ದಕ್ಷಿಣದಲ್ಲಿ ಬಿಜೆಪಿ ಏಕೈಕ ಅತೀ ದೊಡ್ಡ ಪಕ್ಷ, ವಿಶೇಷ ಸಂದರ್ಶನದಲ್ಲಿ ಮೋದಿ ಬಿಚ್ಚಿಟ್ಟ ಸೂತ್ರ!

By Suvarna NewsFirst Published Apr 20, 2024, 9:10 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಕರ್ನಾಟಕ, ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಾಶಸ್ತ್ಯ, ಸಾಮರ್ಥ್ಯ ಹಾಗೂ ಈ ಬಾರಿಯ ಫಲಿತಾಂಶದ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವ ಹಾಗೂ 2024ರ ಫಲಿತಾಂಶ ಕುರಿತು ಮೋದಿ ಹೇಳಿದ್ದೇನು?
 

ನವದೆಹಲಿ(ಏ.20) ಲೋಕಸಭಾ ಚುನಾವಣೆ 2024 ಹಲವು ಕುತೂಹಲಗಳಿಗೆ ಕಾರಣವಾಗಿದೆ. ಪ್ರಮುಖವಾಗಿ ಬಿಜೆಪಿ ದಕ್ಷಿಣ ಭಾರತದಲ್ಲಿ ಹೊಸ ಇತಿಹಾಸ ರಚಿಸಲು ಶ್ರಮವಹಿಸುತ್ತಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಬಿಜೆಪಿ ನಾಯಕರು ದಕ್ಷಿಣ ಭಾರತದಲ್ಲಿ ಹೆಚ್ಚಿನ ಪ್ರಚಾರ, ಸಮಾವೇಶ, ರ್ಯಾಲಿಗಳನ್ನು ಆಯೋದಿಸಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಜೊತೆ ಏಷ್ಯಾನೆಟ್ ಸುವರ್ಣನ್ಯೂಸ್, ಕನ್ನಡಪ್ರಭ ಹಾಗೂ ಏಷ್ಯಾನೆಟ್ ನ್ಯೂಸ್.ಕಾಂ ನಡೆಸಿದ ನಡೆಸಿದ ಸಂದರ್ಶನದಲ್ಲಿ ಮಹತ್ವದ ವಿಚಾರ ಬಿಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ 2019ರಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿದೆ. ಈ ಬಾರಿ ವೋಟ್ ಶೇರ್ ಹೆಚ್ಚಾಗಲಿದೆ. ದಕ್ಷಿಣ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದಿದ್ದಾರೆ.

ಅಜಿತ್ ಹನಮಕ್ಕನವರ್ ಪ್ರಶ್ನೆ:
ಈ ಲೋಕಸಭಾ ಚುನಾವಣೆಗೆ ಬಿಜೆಪಿ ದಕ್ಷಿಣ ರಾಜ್ಯಗಳನ್ನು ಹೆಚ್ಚಾಗಿ ಕೇಂದ್ರೀಕರಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಹೆಚ್ಚು ಪ್ರಚಾರ ಮಾಡಿದ್ದೀರಿ, ಆದರೆ ಪರಿಣಾಮ ಬೀರಲಿಲ್ಲ, ತೆಲಂಗಾಣದಲ್ಲೂ ಇದಕ್ಕಿಂತ ಭಿನ್ನವಾಗಿಲ್ಲ. ದಕ್ಷಿಣ 131 ಸ್ಥಾನಗಳ ಪೈಕಿ 50ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಭವಸೆ ಇಟ್ಟೀದೀರಾ? ಇದು ಸಾಧ್ಯವಾಗುತ್ತಾ?  

ಪ್ರಧಾನಿ ಮೋದಿ ಉತ್ತರ: 
ನಮ್ಮ ದೇಶದಲ್ಲಿ ಮೊದಲಿನಿಂದಲೂ ಒಂದು ಅಜೆಂಡಾ ಮಾಡಿಬಿಟ್ಟಿದ್ದರು. ಬಿಜೆಪಿ ಮೇಲ್ವರ್ಗದ ಪಕ್ಷ ಅನ್ನೋದು ಈ ಅಜೆಂಡ. ಸತ್ಯ ಏನೆಂದರೆ ಬಿಜೆಪಿಯಲ್ಲಿ ಅತಿಹೆಚ್ಚು ಪರಿಶಿಷ್ಟ ಜಾತಿಯವರಿದ್ದಾರೆ. ಅತಿ ಹೆಚ್ಚು ಪರಿಶಿಷ್ಟ ಪಂಗಡದವರಿದ್ದಾರೆ, ಅತಿ ಹೆಚ್ಚು ಒಬಿಸಿಯವರಿದ್ದಾರೆ. ನನ್ನ ಸಂಪುಟದಲ್ಲಿ ಅತಿ ಹೆಚ್ಚು ಒಬಿಸಿಯವರಿದ್ದಾರೆ. ಇದಾದ ಬಳಿಕ ಬಿಜೆಪಿ ನಗರವಾಸಿಗಳ ಪಕ್ಷ ಎಂದು ಆರೋಪಿಸಿದರು. ಈಗ ನಮ್ಮ ಪಕ್ಷ ಹೇಗಿದೆ ಅಂದ್ರೆ ಹಳ್ಳಿಯ ಜನರೇ ಹೆಚ್ಚಿದ್ದಾರೆ. ಬಿಜೆಪಿ ಸಾಂಪ್ರದಾಯಿಕ ಮನೋಭಾವದ ಪಕ್ಷ, ಅದು ಹೊಸದಾಗಿ ಏನು ಯೋಚಿಸೋದಿಲ್ಲ ಅನ್ನೋ ಆರೋಪವನ್ನು ಮಾಡಿದ್ದರು. ಈಗ ಇಡೀ ವಿಶ್ವದಲ್ಲಿ ಡಿಜಿಟಲ್ ಆಂದೋಲನದ ನೇತೃತ್ವವನ್ನ ಯಾರು ವಹಿಸಿದ್ದಾರೆ? ಬಿಜೆಪಿ ನೇತೃತ್ವದ ಸರ್ಕಾರ ಈ ಕೆಲಸ ಮಾಡುತ್ತಿದೆ. ಅವರು ಈ ರೀತಿಯ ಭ್ರಮೆಯನ್ನು ಸೃಷ್ಟಿಸಿದ್ರು. ಅದು ತಪ್ಪು ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದರೆ.

ಎರಡನೇಯದ್ದಾಗಿ ತೆಲಂಗಾಣ ನೋಡಿ, ಮೊದಲ ಅಲ್ಲಿ ನಮ್ಮ ವೋಟ್ ಶೇರ್ ಎಷ್ಟಿತ್ತು..? ಈಗ ಅಲ್ಲಿ ನಮ್ಮ ವೋಟ್ ಶೇರ್ ಎರಡು ಪಟ್ಟು ಹೆಚ್ಚಾಗಿದೆ. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿನ ಫಲಿತಾಂಶದ ಅಸಲಿ ಸತ್ಯ ಎಷ್ಟೋ ಜನರಿಗೆ ಗೊತ್ತಿಲ್ಲ. ದಕ್ಷಿಣ ಭಾರತದಲ್ಲಿ 2019ರಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷ. ಅತಿ ಹೆಚ್ಚು ಸಂಸದರು ಬಿಜೆಪಿಯವರೇ. 2024ರಲ್ಲಿ ಬಿಜೆಪಿ ವೋಟ್ ಶೇರ್ ಕೂಡ ಹೆಚ್ಚಾಗುತ್ತೆ, ಜತೆಗೆ ಸೀಟು ಕೂಡ ಹೆಚ್ಚಾಗುತ್ತೆ ಎಂದು ನನಗೆ ಅನಿಸುತ್ತದೆ ಎಂದು ಮೋದಿ ಹೇಳಿದರು.

ದಕ್ಷಿಣ ಭಾರತದಲ್ಲಿ ಸರ್ಕಾರಗಳಿವೆಯಲ್ಲ ಏನ್ ಹೇಳ್ತಾರೆ ಗೊತ್ತಾ? ಕಾಂಗ್ರೆಸ್ ಇರಬಹುದು. ಎಲ್‌ಡಿಎಪ್ ಇರಬಹುದು, ಡಿಎಂಕೆ ಇರಬಹುದು. ಎಲ್ಲಾ ಕಡೆ ಚರ್ಚೆ ಇದೆ. ಪುದುಚೇರಿಯಲ್ಲಿ ನಮ್ಮದೇ ಸರ್ಕಾರವಿದೆ. ಅದು ದಕ್ಷಿಣದಲ್ಲೇ ಇರೋದು. ಅಂಡಮಾನ್ ಹಾಗೂ ನಿಕೋಬಾರ್ ಅಲ್ಲಿ ನಮ್ಮ ಸಂಸದರೇ ಗೆದ್ದಿರೋದು. ಅಲ್ಲಿ ಹೆಚ್ಚು ಇರೋದೇ ದಕ್ಷಿಣ ಭಾರತದವರು ಹಾಗೂ ಬೆಂಗಾಲಿ ಮಾತಾಡುವವರೂ ಇದ್ದಾರೆ.

ಈಗ ಅಲ್ಲಿ ಸರಳೀಕರಣವಾಗುತ್ತಿದೆ. ಕುಟುಂಬಗಳು ನಡೆಸುತ್ತಿರುವ ಸರ್ಕಾರಗಳಲ್ಲಿ ಅಖಂಡ ಭ್ರಷ್ಟಾಚಾರವಿದೆ. ಅಲ್ಲಿ ಏನ್ ವಾತಾವರಣ ಇದೆ ಅಂದ್ರೆ, ಕಾಂಗ್ರೆಸ್‌ನ  ಯುವರಾಜ ಉತ್ತರದಿಂದ ಓಡಿಬಂದು ದಕ್ಷಿಣದಲ್ಲಿ ಆಶ್ರಯ ಪಡೆದಿದ್ದಾರೆ. ವಯನಾಡಿಗೆ ಬಂದಿದ್ದಾರೆ. ಈ ಬಾರಿ ಅವರ ಪ್ಲ್ಯಾನ್ ಏನು ಅಂದ್ರೆ, 26ನೇ ತಾರೀಖು ವಯನಾಡು ಮತದಾನ ಮುಗಿದ ಬಳಿಕ, ಅವರು ಇನ್ನೊಂದು ಕಡೆ ಸ್ಪರ್ಧೆ ಘೋಷಣೆ ಮಾಡಲಿದ್ದಾರೆ. ಮತ್ತೊಂದು ಕ್ಷೇತ್ರಕ್ಕಾಗಿ ಹುಡುಕಾಟ ಶುರು ಮಾಡಿದ್ದಾರೆ. ನನ್ನ ಮಾತುಗಳನ್ನ ಬರೆದಿಟ್ಟುಕೊಳ್ಳಿ. ಅವರ ದೊಡ್ಡ ದೊಡ್ಡ ನಾಯಕರು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ರಾಜ್ಯಸಭೆಗೆ ಹೋಗ್ತಾರೆ ಎಂದು ಒಂದು ಬಾರಿ ಸಂಸತ್ತಿನಲ್ಲಿ ನಾನೇ ಹೇಳಿದ್ದೆ. ನಾನು ಹೇಳಿದ ಒಂದು ತಿಂಗಳ ನಂತರ ಅವರ ದೊಡ್ಡ ನಾಯಕರು ರಾಜ್ಯಸಭೆಗೆ ಬಂದರು. ಲೋಕಸಭೆಯನ್ನ ತ್ಯಜಿಸಿದರು. ಅವರು ಸೋಲನ್ನ ಮೊದಲೇ ಒಪ್ಪಿಕೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ನನಗೆ ಈ ಬಾರಿ ನಂಬಿಕೆ ಇದೆ. ಶ್ರೀರಾಮ ಮಂದಿರದ ಅನುಷ್ಟಾನದಲ್ಲಿ ಇದ್ದಾಗ, ದಕ್ಷಿಣ ಭಾರತಕ್ಕೆ ಹೋದಾಗ ಜನರಲ್ಲಿದ್ದ ಪ್ರೀತಿ, ವಿಶ್ವಾಸವನ್ನ ನಾನು ನೋಡಿದ್ದೇನೆ. ಅದು ಅಭೂತಪೂರ್ವವಾಗಿತ್ತು. ದಕ್ಷಿಣ ಭಾರತದ ಬಗ್ಗೆ ಇರೋ ಕಟ್ಟುಕಥೆಗಳನ್ನ ಜನ ಹೊಡೆದು ಹಾಕುತ್ತಾರೆ ಎಂದು ನಾನು ನಂಬುತ್ತೇನೆ. ಅತೀ ಶೀಘ್ರದಲ್ಲೇ ನಮ್ಮ ಸಂಸದರಿಗೆ ಸೇವೆ ಮಾಡೋದಕ್ಕೆ ಅವಕಾಶ ಸಿಗಲಿದೆ. ಈ ಚುನಾವಣೆಯಲ್ಲಿ ಅತಿ ಹೆಚ್ಚು ನಮ್ಮ ಸಂಸದರು ನನ್ನ ಜೊತೆ ಕೆಲಸ ಮಾಡೋಕೆ ಬರುತ್ತಾರೆ. ಈ ಬಾರಿ ವೋಟ್ ಶೇರ್ ಅತಿ ಹೆಚ್ಚಾಗಲಿದೆ ಎಂದು ವಿಶೇಷ ಸಂದರ್ಶನದಲ್ಲಿ ಮೋದಿ ಹೇಳಿದ್ದಾರೆ.

click me!