
ಬೆಂಗಳೂರು(ಮಾ/.15): ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಕರ್ನಾಟಕದ ಹಿಜಾಬ್ ವಿವಾದ ಸಂಬಂಧ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ರಾಜ್ಯ ಸರ್ಕಾರ ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವಂತೆ ನೀಡಿರುವ ಆದೇಶ ಕಾನೂನು ಬಧ್ಧವಾಗಿದೆ ಎಂದಿರುವ ತ್ರಿಸದಸ್ಯ ಪೀಠ, ತರಗತಿಗಳಿಗೆ ಹಿಜಾಬ್, ಕೇಸರಿ ಶಾಲು ಹೀಗೆ ಯಾವುದೂ ಧರಿಸಲು ಅವಕಾಶ ಇಲ್ಲ ಎಂದಿದೆ. ಅಲ್ಲದೇ ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದೂ ಉಲ್ಲೇಖಿಸಿದೆ. ಹೀಗಿರುವಾಗ ಈ ವಿವಾದ ಆರಂಭವಾಗಿದ್ದ ಜಿಲ್ಲೆ, ಉಡುಪಿಯ ಶಾಸಕ ರಘುಪತಿ ಭಟ್ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗಳಿಗೆ ಮಹತ್ವದ ಸಂದೇಶ ನೀಡಿದ್ದಾರೆ.
ಹೌದು ಸುವರ್ಣ ನ್ಯೂಸ್ ಮೂಲಕ ಶಾಸಕ ರಘುಪತಿ ಭಟ್ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ ಆರು ವಿದ್ಯಾರ್ಥಿಗಳ ಬಳಿ ಅಚ್ಚರಿಯ ಮನವಿ ಮಾಡಿಕೊಂಡಿದ್ದಾರೆ. ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರ ಬಗ್ಗೆ ಕಹಿ ಇಲ್ಲ. ನಾಳೆಯಿಂದ ಎಂದಿನಂತೆ ನೀವೆಲ್ಲ ಕಾಲೇಜಿಗೆ ಬನ್ನಿ. ಮತಾಂಧ ಶಕ್ತಿಗಳ ಮಾತಿಗೆ ನೀವೆಲ್ಲ ಬಲಿಯಾಗಬೇಡಿ. ಹೈಕೋರ್ಟ್ ಆದೇಶವನ್ನು ಪಾಲಿಸಿ, ಕಾಲೇಜಿಗೆ ಬನ್ನಿ ಎಂದಿದ್ದಾರೆ.
Karnataka Hijab Verdict: ಹಿಜಾಬ್, ಕೇಸರಿ ಯಾವುದೂ ಇಲ್ಲ, ತರಗತಿಗೆ ಸಮವಸ್ತ್ರ ಧರಿಸಿಯೇ ಎಂಟ್ರಿ
ಅಲ್ಲದೇ ಕೋರ್ಟ್ಗೆ ಹೋಗಿದ್ದರೂ ನಿಮ್ಮ ಬಗ್ಗೆ ಬೇಧಭಾವ ಇಲ್ಲ. ಹಿಜಾಬ್ ಗಲಾಟೆಯಿಂದ ನಿಮ್ಮ ಕ್ಲಾಸ್ಗಳು ಮಿಸ್ ಆಗಿದೆ. ಮಿಸ್ ಆದ ನೋಟ್ಸ್ಗಳನ್ನು ನಿಮಗೆ ನೀಡಲಾಗುವುದು. ಹೈಕೋರ್ಟ್ಗೆ ಹೋಗಿ ರಾಜ್ಯದ ತುಂಬಾ ಇದು ವಿವಾದ ಆಗಿದೆ. ಸುಪ್ರೀಂಕೋರ್ಟ್ಗೆ ಹೋಗಿ ದೇಶಾದ್ಯಂತ ವಿವಾದ ಮಾಡಬೇಡಿ ಎಂದು ಶಾಸಕರು ವಿದ್ಯಾರ್ಥಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ಹೈಕೋರ್ಟ್ ಹೇಳಿದ್ದೇನು?
ಹಿಜಾಬ್ ಧರಿಸಿ ಶಾಲಾ-ಕಾಲೇಜಿನ ತರಗತಿಗಳಿಗೆ ಹಾಜರಾಗುವುದನ್ನು ನಿಷೇಧಿಸುವ ಮತ್ತು ಸಮವಸ್ತ್ರವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ (ಸಿಡಿಸಿ) ವಹಿಸಿ ರಾಜ್ಯ ಸರ್ಕಾರ ಫೆ.5ರಂದು ಹೊರಡಿಸಿತ್ತು. ಈ ಆದೇಶ ರದ್ದು ಕೋರಿ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ರೇಷಮ್ ಮತ್ತಿತರೆ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಏಳು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಎಲ್ಲ ಅರ್ಜಿಗಳ ಕುರಿತು ಸತತ 11 ದಿನ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿರುವ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ.ಜೆ.ಎಂ. ಖಾಜಿ ಅವರನ್ನು ಒಳಗೊಂಡ ಪೀಠ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಸರ್ಕಾರದ ಆದೇಶ ಪಾಲನೆ ಮಾಡಬೇಕು, ಇದು ಕಾನೂನು ಬದ್ಧವಾಗಿದೆ ಎಂದಿದೆ.
Karnataka Hijab Verdict: ಹಿಜಾಬ್, ಕೇಸರಿ ಯಾವುದೂ ಇಲ್ಲ, ತರಗತಿಗೆ ಸಮವಸ್ತ್ರ ಧರಿಸಿಯೇ ಎಂಟ್ರಿ
ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದ ಮಹತ್ವದ ವಿಚಾರಗಳು:
1- ವಿದ್ಯಾರ್ಥಿನಿಯರು ಸಮವಸ್ತ್ರ ಸಂಹಿತೆ ಆದೇಶ ಪಾಲಿಸಲೇಬೇಕು
2. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವೇ ಅಲ್ಲ- ಹೈಕೋರ್ಟ್ ಐತಿಹಾಸಿಕ ತೀರ್ಪು
3. ಸಮವಸ್ತ್ರ ಕಡ್ಡಾಯಕ್ಕೆ ವಿದ್ಯಾರ್ಥಿಗಳು ವಿರೋಧಿಸುವಂತಿಲ್ಲ
4. ವಿದ್ಯಾರ್ಥಿನಿಯರು ಸಮವಸ್ತ್ರ ಸಂಹಿತೆ ಆದೇಶ ಪಾಲಿಸಲೇಬೇಕು
5. ಸಮವಸ್ತ್ರ ಕಡ್ಡಾಯಗೊಳಿಸಿದ್ದ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ
6. ಹಿಜಾಬ್ಗೆ ಅವಕಾಶ ಕೊಡುವುದು ಬಿಡುವುದು ಆಯಾ ಸಂಸ್ಥೆಗೆ ಬಿಟ್ಟದ್ದು
7. ಹಿಜಾಬ್ಗೆ ಅವಕಾಶ ಇಲ್ಲ ಎಂದರೆ ಮುಸ್ಲಿಂ ವಿದ್ಯಾರ್ಥಿನಿಯರ ಧಾರ್ಮಿಕ ಹಕ್ಕಿನ ಉಲ್ಲಂಘನೆ ಅಲ್ಲ
8. ಶಾಲಾ- ಕಾಲೇಜಿನ ಸಮವಸ್ತ್ರ ನೀತಿ ಪಾಲಿಸುವುದು ವಿದ್ಯಾರ್ಥಿನಿಯರ ಕರ್ತವ್ಯ
ರಾಜಕೀಯ ಬಣ್ಣ, ವಿದೇಶದಲ್ಲೂ ಸದ್ದು:
ಉಡುಪಿಯ ಕಾಲೇಜಿನಲ್ಲಿ ಮೊದಲಿಗೆ ಆರಂಭಗೊಂಡ ಈ ಹಿಜಾಬ್ ವಿವಾದ ಬಳಿಕ ರಾಜ್ಯದ ಹಲವು ಜಿಲ್ಲೆಗಳಿಗೆ ವಿಸ್ತರಿಸಿತ್ತು. ಮೊದಲಿಗೆ ಧಾರ್ಮಿಕ ಸಂಘಟನೆಗಳ ಬೆಂಬಲ ಪಡೆದ ವಿವಾದಕ್ಕೆ ಬಳಿಕ ರಾಜಕೀಯ ಬಣ್ಣವೂ ಮೆತ್ತಿಕೊಂಡಿತು. ಹೀಗಾಗಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲೂ ಈ ವಿಷಯ ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ವೇದಿಕೆಯಾಯ್ತು. ಅಷ್ಟುಸಾಲದೆಂಬಂತೆ ನೊಬೆಲ್ ಪುರಸ್ಕೃತೆ ಮಲಾಲಾ ಮೊದಲಾದವರು ಇದರಲ್ಲಿ ಮೂಗು ತೂರಿಸಿದ ಪರಿಣಾಮ, ವಿವಾದ ದೇಶದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಯ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ