ಜಾತ್ರೆಯಲ್ಲಿ ಕುಸಿದು ಬಿದ್ದ 60 ಅಡಿ ಎತ್ತರದ ಜಾಯಿಂಟ್ ವೀಲ್; 30ಕ್ಕೂ ಹೆಚ್ಚು ಮಂದಿಗೆ ಗಾಯ!

Published : Apr 04, 2026, 05:09 PM IST
uttar pradesh swing ride

ಸಾರಾಂಶ

ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದ ವಾರ್ಷಿಕ ಜಾತ್ರೆಯಲ್ಲಿ 60 ಅಡಿ ಎತ್ತರದ ದೈತ್ಯ ಜಾಯಿಂಟ್ ವೀಲ್ ಕುಸಿದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಹೊತ್ತಿದ್ದರಿಂದ ಹಾಗೂ ದುರ್ಬಲ ಬುನಾದಿಯಿಂದಾಗಿ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. 

ಕುಶಿನಗರ (ಉತ್ತರ ಪ್ರದೇಶ): ವಾರ್ಷಿಕ ಜಾತ್ರೆಯ ಸಂಭ್ರಮದಲ್ಲಿದ್ದ ಜನರಿಗೆ ಬುಧವಾರ ರಾತ್ರಿ ಅನಿರೀಕ್ಷಿತ ಆಘಾತ ಕಾದಿತ್ತು. ಖಡ್ಡಾ ಪ್ರದೇಶದ ಭೈಂಸಹಾ (ಚೈತ್ ಬರ್ನಿ) ಮೇಳದಲ್ಲಿ ಕಾರ್ಯಾಚರಣೆಯಲ್ಲಿದ್ದ 60 ಅಡಿ ಎತ್ತರದ ದೈತ್ಯ ಜಾಯಿಂಟ್ ವೀಲ್ (ಸ್ವಿಂಗ್ ರೈಡ್) ದಿಢೀರನೆ ಕುಸಿದು ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ರೈಡ್ ಕುಸಿದು ಬಿದ್ದಾಗ ಅದರಲ್ಲಿ ಸುಮಾರು 80 ಮಂದಿ ಇದ್ದರು. ಇದು ರೈಡ್‌ನ ಸಾಮರ್ಥ್ಯಕ್ಕಿಂತ ಮೀರಿದ ಸಂಖ್ಯೆಯಾಗಿದೆ. ರೈಡ್ ಎರಡು ಸುತ್ತು ತಿರುಗಿದ ನಂತರ ವಿಚಿತ್ರವಾದ ಸದ್ದು ಕೇಳಿಬಂದಿದೆ, ಇದು ಅದರಲ್ಲಿನ ಸಮಸ್ಯೆಯ ಮುನ್ಸೂಚನೆ ಆಗಿತತು. ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದರೂ, ಆಪರೇಟರ್ ರೈಡ್ ಅನ್ನು ನಿಲ್ಲಿಸದೆ ಮುಂದುವರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೆಲವೇ ಕ್ಷಣಗಳಲ್ಲಿ ರೈಡ್‌ನ ಬುನಾದಿ ಕಿತ್ತುಬಂದು ಇಡೀ ದೈತ್ಯ ರಚನೆಯು ನೆಲಕ್ಕೆ ಅಪ್ಪಳಿಸಿತು. ಇದರಿಂದಾಗಿ ರೈಡ್‌ನಲ್ಲಿದ್ದ ಹಲವರು ನೆಲಕ್ಕೆ ಬಿದ್ದು ಗಾಯಗೊಂಡರೆ, ಇನ್ನು ಕೆಲವರು ಕಬ್ಬಿಣದ ರಾಡ್‌ಗಳ ಅಡಿಯಲ್ಲಿ ಸಿಲುಕಿಕೊಂಡರು. ಈ ಘಟನೆಯಿಂದ ಜಾತ್ರಾ ಸ್ಥಳದಲ್ಲಿ ಜನಜಂಗುಳಿ ಮತ್ತು ಭೀತಿಯ ವಾತಾವರಣ ನಿರ್ಮಾಣವಾಯಿತು.

ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು. ಬೃಹತ್ ಲೋಹದ ರಚನೆಯ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆಯಲು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಿಸಬೇಕಾಯಿತು. ಆರು ಆಂಬ್ಯುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಗಂಭೀರವಾಗಿ ಗಾಯಗೊಂಡ 10ಕ್ಕೂ ಹೆಚ್ಚು ಮಂದಿಯನ್ನು ಜಿಲ್ಲಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದು, ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.

ಭೈಂಸಹಾ ಮೇಳದ ಹಿನ್ನೆಲೆ

ನಾರಾಯಣಿ ನದಿಯ ದಡದಲ್ಲಿರುವ ದುರ್ಗಾ ದೇವಾಲಯದ ಬಳಿ ಪ್ರತಿವರ್ಷ ಚೈತ್ರ ಪೂರ್ಣಿಮೆಯ ಸಂದರ್ಭದಲ್ಲಿ ಈ ಜಾತ್ರೆ ನಡೆಯುತ್ತದೆ. ಇಲ್ಲಿಗೆ ಉತ್ತರ ಪ್ರದೇಶದ ಪೂರ್ವ ಭಾಗ, ನೆರೆಯ ಬಿಹಾರ ಮತ್ತು ನೇಪಾಳದಿಂದ ಸಾವಿರಾರು ಜನರು ಭೇಟಿ ನೀಡುತ್ತಾರೆ. ಈ ವರ್ಷ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದು ದುರಂತಕ್ಕೆ ಕಾರಣವಾಯಿತು ಎನ್ನಲಾಗಿದೆ.

ರೈಡ್‌ನ ತಳಭಾಗವು ದುರ್ಬಲವಾಗಿದ್ದು, ಸರಿಯಾಗಿ ಅಳವಡಿಸಿರಲಿಲ್ಲ. ಅತಿಯಾದ ತೂಕವನ್ನು ತಡೆದುಕೊಳ್ಳುವ ಶಕ್ತಿ ಅದಕ್ಕೆ ಇರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಧಿಕಾರಿಗಳು ಈಗ ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಕಾರ್ಯಾಚರಣೆಯ ವೈಫಲ್ಯಗಳ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಏಳು ನ್ಯಾಯಾಂಗ ಅಧಿಕಾರಿಗಳಿಗೆ ಮಾಲ್ಡಾ ದಿಗ್ಬಂದನ ಸಂಚುಕೋರ ಬೆಂಗಳೂರಿಗೆ ಪರಾರಿ ವೇಳೆ ಸೆರೆ, ಏರ್ಪೋರ್ಟಲ್ಲಿ ಬಂಧನ
ಇಮಾಮ್ ಮುಖ್ಯಸ್ಥ ಉಮರ್ ಸ್ಫೋಟಕ ಭವಿಷ್ಯ, ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಘರ್ ವಾಪ್ಸಿ