Mamata Banerjee meets Sharad Pawar: ಯುಪಿಎ ಈಗ ಇಲ್ಲವೇ ಇಲ್ಲ: ಕಾಂಗ್ರೆಸ್‌ಗೆ ಮಮತಾ ಶಾಕ್‌!

By Kannadaprabha NewsFirst Published Dec 2, 2021, 7:11 AM IST
Highlights

*2024ರ ಚುನಾವಣೆಗೆ ಕಾಂಗ್ರೆಸ್‌ ನೇತೃತ್ವಕ್ಕೆ ನಕಾರ
*ಪ್ರಾದೇಶಿಕ ಪಕ್ಷಗಳು ಸೇರಿದರೆ ಬಿಜೆಪಿ ಮಣಿಸಬಹುದು
*ಮುಂಬೈನಲ್ಲಿ ಎನ್‌ಸಿಪಿ, ಶಿವಸೇನೆ ನಾಯಕರ ಭೇಟಿಯಾದ ಮಮತಾ
*ಕಾಂಗ್ರೆಸ್ಸಿಂದ ಅಂತರ ಕಾಪಾಡಿಕೊಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
*ನಮ್ಮನ್ನು ಬಿಟ್ಟು ಬಿಜೆಪಿಯನ್ನು ಸೋಲಿಸುವುದು ಕನಸು: ಕಾಂಗ್ರೆಸ್‌
 

ಮುಂಬೈ (ಡಿ. 02) : 2024ರ ಲೋಕಸಭಾ ಚುನಾವಣೆಯಲ್ಲಿ (2024 Lok Sabha Election) ಬಿಜೆಪಿ ವಿರುದ್ಧ ಯುಪಿಎ (UPA) ಮೈತ್ರಿಕೂಟದಡಿ ಹೋರಾಟಕ್ಕೆ ಯೋಜಿಸುತ್ತಿದ್ದ ಕಾಂಗ್ರೆಸ್‌ಗೆ, ಟಿಎಂಸಿ (TMC) ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬುಧವಾರ ಭರ್ಜರಿ ಶಾಕ್‌ ನೀಡಿದ್ದಾರೆ. ದೇಶದಲ್ಲಿ ಇದೀಗ ಯುಪಿಎ ಅನ್ನೋದೇ ಇಲ್ಲ ಎನ್ನುವ ಮೂಲಕ ಕಾಂಗ್ರೆಸ್‌ ನೇತೃತ್ವವನ್ನೇ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಮಮತಾರ ಈ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ ನಾಯಕರು (Congress) ‘ತನ್ನ ವೈಯಕ್ತಿಕ ಲಾಭ ಮತ್ತು ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಬಗ್ಗೆ ಸದಾ ಚಿಂತಿಸುವ ರಾಜಕೀಯ ಪಕ್ಷಗಳು, ಕೇವಲ ರಾಹುಲ್‌ ಗಾಂಧಿಯನ್ನು (Rahul Gandhi) ಟೀಕಿಸುವ ಮೂಲಕ ಬಿಜೆಪಿಯನ್ನು ಎದುರಿಸಲಾಗದು. ಇಂಥ ನಿಲುವುಗಳು ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿಗೆ ನೆರವು ನೀಡಬಲ್ಲದಷ್ಟೇ. ದೇಶದ ರಾಜಕೀಯದ ವಾಸ್ತವತೆ ಎಲ್ಲರಿಗೂ ಗೊತ್ತು. ಕಾಂಗ್ರೆಸ್‌ ಅನ್ನು ಹೊರಗಿಟ್ಟು ಬಿಜೆಪಿಯನ್ನು ಸೋಲಿಸಬಹುದು ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಕನಸಷ್ಟೇ’ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ಗೆ ಶಾಕ್‌ ನೀಡಿದ ಮಮತಾ!

ಮೂರು ದಿನಗಳ ಮುಂಬೈ ಭೇಟಿಗಾಗಿ ಆಗಮಿಸಿರುವ ಮಮತಾ ಬ್ಯಾನರ್ಜಿ, ಮಂಗಳವಾರ ಶಿವಸೇನೆ (Shiva Sena) ನಾಯಕರನ್ನು ಭೇಟಿ ಮಾಡಿದ್ದರು. ಬುಧವಾರ ಎನ್‌ಸಿಪಿ ನಾಯಕ ಶರದ್‌ ಪವಾರ್‌  (Sharad Pawar) ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ‘ದೇಶದಲ್ಲಿ ಈಗ ಇರುವ ನಿರಂಕುಶವಾದಿ ಪ್ರಭುತ್ವದ ವಿರುದ್ಧ ಯಾರೂ ಹೋರಾಟ ನಡೆಸುತ್ತಿಲ್ಲವಾದ ಕಾರಣ ಪರ್ಯಾಯ ದಾರಿಯೊಂದನ್ನು ಹುಡುಕಬೇಕಿದೆ. ಆದರೆ ಇದನ್ನು ಯಾರೂ ಏಕಾಂಗಿಯಾಗಿ ಮಾಡಲಾಗದು. 

 

I also met with Shri ji, today.

We discussed at length about the present state of this nation. We reiterated our interests in prioritising the well-being of our people. pic.twitter.com/J642Hhfx9W

— Mamata Banerjee (@MamataOfficial)

 

Third Front minus INC: ಕಾಂಗ್ರೆಸ್‌ ಕೈಬಿಟ್ಟು ತೃತೀಯ ರಂಗ ರಚಿಸುವತ್ತ ದೀದೀ: ಜೈ ಎಂದ ಠಾಕ್ರೆ, ಪವಾರ್ ಅಸಮಾಧಾನ!

ಯಾರು ಎಲ್ಲಿ ಶಕ್ತಿಶಾಲಿಯಾಗಿದ್ದಾರೋ ಅವರು ಅಲ್ಲಿ ಹೋರಾಟ ನಡೆಸಬೇಕು. ಎಲ್ಲರೂ ಈ ಹೋರಾಟದ ಭೂಮಿಯಲ್ಲಿ ಒಂದಾಗಿ ಹೋರಾಡಬೇಕು ಎಂಬುದು ನಾವು ಬಯಸುತ್ತೇವೆ. ಆದರೆ ಕೆಲವರು (ಕಾಂಗ್ರೆಸ್‌) ಹೋರಾಟ ಮಾಡಲು ಸಿದ್ಧವಿಲ್ಲವೆಂದಾದರೆ ನಾವು ಏನು ಮಾಡಲು ಸಾಧ್ಯ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಬಗ್ಗೆ ವ್ಯಂಗವಾಡಿದರು. ಜೊತೆಗೆ, ಸದಾ ಕಾಲ ವಿದೇಶದಲ್ಲೇ ಇರುವ ಮೂಲಕ ಏನನ್ನೂ ಸಾಧಿಸಲಾಗದು ಎಂದು ಹೆಸರು ಹೇಳದೆಯೇ ರಾಹುಲ್‌ ಗಾಂಧಿ ಕಾಲೆಳೆದರು.

'ನಾವು ಬಿಜೆಪಿಯನ್ನು ಕಿತ್ತುಹಾಕಿ, ದೇಶವನ್ನು ಉಳಿಸಲು ಬಯಸಿದ್ದೇವೆ'

ಈ ವೇಳೆ ಸುದ್ದಿಗಾರರು, ಶರದ್‌ ಪವಾರ್‌ ಅವರು ಯುಪಿಎ ಅನ್ನು ಮುನ್ನಡೆಸಬೇಕೇ? ಎಂದು ಪ್ರಶ್ನಿಸಿದಾಗ, ಏನು ಯುಪಿಎ? ಈಗ ಯಾವ ಯುಪಿಎನೂ ಇಲ್ಲ. ಈ ಎಲ್ಲಾ ವಿಷಯಗಳನ್ನು ನಾವು ಶೀಘ್ರವೇ ಇತ್ಯರ್ಥಗೊಳಿಸಲಿದ್ದೇವೆ ಎನ್ನುವ ಮೂಲಕ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಹೋರಾಡುವ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದರು. ಜೊತೆಗೆ ‘ನಾವು ಬಿಜೆಪಿಯನ್ನು ಕಿತ್ತುಹಾಕಿ, ದೇಶವನ್ನು ಉಳಿಸಲು ಬಯಸಿದ್ದೇವೆ. ಒಂದು ವೇಳೆ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದಾದರೆ ಬಿಜೆಪಿಯನ್ನು ಸುಲಭವಾಗಿ ಸೋಲಿಸಬಹುದು ಎನ್ನುವ ಮೂಲಕ, 2024 ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ನೇತೃತ್ವದಲ್ಲೇ ಚುನಾವಣೆ ಎದುರಿಸುವ ಸುಳಿವು ನೀಡಿದರು.

Mamata In Mumbai: ಸಿವಿಲ್ ಸೊಸೈಟಿ ಮೀಟಿಂಗ್‌ನಲ್ಲಿ ಜಾವೆದ್ ಅಖ್ತರ್, ಮಹೇಶ್ ಭಟ್ಟ್: 3ನೇ ಸಾಲಿನಲ್ಲಿ ಕೈ ನಾಯಕ!

ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ನೇತೃತ್ವವನ್ನು ವಹಿಸಿಕೊಳ್ಳುವ ಇರಾದೆಯಲ್ಲಿ ಮಮತಾ ಇದ್ದು, ಇದಕ್ಕೆ ಪೂರಕವೆಂಬಂತೆ ಹಲವು ರಾಜ್ಯಗಳ ಟಿಎಂಸಿಯನ್ನು ಸ್ಥಾಪಿಸುವ ಯತ್ನ ಆರಂಭಿಸಿದ್ದಾರೆ. ಬಂಗಾಳದಲ್ಲಿ ಪಕ್ಷವನ್ನು ಬಲಪಡಿಸಿದ ಬಳಿಕ ಅವರು ಇದೀಗ ಮೇಘಾಲಯ, ಗೋವಾ, ಹರ್ಯಾಣ, ಬಿಹಾರ, ತ್ರಿಪುರದಲ್ಲಿ ಪಕ್ಷವನ್ನು ಬಲಗೊಳಿಸುವ ಯತ್ನ ನಡೆಸಿದ್ದಾರೆ.

click me!