ಜನರ ಜೀವದ ಜತೆ ಕೇರಳ ಚೆಲ್ಲಾಟ: ಎಲ್ಲಾ ಕರ್ಫ್ಯೂ ವಾಪಸ್‌

By Kannadaprabha NewsFirst Published Sep 8, 2021, 7:37 AM IST
Highlights
  • ನಿತ್ಯವೂ 30000ದಷ್ಟುಕೊರೋನಾ ಕೇಸು, ಹೊಸದಾಗಿ ನಿಪಾ ವೈರಸ್‌ ಸೋಂಕು ಪತ್ತೆ
  • ಕೇರಳ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಮತ್ತು ಭಾನುವಾರದ ಕಠಿಣ ನಿರ್ಬಂಧಗಳನ್ನು ತೆರವು 

ತಿರುವನಂತಪುರ (ಸೆ.08): ನಿತ್ಯವೂ 30000ದಷ್ಟುಕೊರೋನಾ ಕೇಸು, ಹೊಸದಾಗಿ ನಿಪಾ ವೈರಸ್‌ ಸೋಂಕು ಪತ್ತೆ ನಡುವೆಯೂ ಕೇರಳ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಮತ್ತು ಭಾನುವಾರದ ಕಠಿಣ ನಿರ್ಬಂಧಗಳನ್ನು ತೆರವು ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಂಗಳವಾರ ಪ್ರಕಟಣೆ ಹೊರಡಿಸಿದ್ದಾರೆ.

ಮಂಗಳವಾರ ಕೂಡ ರಾಜ್ಯದಲ್ಲಿ 25772 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 189 ಜನರು ಸಾವನ್ನಪ್ಪಿದ್ದಾರೆ. ಈಗಲೂ ಕೇರಳದಲ್ಲಿ 2.37 ಲಕ್ಷ ಸಕ್ರಿಯ ಸೋಂಕಿತರಿದ್ದು, ದೈನಂದಿನ ಪಾಸಿಟಿವಿಟಿ ದರ, ಗಂಭೀರ ಎನ್ನಬಹುದಾದ ಶೇ.15.87ರಷ್ಟಿದೆ. ಇದೆಲ್ಲದರ ಹೊರತಾಗಿಯೂ ಕೇರಳ ಸರ್ಕಾರ ಕೈಗೊಂಡಿರುವ ನಿರ್ಧಾರ ಸಾಕಷ್ಟುಟೀಕೆಗೆ ಗುರಿಯಾಗಿದೆ. ಆರ್ಥಿಕತೆ ಕುಸಿದಿರುವುದನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ, ನಿರ್ಬಂಧ ಸಡಿಲಿಕೆ ಮೂಲಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂಬ ದೂರುಗಳು ವ್ಯಕ್ತವಾಗಿವೆ.

ಕೇರಳದಿಂದ ಆಗಮಿಸುವವರಿಗೆ 7 ದಿನ ಕ್ವಾರಂಟೈನ್ ಕಡ್ಡಾಯ; ಕರ್ನಾಟಕ ಮಾರ್ಗಸೂಚಿ ಪ್ರಕಟ!

ಕಳೆದ ವಾರ ವಿವಿಧ ಕ್ಷೇತ್ರಗಳ ತಜ್ಞರ ಜೊತೆ ಸರ್ಕಾರ ಆನ್‌ಲೈನ್‌ ಮೂಲಕ ಸಮಾಲೋಚನೆ ಹಮ್ಮಿಕೊಂಡಿತ್ತು. ಅಲ್ಲಿ ಬಹುತೇಕರು, ಕೋವಿಡ್‌ ಅಂಕಿ-ಸಂಖ್ಯೆಗಳನ್ನು ಬದಿಗಿಟ್ಟು ಪೂರ್ಣಪ್ರಮಾಣದಲ್ಲಿ ರಾಜ್ಯವನ್ನು ಆರ್ಥಿಕತೆಗೆ ಮುಕ್ತ ಮಾಡುವಂತೆ ಸಲಹೆ ನೀಡಿದ್ದರು. ಅದರ ಬೆನ್ನಲ್ಲೇ ಮಂಗಳವಾರ ನಿರ್ಧಾರ ಪ್ರಕಟಿಸಿದ ಸಿಎಂ ಪಿ.ವಿಜಯನ್‌, ‘ರಾಜ್ಯದಲ್ಲಿ ಹಂತಹಂತವಾಗಿ ಹೊಸ ಪ್ರಕರಣ ಮತ್ತು ಪಾಸಿಟಿವಿಟಿ ದರ ಇಳಿಕೆಯಾಗುತ್ತಿದೆ. ಜನರು ಇನ್ನಷ್ಟುಎಚ್ಚರಿಕೆ ವಹಿಸಿದರೆ ಪ್ರಕರಣಗಳ ಸಂಖ್ಯೆ ಇನ್ನಷ್ಟುಇಳಿಸಬಹುದು. ಹೀಗಾಗಿ ರಾತ್ರಿ 10ರಿಂದ ಬೆಳಗಿನ 6 ಗಂಟೆಯವರೆಗೆ ಜಾರಿ ಮಾಡುತ್ತಿದ್ದ ರಾತ್ರಿ ಕರ್ಫ್ಯೂ ಮತ್ತು ಭಾನುವಾರಗಳಂದು ಜಾರಿಗೊಳಿಸಲಾಗುತ್ತಿದ್ದ ಕಠಿಣ ನಿರ್ಬಂಧಗಳನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.

ಆದರೆ ರಾಜ್ಯದಲ್ಲಿ ಇನ್ನೂ ಕೊರೋನಾ ಸ್ವಲ್ಪವೂ ನಿಯಂತ್ರಣಕ್ಕೆ ಬರದೇ ಇರುವಾಗ ಮತ್ತು ನಿಧಾನವಾಗಿ ನಿಪಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವಾಗಲೇ ಸರ್ಕಾರ ಕೈಗೊಂಡ ನಿರ್ಧಾರ ಟೀಕೆಗೆ ಗುರಿಯಾಗಿದೆ.

click me!