
ಕೋಲ್ಕತಾ : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಭಾಗಿಯಾಗಿದ್ದ 7 ನ್ಯಾಯಾಂಗ ಅಧಿಕಾರಿಗಳಿಗೆ ಮಾಲ್ಡಾದಲ್ಲಿ 9 ಗಂಟೆ ಘೇರಾವ್ ಹಾಕಿದ ಘಟನೆಯ ಮಾಸ್ಟರ್ ಮೈಂಡ್, ವಕೀಲ ಮೊಫಾಕ್ಕರುಲ್ ಇಸ್ಲಾಂ ಹಾಗೂ ಆತನ ಸಹಚರರನ್ನು ಪಶ್ಟಿಮ ಬಂಗಾಳ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 33ಕ್ಕೇರಿದೆ.
ಈ ನಡುವೆ ಮಾಲ್ಡಾ ಘಟನೆ ಹಿಂದೆ ಎಐಎಂಎ, ಐಎಸ್ಎಫ್ ಪಕ್ಷಗಳ ಕೈವಾಡ ಇದೆ. ಬಿಜೆಪಿಯು ಎಂಐಎಂನಿಂದ ಮೊಫಾಕ್ಕರುಲ್ ಇಸ್ಲಾಂನನ್ನು ಎರವಲು ಪಡೆದು ಈ ಕೃತ್ಯ ಮಾಡಿಸಿದೆ. ಐಎಸ್ಎಫ್ ಕೂಡ ಅವರ ಜತೆಗಿದೆ ಎಂದು ಪಶ್ಟಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರಚೋದನೆಯಿಂದಲೇ ಈ ರೀತಿಯ ಘಟನೆ ನಡೆದಿದೆ ಎಂದು ದೂರಿದ್ದಾರೆ.
ಮಾಲ್ಡಾ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಎಂಐಎಂ ಪಕ್ಷದ ನಾಯಕನೂ ಆಗಿರುವ ಆರೋಪಿ ಮೊಫಾಕ್ಕರುಲ್ ಇಸ್ಲಾಂನ ಬಂಧನಕ್ಕೆ ಬಲೆಬೀಸಿದ್ದರು. ಆತ ಸಿಲಿಗುರಿಯ ಬಾಗ್ಡೋಗ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಬಂಧಿಸಿದ್ದಾರೆ.
ಮಾಲ್ಡಾದ ಕಾಲಿಯಾಚಕ್ ಪ್ರದೇಶದಲ್ಲಿ ಎಸ್ಐಆರ್ ಕಾರ್ಯದಲ್ಲಿ ನಿರತ ಏಳು ನ್ಯಾಯಾಂಗ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಬುಧವಾರ ಸಂಜೆ 3.30ರಿಂದ ತಡರಾತ್ರಿ ವರೆಗೆ ಕಚೇರಿಯಲ್ಲೇ ಘೇರಾವ್ ಹಾಕಿದ್ದರು. ಈ ಘಟನೆ ಕುರಿತು ಸುಪ್ರೀಂ ಕೋರ್ಟ್ ಕೂಡ ತೀವ್ರ ಆಘಾತ ವ್ಯಕ್ತಪಡಿಸಿ ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆ ಕುರಿತು ತರಾಟೆಗೆ ತೆಗೆದುಕೊಂಡಿತ್ತು.
ಪಶ್ಟಿಮ ಬಂಗಾಳದಲ್ಲಿ ಚುನಾವಣೆಯ ಸಂದರ್ಭದಲ್ಲಿ ಮಾತ್ರವಲ್ಲದೆ ಚುನಾವಣೋತ್ತರದಲ್ಲೂ ಹಿಂಸಾಚಾರದ ಆತಂಕ ಇರುವ ಹಿನ್ನೆಲೆಯಲ್ಲಿ ಕೆಲ ದಿನ ಕೇಂದ್ರೀಯ ಪೊಲೀಸ್ ಪಡೆ(ಸಿಎಪಿಎಫ್)ಗಳ 500 ಕಂಪನಿಗಳನ್ನು ಮೇ 4ರಂದು ನಡೆಯಲಿರುವ ಮತಎಣಿಕೆಯ ಬಳಿಕವೂ ರಾಜ್ಯದಲ್ಲೇ ಉಳಿಸಿಕೊಳ್ಳಲು ಚುನಾವಣಾ ಆಯೋಗ ನಿರ್ಧರಿಸಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರ ನಡೆದಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ