಿಕ್ ಟನ್ಗೆ ಏರಿಸಲು ಕೆಲಸ ಮಾಡಲಾಗುತ್ತಿದೆ. ದೇಶೀಯ ತೈಲ ಕಂಪನಿಗಳು ಸಹ ದಾಸ್ತಾನು ಹೊಂದಿವೆ. ಕಳೆದ 11 ವರ್ಷಗಳಲ್ಲಿ, ನಮ್ಮ ಸಂಸ್ಕರಣಾ ಸಾಮರ್ಥ್ಯ ಗಮನಾರ್ಹವಾಗಿ ಹೆಚ್ಚಾಗಿದೆ. ಸರ್ಕಾರವು ವಿವಿಧ ದೇಶಗಳ ಪೂರೈಕೆದಾರರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಾಧ್ಯವಾದಲ್ಲಿಂದೆಲ್ಲ ತೈಲ ಮತ್ತು ಅನಿಲವನ್ನು ಪಡೆಯಲು ಪ್ರಯತ್ನ ನಡೆಯುತ್ತಿದೆ. ಮೊದಲು 27 ದೇಶಗಳಿಂದ ಎಲ್ಪಿಜಿ ಆಮದು ಮಾಡಿಕೊಳ್ಳುತ್ತಿದ್ದೆವು. ಅದನ್ನು 41ಕ್ಕೆ ಹೆಚ್ಚಿಸಲಾಗಿದೆ’ ಎಂದರು.
ರೈತರ ರಕ್ಷಣೆಗೆ ಆದ್ಯತೆ:
‘ಖಾರಿಫ್ ಬೆಳೆಗಳ ಬಿತ್ತನೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು, ರಸಗೊಬ್ಬರಗಳಿಗೆ ಸರ್ಕಾರ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿದೆ. ಹಿಂದೆಯೂ ಸಹ, ನಮ್ಮ ಸರ್ಕಾರ ಯಾವುದೇ ಜಾಗತಿಕ ಬಿಕ್ಕಟ್ಟು ಎದುರಾದರೂ ನಮ್ಮ ರೈತರ ಮೇಲೆ ಪರಿಣಾಮ ಬೀರಲು ಬಿಡಲಿಲ್ಲ’ ಎಂದರು.
‘ದೇಶದಲ್ಲಿರುವ ಎಲ್ಲಾ ವಿದ್ಯುತ್ ಸ್ಥಾವರಗಳು ಸಾಕಷ್ಟು ಕಲ್ಲಿದ್ದಲು ದಾಸ್ತಾನು ಹೊಂದಿವೆ. ಆಹಾರ ಭದ್ರತೆಯ ವಿಷಯದಲ್ಲಿ ಭಾರತವು ಸರ್ವಸಿದ್ಧವಾಗಿದೆ. ದೇಶವು ಸತತ 2ನೇ ವರ್ಷ 100 ಕೋಟಿ ಟನ್ಗಳಿಗಿಂತ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಮೂಲಕ ದಾಖಲೆ ಸೃಷ್ಟಿಸಿದೆ. ಕಳೆದ ದಶಕದಲ್ಲಿ, ನವೀಕರಿಸಬಹುದಾದ ಇಂಧನದತ್ತ ಪ್ರಮುಖ ಹೆಜ್ಜೆಗಳನ್ನಿಟ್ಟಿದೆ’ ಎಂದರು.
ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭೆಯು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್ಗೆ 5 ರು.ವರೆಗೆ ಹೆಚ್ಚಳಕ್ಕೆ ಅವಕಾಶ ನೀಡುವ ಮಸೂದೆ ಅಂಗೀಕರಿಸಿದೆ. ವಿಧವೆಯರು ಮತ್ತು ಅನಾಥ ಮಕ್ಕಳ ಕಲ್ಯಾಣ ಯೋಜನೆಗಳಿಗೆ ಹಣಕಾಸು ನೆರವು ಒದಗಿಸಲು ಪೆಟ್ರೋಲ್-ಡೀಸೆಲ್ ಮೇಲೆ ‘ವಿಧವೆ ಹಾಗೂ ಅನಾಥರ ಸೆಸ್’ ವಿಧಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ತನ್ಮೂಲಕ ಉಭಯ ತೈಲಗಳ ದರವನ್ನು ಏರಿಸಿದೆ. ಇದರಿಂದ ಪೆಟ್ರೋಲ್ ಬೆಲೆ 100 ರು ಆಗಿದೆ ಹಾಗೂ ಡೀಸೆಲ್ ಬೆಲೆ 90 ರು. ದಾಡಿದೆ, ಇದಕ್ಕೆ ಬಿಜೆಪಿ ವಿರೋಧಿಸಿದರೆ ದುರ್ಬಲ ವರ್ಗಗಳನ್ನು ಬೆಂಬಲಿಸಲು ಈ ನಿರ್ಧಾರ ಅಗತ್ಯ ಎಂದು ಸರ್ಕಾರ ಸಮರ್ಥಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ