
ತಿರುವನಂತಪುರಂ(ಡಿ.16) ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಪ್ರಮುಖವಾಗಿ ದೇಶದ ಶೇಕಡಾ 90 ರಷ್ಟು ಪ್ರಕರಣ ಕೇರಳದಲ್ಲಿ ದಾಖಲಾಗುತ್ತಿದೆ. ಕಳೆದೆ ಮೂರು ಕೋವಿಡ್ ಅಲೆಗಳೂ ಕೂಡ ಕೇರಳದಲ್ಲಿ ಭಾರಿ ಅವಾಂತರ ಸೃಷ್ಟಿಸಿತ್ತು. ಇದೀಗ ದೇಶಕ್ಕೆ ನಾಲ್ಕನೇ ಅಲೆ ಭೀತಿ ಕೇರಳದಿಂದಲೇ ಶುರುವಾಗಿದೆ. ಕೇರಳದಲ್ಲಿ ದೇಶದ ಮೊದಲ JN.1 ಕೋವಿಡ್ ವೇರಿಯೆಂಟ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಇದೀಗ ಕೋವಿಡ್ಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ವರದಿಯಾಗಿದೆ. ಇದೀಗ ಕೇರಳ ಆರೋಗ್ಯ ಇಲಾಖೆ ಹೈಅಲರ್ಟ್ ಘೋಷಿಸಿದೆ.
ಕಣ್ಣೂರು ಜಿಲ್ಲೆಯ ಪನೂರು ಪಾಲಿಕೆ ವ್ಯಾಪ್ತಿಯ 80 ವರ್ಷದ ಅಬ್ದುಲ್ಲಾ ಕೋವಿಡ್ಗೆ ಬಲಿಯಾಗಿದ್ದಾರೆ. ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾದ ಅಬ್ದುಲ್ಲಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್ ಪರೀಕ್ಷೆ ವೇಳೆ ಪಾಸಿಟೀವ್ ವರದಿ ಬಂದಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅಬ್ದುಲ್ಲಾ ಮೃತಪಟ್ಟಿದ್ದಾರೆ.
ಕೇರಳದಲ್ಲಿ ದೇಶದ ಮೊದಲ ಕೋವಿಡ್ JN.1 ವೈರಸ್ ಪ್ರಕರಣ ಪತ್ತೆ, ಅಲರ್ಟ್ ಘೋಷಣೆ!
ಕೇರಳದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ನವೆಂಬರ್ ತಿಂಗಳಲ್ಲಿ 450 ಪ್ರಕರಣಗಳಿದ್ದ ಕೋವಿಡ್ ಡಿಸೆಂಬರ್ 15ರ ವೇಳೆಗೆ 825 ಪ್ರಕರಣಗಳು ದಾಖಲಾಗಿದೆ. ಕೇರಳದಲ್ಲಿ JN.1 ಪ್ರಕರಣ ಪತ್ತೆಯಾಗುತ್ತಿದ್ದಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ತುರ್ತು ಸಭೆ ನಡೆಸಿದ್ದಾರೆ. ತಜ್ಞ ವೈದ್ಯರು, ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಕೇರಳದಲ್ಲಿ ಪತ್ತೆಯಾಗಿರುವ JN.1 ಪ್ರಕರಣದಿಂದ ಯಾರು ಆತಂಕ ಪಡುವ ಅಗತ್ಯವಿಲ್ಲ. ಈ ಪ್ರಕರಣ ಹರಡುವಿಕೆ ತೀವ್ರತೆ ಕಡಿಮೆ ಇದೆ. ಇಷ್ಟೇ ಅಲ್ಲ ಈಗಾಗಲೇ ಪತ್ತೆಯಾಗಿರುವ ಮಹಿಳೆ ಗುಣಮುಖರಾಗಿದ್ದಾರೆ. ಹೀಗಾಗಿ ಆಸ್ಪತ್ರೆ ದಾಖಲಾಗುವ ಪ್ರಮೇಯ ಇಲ್ಲ. ಹೋಮ್ ಐಸೋಲೇಶನ್ ಮೂಲಕವೇ ಗುಣಮುಖವಾಗಲಿದೆ. ಕೇರಳದಲ್ಲಿ ಪತ್ತೆಯಾಗಿರುವ ಕೋವಿಡ್ ಪ್ರಕರಣಗಳು ಮೈಲ್ಡ್ ಸಂಪ್ಟಮ್ಸ್ ಹೊಂದಿದೆ. ಈ ಪೈಕಿ ಬೆರಳೆಣಿಕೆ ಪ್ರಕರಣಗಳು ಆಸ್ಪತ್ರೆ ದಾಖಲಾಗಿದೆ. ಕೇರಳ ಆರೋಗ್ಯ ಕ್ಷೇತ್ರ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ.
ಚೀನಾ, ಅಮೆರಿಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಕೋವಿಡ್ ರೂಪಾಂತರಿ ಕೇರಳದಲ್ಲಿ ಪತ್ತೆ; ದೇಶದಲ್ಲಿ ಮತ್ತೆ ಆತಂಕ ಶುರು!
ದೇಶದಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 312 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದು ಮೇ 31ರ ನಂತರ (7.5 ತಿಂಗಳ) ದಾಖಲಾದ ಅತಿ ಹೆಚ್ಚು ಪ್ರಕರಣವಾಗಿದೆ. ಇನ್ನು ಸಕ್ರಿಯ ಪ್ರಕರಣಗಳು 1,296ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈವರೆಗೆ 4.50 ಕೋಟಿ ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 4.44 ಕೋಟಿ ಮಂದಿ ಗುಣಮುಖರಾಗಿದ್ದಾರೆ ಹಾಗೂ 5.33 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಈವರೆಗೂ 220.67 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಜಗತ್ತಿನಲ್ಲಿ ಒಂದೇ ದಿನ 15000ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ