ನೈಜೀರಿಯಾದಿಂದ ಚೀತಾ ಆಮದು ಮಾಡಿಕೊಂಡಿರುವ ಕೇಂದ್ರ ಬಿಜೆಪಿ ನಿರ್ಧಾರ ಅವೈಜ್ಞಾನಿಕ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಇದಕ್ಕೆ ನೀಡಿರುವ ಕಾರಣದಿಂದ ಕಾಂಗ್ರೆಸ್ ಪೇಚಿಗೆ ಸಿಲುಕಿದೆ.
ಮುಂಬೈ(ಅ.03): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭಾರತದಲ್ಲಿ ಅಳಿದು ಹೋದ ಚೀತಾ ಸಂತತಿಯನ್ನು ಮತ್ತೆ ವೃದ್ಧಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಇದರ ಪ್ರಕಾರ ಆಫ್ರಿಕಾದ 8 ಚೀತಾಗಳು ಭಾರತಕ್ಕೆ ಆಗಮಿಸಿತ್ತು. ಕೇಂದ್ರದ ತ್ವರಿತಗತಿಯ ಕಾರ್ಯಪ್ರವೃತ್ತಿಯಿಂದ ಭಾರತದ ಕಾಡಿಗೆ ಮತ್ತೆ ಚೀತಾ ಲಗ್ಗೆ ಇಟ್ಟಿತು. ಇದು ಐತಿಹಾಸಿಕ ಎಂದು ಬಣ್ಣಿಸಲಾಗಿತ್ತು. ಇಷ್ಟೇ ಅಲ್ಲ ಇದರ ಶ್ರೇಯಸ್ಸಿನ ಸಂಪೂರ್ಣ ಲಾಭ ಬಿಜೆಪಿಗೆ ನೀಡಲು ಕಾಂಗ್ರೆಸ್ ನಿರಾಕರಿಸಿದೆ. ಇದರಲ್ಲಿ ನಮ್ಮ ಪಾಲು ಇದೆ ಎಂದು ಅಂದಿಮ ಪರಿಸರ ಹಾಗೂ ಅರಣ್ಯ ಸಚಿವ ಜೈರಾಮ್ ರಮೇಶ್ ಅವರ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿತ್ತು. ಇವೆಲ್ಲಾ ಮುಗಿದ ಅಧ್ಯಾಯ. ಇದೀಗ ಬಿಜೆಪಿ ವಿರುದ್ಧ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಳೆ ಹೊಸ ಬಾಂಬ್ ಸಿಡಿಸಿದ್ದಾರೆ. ಕೇಂದ್ರ ಬಿಜೆಪಿ ನೈಜೀರಿಯಾದಿಂದ ಚೀತಾ ಆಮದು ಮಾಡಿಕೊಂಡಿರುವುದು ಅವೈಜ್ಞಾನಿಕ ನಿರ್ಧಾರವಾಗಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಇದು ಭಾರತದ ರೈತರಿಗೆ ಸಂಕಷ್ಟ ನೀಡಲು ಆಫ್ರಿಕಾದಿಂದ ಚೀತಾ ತರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ನೈಜೀರಿಯಾದಲ್ಲಿ(nigeria cheetah) ಲಂಪಿ ವೈರಸ್(Lumpi Virus) ಚರ್ಮರೋಗ ಭಾರಿ ಪ್ರಮಾಣದಲ್ಲಿದೆ. ಕಳೆದ 3 ತಿಂಗಳಿನಿಂದ ತೀವ್ರವಾಗಿದೆ. ಈ ಲಂಪಿ ವೈರಸ್ ಅತೀ ವೇಗವಾಗಿ ಜಾನುವಾರುಗಳಿಗೆ ಹರಡಲಿದೆ. ಇದರಿಂದ ಭಾರತದ ರೈತರಿಗೆ(Farmer) ಸಮಸ್ಯೆಯಾಗಲಿದೆ. ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲು ಕೇಂದ್ರ ಬಿಜೆಪಿ(BJP) ಈ ನಿರ್ಧಾರ ತೆಗೆದುಕೊಂಡಿದೆ. ಕಳೆದ ತಿಂಗಳು ಮಧ್ಯ ಪ್ರದೇಶ ಕುನು ರಾಷ್ಟ್ರೀಯ ಸಂರಕ್ಷಿತ ಅರಣ್ಯದಲ್ಲಿ ಬಿಟ್ಟಿರುವ ಚೀತಾಗಳು ಇದೇ ಲಂಪಿ ವೈರಸ್ ಇರುವ ನೈಜೀರಿಯಾದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ನಾನಾ ಪಟೋಳೆ ಆರೋಪಿಸಿದ್ದಾರೆ.
ಚೀತಾ ನಮ್ಮ ಅತಿಥಿಗಳು, ತಾಳ್ಮೆ ವಹಿಸಿ, ಅವುಗಳನ್ನು ನೋಡೋಕೆ ಮುಗಿ ಬೀಳ್ಬೇಡಿ: ಪ್ರಧಾನಿ ಮೋದಿ ಮನವಿ
ರೈತರ ವಿರುದ್ಧ ಬಿಜೆಪಿ ಮಾಡಿರುವ ಮತ್ತೊಂದು ಅತೀ ದೊಡ್ಡ ಪಿತೂರಿ ಎಂದು ನಾನಾ ಪಟೋಳೆ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಇವೆಲ್ಲಾ ಮಾಡುತ್ತಿದೆ ಎಂದು ಪಟೋಳೆ ಆರೋಪಿಸಿದ್ದಾರೆ. ಇನ್ನು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಆರೋಪಕ್ಕೆ ಮಹಾ ಕಾಂಗ್ರೆಸ್ ನಾಯಕರು ಹೌದು ಹೌದು ಎಂದು ತಲೆಯಾಡಿಸಿದ್ದಾರೆ. ಆದರೆ ಈ ಹೇಳಿಕೆಯಿಂದ ಕಾಂಗ್ರೆಸ್ ಪೇಚಿಗೆ ಸಿಲುಕಿದೆ.
ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಇದು ಇಡೀ ಕಾಂಗ್ರೆಸ್ ಅಭಿಪ್ರಾಯವಾಗಿದ್ದರೆ, ಎಲ್ಲಾ ನಾಯಕರಿಗೂ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಬಿಜೆಪಿ ತಿುಗೇಟು ನೀಡಿದೆ. ಭಾರತಕ್ಕೆ ನಮೀಬಿಯಾದಿಂದ ಚೀತಾ ತರಲಾಗಿದೆ. ಎಲ್ಲಾ ಪರೀಕ್ಷೆಗಳಿಗೆ ಒಳಪಡಿಸಿ, ಇಲ್ಲಿಯ ವಾತಾವರಣ ಅಧ್ಯಯನ ಮಾಡಿದ ಬಳಿಕ ತಜ್ಞ ವೈದ್ಯರ ಅನುಮೋದನೆ ಪಡೆದು ಚೀತಾ ತರಲಾಗಿದೆ. ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ನಮೀಬಿಯಾದಿಂದ ಚೀತಾ ತರಲಾಗಿದೆ. ಭಾರತದಲ್ಲಿ ಜಾನುವಾರುಗಳಲ್ಲಿನ ಚರ್ಮ ರೋಗ ಎಪ್ರಿಲ್ ತಿಂಗಳಲ್ಲಿ ಪತ್ತೆಯಾಗಿದೆ ಎಂದು ಬಿಜೆಪಿ ಶಾಸಕ ರಾಮ್ ಕದಮ್ ಹೇಳಿದ್ದಾರೆ.
ಇದು ಆರಂಭ ಮಾತ್ರ, ದಕ್ಷಿಣ ಆಫ್ರಿಕಾ, ನಮೀಬಿಯಾದಿಂದ ಭಾರತಕ್ಕೆ ಬರಲಿದೆ 500 ಚೀತಾ!
ನಮೀಬಿಯಾದಿಂದ ಬಂದ ಚೀತಾ ‘ಆಶಾ’ ಗರ್ಭಿಣಿ
ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ‘ಆಶಾ’ ಎಂಬ ಚೀತಾ ಗರ್ಭಿಣಿ ಎಂಬ ಸುದ್ದಿ ಹೊರಬಿದ್ದಿದೆ.ಭಾರತದಲ್ಲಿ ನಶಿಸಿಹೋಗಿದ್ದ ಚೀತಾ ಸಂತತಿಗೆ ಮರು ಜೀವ ನೀಡುವ ಸಲುವಾಗಿ ಚೀತಾ ಪ್ರಾಜೆಕ್ಟ್ ಆರಂಭಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ಮಧ್ಯಪ್ರದೇಶದ ಕುನೋ ಅರಣ್ಯಕ್ಕೆ ತಂದು ಬಿಡಲಾಗಿತ್ತು. ಇವುಗಳ ಪೈಕಿ ಆಶಾ ಎಂಬ ಚೀತಾ ಗರ್ಭಿಣಿಯಾಗಿರುವ ಲಕ್ಷಣಗಳು ಕಂಡುಬಂದಿವೆ. ಇದಕ್ಕಾಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.