ಕಾಶಿ ವಿಶ್ವನಾಥ ಮಂದಿರದ ಫೇಸ್‌ಬುಕ್ ಹ್ಯಾಕ್, ಕಿಡಿಗೇಡಿಗಳಿಂದ ಅಶ್ಲೀಲ ಪೋಸ್ಟ್!

By Suvarna NewsFirst Published Apr 6, 2024, 5:54 PM IST
Highlights

ಪವಿತ್ರ ಪುಣ್ಯ ಕ್ಷೇತ್ರ ಕಾಶಿ ವಿಶ್ವನಾಥ ಮಂದಿರದ ಫೇಸ್‌ಬುಕ್ ಪೇಜನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಅಶ್ಲೀಲ ಫೋಟೋಗಳ ಪೋಸ್ಟ್ ಮಾಡಿ ವಿಕೃತಿ ಮೆರೆದಿದ್ದಾರೆ.
 

ವಾರಣಾಸಿ(ಏ.06)  ಕಾಶೀ ವಿಶ್ವನಾಥ ಮಂದಿರ ಹಲವು ಕಾರಣಗಳಿಂದ ಸುದ್ದಿಯಾಗುತ್ತಿದೆ. ವಿಶ್ವನಾಥ ಮಂದಿರದ ಹೊಸ ಕಾರಿಡಾರ್ ಬಳಿಕ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇತ್ತ ಮೂಲ ಕಾಶಿ ದೇವಸ್ಥಾನ ಕೆಡವಿ ಅದರ ಮೇಲೆ ನಿರ್ಮಿಸಿರುವ ಗ್ಯಾನವಾಪಿ ಮಸೀದಿ ಹಿಂಪಡೆಯಲು ಹೋರಾಟ ನಡೆಯುತ್ತಲೇ ಇತ್ತ. ಇದರ ಬೆನ್ನಲ್ಲೇ ಮಸೀದಿಯ ನೆಲಮಹಡಿಯಲ್ಲಿನ ಹಿಂದೂ ದೇವರ ಪೂಜೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಸೇರಿದಂತೆ ಹಲವು ಕಾರಣಗಲಿಂದ ಕಾಶಿ ವಿಶ್ವನಾಥ ಮಂದಿರ ಕೋರ್ಟ್, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇದೀಗ ಕಿಡಿಗೇಡಿಗಳು ಕಾಶಿ ವಿಶ್ವನಾಥ ಮಂದಿರದ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಿದ್ದಾರೆ. ಮಂದಿರ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಿ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ.

ವಿಶ್ವ ವಿಶ್ವನಾಥ ಟೆಂಪಲ್ ಟ್ರಸ್ಟ್ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಲಾಗಿದೆ. ದೇವಸ್ಥಾನದ ಆಡಳಿತ ಸಮಿತಿ ಈ ಫೇಸ್‌ಬುಕ್ ಪೇಜ್ ನಿರ್ವಹಣೆ ಮಾಡುತ್ತಿತ್ತು. ಇಂದು ಭಕ್ತರು ದೇವಸ್ಥಾನ ಸಮಿತಿಗೆ ಕರೆ ಮಾಡಿ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಪೇಜ್‌ನಲ್ಲಿ ಅಶ್ಲೀಲ ಫೋಟೋಗಳು ಪೋಸ್ಟ್ ಆಗಿದೆ. ಅಸಂಬದ್ಧ ಪೋಸ್ಟ್‌ಗಳನ್ನು ಹಾಕಲಾಗಿದೆ. ಈ ಕುರಿತು ಮಾಹಿತಿ ತಿಳಿದ ತಕ್ಷಣ ದೇವಸ್ಥಾನ ಆಡಳಿತ ಸಮಿತಿಯ ತಾಂತ್ರಿಕ ತಂಡ ಈ ಕುರಿತು ಕಾರ್ಯನಿರ್ವಹಿಸುತ್ತಿದೆ ಎಂದು ವಿಶ್ವನಾಥ ಮಂದಿರದ ಆಡಳಿತ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವ ಭೂಷಣ್ ಮಿಶ್ರಾ ಹೇಳಿದ್ದಾರೆ.

ಹಿಂದೂ ಹೋರಾಟಕ್ಕೆ ಗೆಲುವು, ಗ್ಯಾನವಾಪಿ ಮಸೀದಿಯಲ್ಲಿ ಪೂಜೆ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಣೆ!

ದೇವಸ್ಥಾನದ ಆಡಳಿತ ಸಮಿತಿ ಈ ಕುರಿತು ಸೈಬರ್ ಪೊಲೀಸರಿಗೆ ದೂರು ನೀಡಿದೆ. ಇತ್ತ ದೇವಸ್ಥಾನದ ತಾಂತ್ರಿಕ ತಂಡ, ಸೈಬರ್ ಪೊಲೀಸ್ ಹಾಗೂ ಇತರ ತಾಂತ್ರಿಕ ಸಿಬ್ಬಂದಿಗಳು ಹ್ಯಾಕ್ ಆಗಿರುವ ಫೇಸ್‌ಬುಕ್ ಪೇಜ್ ರಿಸ್ಟೋರ್ ಮಾಡುವ ಪ್ರಯತ್ನದಲ್ಲಿದೆ. ಫೇಸ್‌ಬುಕ್ ತಂಡದ ಜೊತೆ ಸಂಪರ್ಕ ಸಾಧಿಸಿ ಈ ಕುರಿತು ಮಾಹಿತಿ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಗ್ಯಾನವಾಪಿ ಮಸೀದಿಯನ್ನು ಕೆಲ ಕಿಡಿಗೇಡಿಗಳು ಟಾರ್ಗೆಟ್ ಮಾಡಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ. ಈ ಪೈಕಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಕೂಡ ಒಂದು ಕಾರಣವಾಗಿದೆ. ಕಾಶೀ ವಿಶ್ವನಾಥ ಮಂದಿರ ಆವರಣದಲ್ಲಿರುವ ಗ್ಯಾನವ್ಯಾಪಿ ಮಸೀದಿಯ ನೆಲ ಮಹಡಿಯಲ್ಲಿ ಹಿಂದೂ ಮೂರ್ತಿಗಳ ಪೂಜೆಗೆ ನೀಡಿದ್ದ ಅವಕಾಶವನ್ನು ಪ್ರಶ್ನಿಸಿ ಮುಸ್ಲಿಮ್ ಸಮಿತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ವಿಗ್ರಹಕ್ಕೆ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ನೀಡಿದ ಅನುಮತಿ ರದ್ದುಪಡಿಸಬೇಕೆಂಬ ಕೋರಿಕೆಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

ಭೋಜಶಾಲಾ ದೇವಾಲಯ ಸಂಕೀರ್ಣದ ಎಎಸ್‌ಐ ಸರ್ವೆಗೆ ಆದೇಶ ನೀಡಿದ ಹೈಕೋರ್ಟ್‌!

ಮಸೀದಿಯಲ್ಲಿ ವ್ಯಾಪ್ತಿಯಲ್ಲಿ ಮುಸ್ಲಿಮರಿಗೆ ನಮಾಜ್‌ ಮಾಡಲು ಇರುವ ಅವಕಾಶವೂ ಯಥಾ ಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಹೇಳಿ, ವಿಚಾರಣೆಯನ್ನು ಏ.30ಕ್ಕೆ ಮುಂದೂಡಿದೆ. ದೇಗುಲದ ನೆಲ ಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿ ಫೆ.26ರಂದು ಅಲಹಾಬಾದ್‌ ಹೈಕೋರ್ಟ್‌ ಆದೇಶ ಹೊರಡಿಸಿತ್ತು.
 

click me!