ಲೋಹಗಢ್ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಸಿನಿಮಾ ಕಥೆಯನ್ನೂ ಮೀರಿಸುವಂತಿದೆ. ಮದುವೆಯಾಗಲಿರುವ ಭಾವಿ ಪತಿಯನ್ನು ಕೊಲ್ಲಲು ಸಿಯಾ ಗೋಯಲ್ ತನ್ನ ಪ್ರಿಯಕರನೊಂದಿಗೆ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದಳು. ಇದೀಗ ವೇಷ ಬದಲಾವಣೆ, ಗೂಗಲ್ನಲ್ಲಿ ಪೊಲೀಸ್ ಪ್ರಶ್ನೆಗಳಿಗಾಗಿ ಸರ್ಚ್ ಮತ್ತು ಸಾಕ್ಷ್ಯ ನಾಶದಂತಹ ಆಘಾತಕಾರಿ ವಿವರಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ.
ಹೌದು. ಪುಣೆ ಮೂಲದ ಉದ್ಯಮಿ ಕೇತನ್ ಅಗರ್ವಾಲ್ ಅವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳ ಕ್ರೌರ್ಯ ಮತ್ತು ಚಾಣಾಕ್ಷತನದ ಒಂದೊಂದೇ ಪುರಾವೆಗಳು ಸಿಗುತ್ತಿವೆ. ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಈ ಕೃತ್ಯ ಎಸಗಿದ್ದಾರೆ ಎಂಬುದು ಈಗ ದೃಢಪಟ್ಟಿದೆ.
ಪೊಲೀಸರ ಪ್ರಕಾರ, ಆರೋಪಿ ಚೇತನ್ ಚೌಧರಿ ಕೊಲೆ ಮಾಡುವ ಮೊದಲು ಮತ್ತು ನಂತರ ತನ್ನ ವೇಷವನ್ನು ಬದಲಿಸಿಕೊಂಡಿದ್ದ. ಕೊಲೆಯ ದಿನ ಚೇತನ್ ಹೂಡಿ (Hoodie) ಧರಿಸಿ ಮುಖ ಮುಚ್ಚಿಕೊಂಡು ಲೋಹಗಢ್ ಕೋಟೆಗೆ ಬಂದಿದ್ದ. ಕೇತನ್ ಅಗರ್ವಾಲ್ ಈ ಹಿಂದೆ ಸಿಯಾಳ ಸ್ನೇಹಿತನಾಗಿ ಚೇತನ್ ಜೊತೆ ಎರಡು ಬಾರಿ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದ. ಹಾಗಾಗಿ ಚೇತನ್ ತನ್ನ ಮುಖ ತೋರಿಸಿದ್ದರೆ ಕೇತನ್ ಗುರುತು ಹಿಡಿಯುತ್ತಿದ್ದ ಎಂಬ ಕಾರಣಕ್ಕೆ ಆತ ಮುಖ ಮುಚ್ಚಿಕೊಂಡಿದ್ದ. ಕೊಲೆ ಮಾಡುವ ಸ್ವಲ್ಪ ಹೊತ್ತು ಮುಂಚೆ ಹೂಡಿ ತೆಗೆದು ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಕೇತನ್ ಅವರನ್ನು ಕೋಟೆಯ ಮೇಲಿಂದ ತಳ್ಳಿ ಹತ್ಯೆ ಮಾಡಿದ ನಂತರ, ಚೇತನ್ ಮತ್ತೆ ತನ್ನ ಹೂಡಿ ಧರಿಸಿ ಏನೂ ತಿಳಿಯದವನಂತೆ ಕೋಟೆಯಿಂದ ಕೆಳಗಿಳಿದಿದ್ದಾನೆ. ಕೆಳಗಿಳಿಯುವಾಗ ದಾರಿಯಲ್ಲಿ ಸಿಕ್ಕವರ ಜೊತೆ ಸಹಜವಾಗಿ ಮಾತನಾಡಿದ್ದಲ್ಲದೆ, ಒಂದು ಟೀ ಅಂಗಡಿಯಲ್ಲಿ ನಿಂತು ಟೀ ಕುಡಿದು ಮನೆಯತ್ತ ಸಾಗಿದ್ದಾನೆ. ಯಾವುದೇ ಅನುಮಾನ ಬರದಂತೆ ತಡೆಯಲು ಆತ ಈ ರೀತಿ ವರ್ತಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿಗಳಾದ ಸಿಯಾ ಮತ್ತು ಚೇತನ್ ಕೊಲೆಗೂ ಮುನ್ನ ತೀವ್ರ ಸಿದ್ಧತೆ ನಡೆಸಿದ್ದರು. ಪೊಲೀಸರು ತಮ್ಮನ್ನು ವಿಚಾರಣೆಗೆ ಒಳಪಡಿಸಿದರೆ ಯಾವ ಪ್ರಶ್ನೆಗಳನ್ನು ಕೇಳಬಹುದು ಮತ್ತು ಈ ಅಪರಾಧಕ್ಕೆ ಸಿಗುವ ಶಿಕ್ಷೆ ಏನು ಎಂಬುದನ್ನು ಗೂಗಲ್ನಲ್ಲಿ ಸರ್ಚ್ ಮಾಡಿದ್ದರು. ಪೊಲೀಸರ ತನಿಖೆಯನ್ನು ದಾರಿ ತಪ್ಪಿಸಲು ಮೊದಲೇ ಉತ್ತರಗಳನ್ನು ಸಿದ್ಧಪಡಿಸಿ (Rehearsal) ಇಟ್ಟುಕೊಂಡಿದ್ದರು ಎಂಬುದು ಪತ್ತೆಯಾಗಿದೆ.
ಕೊಲೆ ನಡೆದ ನಂತರ ಸಿಯಾ ಮತ್ತು ಚೇತನ್ ವಾಟ್ಸಾಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ಆದರೆ ಪೊಲೀಸರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ಜೂನ್ 18 ರ ನಂತರದ ಎಲ್ಲಾ ಚಾಟ್ಗಳನ್ನು ಡಿಲೀಟ್ ಮಾಡಿದ್ದರು. ಈಗ ಪೊಲೀಸರು ಫೋರೆನ್ಸಿಕ್ ತಂಡದ ಸಹಾಯದಿಂದ ಈ ಡಿಲೀಟ್ ಆದ ಸಂದೇಶಗಳನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಭಾನುವಾರ ಪುಣೆ ಪೊಲೀಸರು ಲೋಹಗಢ್ ಕೋಟೆಗೆ ಸಿಯಾಳನ್ನು ಕರೆದೊಯ್ದು ಕ್ರೈಮ್ ಸೀನ್ ರಿಕ್ರೀಯೇಷನ್ ನಡೆಸಿದರು. ಕೇತನ್ ಅಗರ್ವಾಲ್ ಅವರ ತೂಕಕ್ಕೆ ಸಮನಾದ ಡಮ್ಮಿ ಬಳಸಿ ಕೋಟೆಯಿಂದ ತಳ್ಳುವ ದೃಶ್ಯವನ್ನು ಮರುಸೃಷ್ಟಿಸಲಾಯಿತು. ಕುಟುಂಬದ ಒತ್ತಡದಿಂದ ಕೇತನ್ ಜೊತೆ ಮದುವೆಗೆ ಒಪ್ಪಿದ್ದ ಸಿಯಾ, ಈ ಮದುವೆ ತಪ್ಪಿಸಲು ಪ್ರಿಯಕರನೊಂದಿಗೆ ಸೇರಿ ಈ ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ.
VIDEO | Maharashtra: In Ketan Agarwal murder case, police brings accused Siya Goyal to Lohadgad fort to recreate the crime scene.
(Full video available on PTI Videos - https://t.co/n147TvrpG7) pic.twitter.com/oZY8iED78E— Press Trust of India (@PTI_News) June 28, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ