
ಕೇರಳ ಪೊಲೀಸ್ ಇಲಾಖೆ(Kerala police department)ಯ ಮಹಿಳಾ ಡಿವೈಎಸ್ಪಿ ಅಧಿಕಾರಿಯೊಬ್ಬರ ವಿರುದ್ಧವೇ ಹಣಕ್ಕಾಗಿ ಬೆದರಿಕೆ ಹಾಕಿ ಸುಲಿಗೆ ಮಾಡಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಡಿವೈಎಸ್ಪಿ ನೇಹಾ ಎಂಬುವವರೇ ಈ ಆರೋಪಕ್ಕೆ ಗುರಿಯಾದ ಅಧಿಕಾರಿಯಾಗಿದ್ದು, ಚಾಲಕನೊಬ್ಬನಿಂದ ಹಣ ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚಾಲಕನೊಬ್ಬನನ್ನು ತಡೆದ ಡಿವೈಎಸ್ಪಿ ನೇಹಾ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ದೂರಿನ ಪ್ರಕಾರ ಸ್ಥಳದಲ್ಲೇ ಚಾಲಕನಿಂದ 25,000 ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ, ಮರುದಿನ ಉಳಿದ 5,000 ರೂಪಾಯಿಗಳನ್ನು ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ. ಒಂದು ವೇಳೆ ಹಣ ನೀಡದಿದ್ದರೆ ವಾಹನವನ್ನು ಜಪ್ತಿ ಮಾಡುವುದಾಗಿ ಡಿವೈಎಸ್ಪಿ ಬೆದರಿಕೆ ಹಾಕಿದ್ದಾರೆ ಎಂದು ಚಾಲಕ ತನ್ನ ದೂರಿನಲ್ಲಿ ಆರೋಪಿಸಿದ್ದಾನೆ. ಈ ಬೆದರಿಕೆಗೆ ಮಣಿದ ಚಾಲಕ, ಮರುದಿನ ಉಳಿದ ಹಣವನ್ನೂ ಅಧಿಕಾರಿಗೆ ತಲುಪಿಸಿದ್ದಾನೆ. ಈ ಘಟನೆಯು ಪೊಲೀಸ್ ಇಲಾಖೆಯಲ್ಲೇ ಸಂಚಲನ ಮೂಡಿಸಿದೆ.
ಡಿವೈಎಸ್ಪಿ ನೇಹಾ ವಿರುದ್ಧ ಕೇಳಿಬಂದಿರುವ ಆರೋಪ ಇದೇ ಮೊದಲಲ್ಲ. ಈ ಹಿಂದೆ ಕೊಲೆ ಪ್ರಕರಣವೊಂದರ ತನಿಖೆಯಲ್ಲಿಯೂ ಅವರು ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆಯೂ ಇಲಾಖಾ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಸೇವೆಗೆ ಸೇರುವ ಮುನ್ನ ನೇಹಾ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಗಗನಸಖಿ ಹುದ್ದೆ ಬಿಟ್ಟು ಪೊಲೀಸ್ ಇಲಾಖೆ ಸೇರಿದ ನೇಹಾ ಇದೀಗ ಅವರ ವಿರುದ್ಧ ಸುಲಿಗೆ ಮತ್ತು ಕರ್ತವ್ಯಲೋಪದಂತಹ ಗಂಭೀರ ದೂರುಗಳು ಕೇಳಿ ಬಂದಿರುವುದರಿಂದ, ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.
ಸದ್ಯ ಚಾಲಕ ನೀಡಿದ ದೂರಿನ ಅನ್ವಯ ನೇಹಾ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ತನಿಖೆಯ ನಂತರವಷ್ಟೇ ಈ ಆರೋಪಗಳಲ್ಲಿನ ಸತ್ಯಾಸತ್ಯತೆ ಹೊರಬರಬೇಕಿದೆ. ನಾಗರಿಕರ ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿಗಳು ಕ್ರಿಮಿನಲ್ ಗಳನ್ನ ನಾಚಿಸುವಂತೆ ಸುಲಿಗೆ, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಂಥ ಪ್ರಕರಣಗಲ್ಲಿ ಪೊಲೀಸ್ ಭಾಗಿಯಾಗುತ್ತಿರುವುದು ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ