
ನವದೆಹಲಿ(ಏ.17): ಕರ್ನಾಟಕದಲ್ಲಿ ಚುನಾವಣಾ ಜ್ವರ ಆವರಿಸಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಇದರ ಭಾಗವಾಗಿ ಮೇ.4 ರಂದು ಉಡುಪಿಯಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಮೋದಿ ಜೊತೆಗೆ ಉತ್ತರ ಪ್ರದೇಶದಲ್ಲಿ ಮಾಫಿಯಾ ಮಟ್ಟ ಹಾಕುತ್ತಿರುವ, ಎನ್ಕೌಂಟರ್ ಮೂಲಕ ಗ್ಯಾಂಗ್ಸ್ಟರ್ ಸದ್ದಡಗಿಸುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಆಗಮನದಿಂದ ಭಾರಿ ಭಿಗಿ ಭದ್ರತೆ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಕರ್ನಾಟಕದ ಚುನಾವಣಾ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ 15 ರಿಂದ 20 ರ್ಯಾಲಿ ನಡೆಸಲಿದ್ದಾರೆ. ಇದೀಗ ಮೇ. 4 ರಂದು ಉಡುಪಿ ನಗರದ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಮೋದಿ ಆಗಮಿಸುತ್ತಿದ್ದಾರೆ. ಈ ಬಾರಿಯ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಆಗಮನ ರಾಜ್ಯದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ. ಅದರಲ್ಲೂ ವಿಶೇಷವಾಗಿ ಯೋಗಿ ಆದಿತ್ಯನಾಥ್ ಗಟ್ಟಿ ನಿರ್ಧಾರಗಳು ಭಾರತದಲ್ಲೇ ಸಂಚಲನ ಸೃಷ್ಟಿಸಿದೆ. ಅದರಲ್ಲೂ ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ 8 ಆರೋಪಿಗಳ ಪೈಕಿ 6 ಮಂದಿಯನ್ನು ಎನ್ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಈ ನಡೆಯಿಂದ ಯೋಗಿ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಯೋಗಿ ಮುಂದಿನ ಪ್ರಧಾನಿ ಆಗಬೇಕು ಅನ್ನೋ ಕೂಗು ಕೇಳಿಬರುತ್ತಿದೆ. ಯುಪಿ ಸತತ ಎನ್ಕೌಂಟರ್ ಬಳಿಕ ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
ಅತೀಕ್ ಅಹ್ಮದ್ ಹತ್ಯೆ ಕೇಸ್: ತನಿಖೆಗೆ 3 ಸದಸ್ಯರ ನ್ಯಾಯಾಂಗ ಆಯೋಗ ರಚನೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ
ಕರಾವಳಿ ಕರ್ನಾಟಕ ಬಿಜೆಪಿಯ ಭದ್ರಕೋಟೆ. ಉಡುಪಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ 8ರ ಪೈಕಿ 7 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಹಿಂದುತ್ವ ಇಲ್ಲಿ ಪ್ರಮುಖ ವಿಚಾರ. ಹೀಗಾಗಿ ಹಿಂದುತ್ವ ಮತಗಳನ್ನು ಕ್ರೋಢಿಕರಿಸಲು ಇದೀಗ ಖುದ್ದು ಯೋಗಿ ಆದಿತ್ಯನಾಥ್ ಕರಾವಳಿಗೆ ಎಂಟ್ರಿಕೊಡುತ್ತಿದ್ದಾರೆ. ಯೋಗಿ ಆದಿತ್ಯನಾಥ್ ರೀತಿಯ ಮುಖ್ಯಮಂತ್ರಿ ಕರ್ನಾಟಕಕ್ಕೂ ಅವಶ್ಯಕತೆ ಇದೆ ಅನ್ನೋ ಕೂಗು ಎದ್ದಿರುವ ಬೆನ್ನಲ್ಲೇ ಇದೀಗ ಸ್ವತ ಯೋಗಿ ಆಗಮಿಸುತ್ತಿರುವುದು ಬಿಜೆಪಿ ಕಾರ್ಯಕರ್ತರ ಸಂಭ್ರಮ ಹೆಚ್ಚಿಸಿದೆ.
2018ರ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಕರ್ನಾಟಕದ ಕೆಲ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಇದೀಗ ಮತ್ತೆ ಯೋಗಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಯೋಗಿ ಹಿಂದುತ್ವದ ಫೈರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಯೋಗಿ ತಮ್ಮ ನಿರ್ಧಾರಗಳ ಮೂಲಕವೇ ಸಂಚಲನ ಸೃಷ್ಟಿಸುತ್ತಿದ್ದಾರೆ.ಮಾಫಿಯವನ್ನು ಮಣ್ಣಲ್ಲಿ ಹೂತು ಬಿಡುತ್ತೇನೆ ಅನ್ನೋ ಹೇಳಿಕೆ ಪದೇ ಪದೇ ವೈರಲ್ ಆಗುತ್ತಿದೆ.
ಗ್ಯಾಂಗ್ಸ್ಟರ್ ಪುತ್ರನ ಎನ್ಕೌಂಟರ್ ಬಳಿಕ ಮತ್ತೆ ವೈರಲ್ ಆಗ್ತಿದೆ ಯೋಗಿ ಅಂದು ಸದನದಲ್ಲಿ ನೀಡಿದ ಹೇಳಿಕೆ
ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ 2017 ರಿಂದ ಈವರೆಗೆ ಒಟ್ಟು 183 ಕ್ರಿಮಿನಲ್ಗಳನ್ನು ಎನ್ಕೌಂಟರ್ ಮಾಡಲಾಗಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ. ‘ರಾಜ್ಯದಲ್ಲಿ ಮಾಫಿಯಾವನ್ನು ಮಣ್ಣು ಮಾಡಲಾಗುವುದು’ ಎಂಬ ಯೋಗಿ ಸರ್ಕಾರದಲ್ಲಿ ಕ್ರಿಮಿನಲ್ಗಳ ಮನೆಯನ್ನು ಬುಲ್ಡೋಜರ್ನಿಂದ ಧ್ವಂಸಗೊಳಿಸುವುದು ಸೇರಿ ಕ್ರಮಿನಲ್ಗಳ ವಿರುದ್ಧ ಅನೇಕ ಕಠಿಣ ಕ್ರಮ ಕೈಗೊಳ್ಳಲಾಗಿದೆ. 2017ರ ಮಾರ್ಚ್ ತಿಂಗಳಿನಿಂದ ಈವರೆಗೆ ರಾಜ್ಯದಲ್ಲಿ ಪೊಲೀಸರು ನಡೆಸಿದ ಒಟ್ಟು 10,900 ಎನ್ಕೌಂಟರ್ಗಳಲ್ಲಿ 23,300 ಕ್ರಿಮಿನಲ್ಗಳನ್ನು ಬಂಧಿಸಲಾಗಿದ್ದು ಘಟನೆಗಳಲ್ಲಿ 5,046 ಕ್ರಿಮಿನಲ್ಗಳು ಗಾಯಗೊಂಡಿದ್ದಾರೆ. ಇನ್ನು 1,443 ಪೊಲೀಸರು ಕೂಡ ಗಾಯಗೊಂಡಿದ್ದು, ಒಟ್ಟು 13 ಜನ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಹಾಗೂ ಬುಧವಾರ ಎನ್ಕೌಂಟರ್ಗೆ ಬಲಿಯಾದ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಸೇರಿ ಒಟ್ಟು 183 ಕ್ರಿಮಿನಲ್ಗಳು ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ