
ನವದೆಹಲಿ (ಜು.11): ದೇಶದಲ್ಲಿ ಚೀತಾಗಳ ಸಂತತಿಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಬೆನ್ನುಬೆನ್ನಿಗೆ ಎನ್ನುವಂತೆ ಹಿನ್ನಡೆಗಳು ಆಗುತ್ತಿವೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್ನಲ್ಲಿ ಚೀತಾಗಳ ಸಾವಿನ ಸರಣಿ ಮುಂದುವರಿದಿದ್ದು, ಮಂಗಳವಾರ ಗಂಡು ಚೀತಾ ತೇಜಸ್ ಸಾವು ಕಂಡಿದೆ ಎಂದು ಪಾರ್ಕ್ನ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚೀತಾಗಳು ನಿರಂತರವಾಗಿ ಸಾವು ಕಂಡಿದ್ದ ಹಿನ್ನಲೆಯಲ್ಲಿ ಎಲ್ಲಾ ಚೀತಾಗಳನ್ನು ಬಂಧಿತ ಪ್ರದೇಶದಲ್ಲಿ ಬಿಡಲಾಗಿತ್ತು. ಈ ವೇಳೆ ಮಂಗಳವಾರ ಬೆಳಗ್ಗೆ ತೇಜಸ್ ಚೀತಾದ ಕುತ್ತಿಗೆಯ ಬಳಿ ತೀವ್ರ ಗಾಯವಾದ ಗುರುತು ಸಿಕ್ಕಿತ್ತು. ಆದರೆ, ಗಾಯ ಹೇಗೆ ಆಯಿತು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇದೇ ಕಾರಣದಿಂದಾಗಿ ಚೀತಾ ಸಾವು ಕಂಡಿದೆ. ಈ ಬಗ್ಗೆ ಕುನೋ ಡಿಎಫ್ಒ ಪಿ.ಕೆ ವರ್ಮಾ ಮಾತನಾಡಿದ್ದು, ಬಂಧಿತ ಆವರಣದಲ್ಲಿ ಬೇರೆ ಯಾವ ಚೀತಾಗಳು ಇದ್ದಿರಲಿಲ್ಲ. ಎಲ್ಲಾ ಐದೂ ಚೀತಾಗಳನ್ನು ಭಿನ್ನ ಆವರಣದಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.
ಲಭ್ಯ ಮಾಹಿತಿಗಳ ಪ್ರಕಾರ ಬೆಳಗ್ಗೆ 11 ಗಂಟೆಯ ವೇಳೆಗೆ, ತೇಜಸ್ ಚೀತಾದ ಕುತ್ತಿಗೆಯ ಮೇಲ್ಭಾಗದಲ್ಲಿ ಆಗಿರುವ ಗಾಯವನ್ನು ಗಮನಿಸಿದ್ದರು. ತಕ್ಷಣವೇ ಇದರ ಮಾಹಿತಿಯನ್ನು ಫಲ್ಪುರ ಕೇಂದ್ರಕಚೇರಿಯಲ್ಲಿದ್ದ ವೈದ್ಯರಿಗೆ ಇದರ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ವೈದ್ಯರು ತೇಜಸ್ ಚೀತಾದ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಚೀತಾಗೆ ಆಗಿದ್ದ ಗಾಯಗಳು ಗಂಭೀರವಾದವು ಎನ್ನುವುದು ತಿಳಿದುಬಂದಿದೆ. ಆದರೆ, ತೇಜಸ್ ಸಂಪೂರ್ಣವಾಗಿ ನಿತ್ರಾಣವಾಗಿದ್ದ. ವೈದ್ಯರ ತಂಡ ಸಕಲ ಸಿದ್ದತೆಯೊಂದಿಗೆ ಚಿಕಿತ್ಸೆ ನೀಡಲು ಸ್ಥಳಕ್ಕೆ ಆಗಮಿಸುವ ವೇಳೆಗೆ ಗಂಡು ಚಿರತೆ ಮಧ್ಯಾಹ್ನ 2 ಗಂಟೆಯ ಹಾಗೆ ಸಾವು ಕಂಡಿದೆ. ತೇಜಸ್ಗೆ ಆಗಿರುವ ಗಾಯಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿಯಬಹುದು ಎನ್ನಲಾಗಿದೆ. ಒಟ್ಟಾರೆ ಕಳೆದ ಐದು ತಿಂಗಳಲ್ಲಿ ಇದು ಏಳನೇ ಚೀತಾದ ಸಾವು ಎನಿಸಿದೆ.
ನಾಲ್ಕು ಚೀತಾ, ಮೂರು ಮರಿಗಳ ಸಾವು: ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ತಂದ ಒಟ್ಟು 20 ಚಿರತೆಗಳ ಪೈಕಿ ಇದುವರೆಗಿನ ನಾಲ್ಕು ಚೀತಾಗಳು ಸಾವು ಕಂಡಿದೆ. ಅದರೊಂದಿಗೆ ಇಲ್ಲಿ ಜನಿಸಿದ ನಾಲ್ಕು ಮರಿಗಳ ಪೈಕಿ ಮೂರು ಮರಿಗಳೂ ಸಾವನ್ನಪ್ಪಿವೆ. ಸದ್ಯ 12 ಚಿರತೆಗಳು ತೆರೆದ ಅರಣ್ಯದಲ್ಲಿವೆ.
ಕುನೋದಲ್ಲಿ ಆಗಿರುವ ಚೀತಾ ಸಾವುಗಳು
1. ಮಾರ್ಚ್ 27 ರಂದು, 4 ವರ್ಷದ ಹೆಣ್ಣು ಚಿರತೆ ಸಾಶಾ ಮೂತ್ರಪಿಂಡದ ಸೋಂಕಿನಿಂದ ಸಾವು ಕಂಡಿತು
2. ಏಪ್ರಿಲ್ 23 ರಂದು ಉದಯ್ ಚೀತಾ ಹೃದಯಾಘಾತದಿಂದ ನಿಧನವಾಯಿತು. ಅರಣ್ಯದಲ್ಲಿ ಏಕಾಏಖಿಯಾಗಿ ಚೀತಾ ಮೂರ್ಛೆ ತಪ್ಪಿ ಬಿದ್ದು ಸಾವು ಕಂಡಿತ್ತು.
3. ಮೇ 9 ರಂದು, ದಕ್ಷ ಚೀತಾ ಆವರಣದಲ್ಲಿ ಎರಡು ಗಂಡು ಚೀತಾಗಳಾದ ಅಗ್ನಿ ಮತ್ತು ವಾಯು ಜೊತೆ ಸಂಭೋಗದ ಸಮಯದಲ್ಲಿ ಸಾವು ಕಂಡಿತ್ತು.
4. ಮೇ 23 ರಂದು ಚೀತಾ ಮರಿ ಸಾವನ್ನಪ್ಪಿತ್ತು. ಇದು ಜ್ವಾಲಾ ಚೀತಾದ ಮೊದಲ ಮರಿಯಾಗಿತ್ತು.
5. ಮೇ 25ರಂದು ಜ್ವಾಲಾಳ ಇನ್ನೆರಡು ಮರಿಗಳು ಸಾವನ್ನಪ್ಪಿದ್ದವು.
6 ಸಾವಿನ ಬೆನ್ನಲ್ಲೇ ಕುನೋ ಅರಣ್ಯಕ್ಕೆ ನಮೀಬಿಯಾದಿಂದ ಬರುತ್ತಿದೆ ಮತ್ತೆ 7 ಚೀತಾ!
6. ಜುಲೈ 11 ರಂದು ಚೀತಾ ತೇಜಸ್ ಸಾವನ್ನಪ್ಪಿದೆ. ಇದು ದಕ್ಷಿಣ ಆಫ್ರಿಕಾದಿಂದ ಬಂದ ಚೀತಾ ಆಗಿತ್ತು.
ಕುನೋ ಪಾರ್ಕ್ನಲ್ಲಿ ಮತ್ತೆರಡು ಚೀತಾ ಮರಿ ಸಾವು, ಎರಡು ತಿಂಗಳಲ್ಲಿ 6 ಚೀತಾ ಸಾವು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ