NEP Karnataka; 'ಈಶಾನ್ಯದಲ್ಲಿ ಮೊಳಗಿದ ಕನ್ನಡ' ಹೊಸ ಶಿಕ್ಷಣ ನೀತಿ ಮೊದಲ ಹೆಜ್ಜೆ ಕರ್ನಾಟಕದಿಂದ

By Contributor AsianetFirst Published Nov 21, 2021, 10:11 PM IST
Highlights

* ದೇಶದಲ್ಲಿ ಮೊದಲಿಗೆ ಕರ್ನಾಟಕದಲ್ಲಿ ಎನ್ಇಪಿ ಜಾರಿ ಅನುಷ್ಠಾನ; ವಿಡಿಯೊ ಪ್ರಸ್ತುತಿ
* ಈಶಾನ್ಯ ರಾಜ್ಯಗಳ ಶೈಕ್ಷಣಿಕ ಸಮಾವೇಶದಲ್ಲಿ ರಾಜ್ಯದಲ್ಲಿನ ಎನ್ ಇ ಪಿ ಜಾರಿ ಕುರಿತು ಚರ್ಚೆ
* ಅಸ್ಸಾಂ ನಲ್ಲಿ ಮೊಳಗಿದ ಕನ್ನಡದ ಎನ್ ಇ ಪಿ ಗೀತೆ 

ಗುವಾಹಟಿ(ನ. 21) ಅಸ್ಸಾಂನ (Assam) ಗುವಾಹಟಿಯಲ್ಲಿ ಭಾನುವಾರ ನಡೆದ ‘ಈಶಾನ್ಯ ರಾಜ್ಯಗಳ ಶೈಕ್ಷಣಿಕ ಸಮಾವೇಶ’ದಲ್ಲಿ ಕರ್ನಾಟಕದ (Karnataka)ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ. ಅವರು ಪಾಲ್ಗೊಂಡು, ಕರ್ನಾಟಕವು ದೇಶದಲ್ಲೇ ಮೊದಲ ರಾಜ್ಯವಾಗಿ ‘ರಾಷ್ಟ್ರೀಯ ಶಿಕ್ಷಣ ನೀತಿ’ (National Education Policy)ಅನುಷ್ಠಾನಗೊಳಿಸಿದ ಕುರಿತು ವಿಡಿಯೊ ಪ್ರಾತ್ಯಕ್ಷಿಕೆಯನ್ನು  ಮಂಡಿಸಿದರು. 

ಹೊಸ ಶಿಕ್ಷಣ ನೀತಿ (NEP)ಅನುಷ್ಠಾನಗೊಳಿಸಲು ಹೊರಟಾಗ ಆರಂಭದಲ್ಲಿ ಎದುರಾದ ಪ್ರಶ್ನೆಗಳು, ಅನುಮಾನಗಳು, ಅವುಗಳಿಗೆ ಉತ್ತರ ಕಂಡುಕೊಳ್ಳಲಾದ ಬಗೆ ಇನ್ನಿತರ ವಿಷಯಗಳನ್ನು ಅವರು ಹಂಚಿಕೊಂಡರು. 

ಈ ಸಮಾವೇಶದಲ್ಲಿ ಈಶಾನ್ಯ ರಾಜ್ಯಗಳ ಶಿಕ್ಷಣ ಸಚಿವರು ಭಾಗವಹಿಸಿದ್ದರು. ಹೊಸ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ‌ಕಾರಣಕ್ಕೆ ಅಸ್ಸಾಂ ಸರ್ಕಾರವೇ ರಾಜ್ಯದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರನ್ನು ಆಹ್ವಾನ‌ ನೀಡಿತ್ತು. 

ಆಯುಕ್ತರು, ಎನ್ ಇ ಪಿ ಕುರಿತು ಇಡೀ ಸಭೆಗೆ ಮಾಹಿತಿ ನೀಡಿದ ನಂತರ ಅದರ ಜನಜಾಗೃತಿಗೆ ಕನ್ನಡದಲ್ಲಿ ರಚಿಸಿರುವ ಗೀತೆಯನ್ನು ಅಲ್ಲಿ ಪ್ರಸಾರ ಮಾಡಲಾಯಿತು. ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. 

ಡಿಸಿಪ್ಲೀನ್ ಕೋರ್ ವಿಷಯಗಳು, ಓಪನ್ ಎಲೆಕ್ಟೀವ್ಸ್, ಮಲ್ಟಿ ಎಂಟ್ರಿ- ಮಲ್ಟಿ ಎಕ್ಸಿಟ್, ರಾಷ್ಟ್ರೀಯ ಕೌಶಲ ಅರ್ಹತಾ ರೂಪುರೇಷೆಗೆ ಅನ್ವಯಿಸಲಾದ ಪಠ್ಯಕ್ರಮ, ಅಧಿಕೃತ ಆನ್ ಲೈನ್ ಕೋರ್ಸ್  ಕುರಿತು ಅವರು ವಿವರಿಸಿದರು. 

ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವುದಕ್ಖಾಗಿ ಕರ್ನಾಟಕದಲ್ಲಿ ಮಾಡಲಾಗಿರುವ ತಾಂತ್ರಿಕ ನೆರವುಗಳ ಕುರಿತು ಗಮನಸೆಳೆದ ಅವರು, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ, ಸ್ಮಾರ್ಟ್ ಕ್ಲ್ಯಾಸ್ ರೂಮ್ ಗಳ ಸ್ಥಾಪನೆ, ಡಿಜಿಟಲ್ ಬೋಧನೆ-ಕಲಿಕೆಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ನೀಡಿರುವುದು, ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್ಎಂಎಸ್), ಬೋಧನೆ-ಕಲಿಕೆ ಪ್ರಕ್ರಿಯೆಯ ಮೌಲ್ಯಮಾಪನಕ್ಕೆ ಕೊಡಲಾಗಿರುವ ಒತ್ತು, ಆ ಮೂಲಕ ಕಲಿಕಾ ಸರಪಳಿಯ ಯಾವ ಕೊಂಡಿಯೂ ತಪ್ಪಿಹೋಗದಂತೆ ಹೇಗೆ ಕ್ರಮ ವಹಿಸಲಾಗಿದೆ ಎಂಬ ಬಗ್ಗೆ ತಿಳಿಸಿದರು. 

ಹೊಸ ಶಿಕ್ಷಣ ನೀತಿಯಿಂದ ಅಗ್ರಸ್ಥಾನಕ್ಕೆ ಭಾರತ

ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣದಲ್ಲಿ ರಾಜ್ಯವು ದೇಶದಲ್ಲೇ ಮೊದಲ ಹೆಜ್ಜೆ ಇರಿಸಿದ್ದು, ಇದಕ್ಕಾಗಿ ಅಮೆರಿಕದ ಪೆನ್ಸಿಲ್ವೇನಿಯಾದ ಮಾಂಟ್ಗೊಮೇರಿ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ರಾಜ್ಯದಿಂದ ಹಾಗೂ ಮಾಂಟ್ಗೊಮೇರಿ ವಿ.ವಿ.ಯಿಂದ ಟ್ವಿನ್ನಿಂಗ್ ಡಿಪ್ಲೊಮಾ ಪಡೆಯಲು ಅನುವು ಮಾಡಿಕೊಟ್ಟು, ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ಈಗ ಸೈಬರ್ ಸೆಕ್ಯುರಿಟಿ ಮತ್ತು ಟ್ರಾವೆಲ್ & ಟೂರಿಸಂ ಕೋರ್ಸ್ ಗಳಲ್ಲಿ 48 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಪ್ರತಿ ವಿದ್ಯಾರ್ಥಿಗೆ ತಗುಲುವ 20 ಲಕ್ಷ ರೂಪಾಯಿಗೂ ಹೆಚ್ಚಿನ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. 

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಮಾವೇಶಗಳು ಹಾಗೂ ಕಾರ್ಯಾಗಾರಗಳನ್ನು ನಡೆಸುವ ಜೊತೆಗೆ ಸಚಿವರಾದ ಡಾ.ಸಿ.ಎನ್. ಅಶ್ಬತ್ಥನಾರಾಯಣ ಅವರು ರಾಜ್ಯದೆಲ್ಲೆಡೆ ಸಂಚರಿಸಿ ಈ ಬಗ್ಗೆ ಆಸಕ್ತಿ ವಹಿಸಿದರು. ಜೊತೆಗೆ ಈ ಬಗ್ಗೆ ಸಮಾಜದ ಎಲ್ಲಾ ಸ್ತರಗಳಲ್ಲಿ ಅರಿವು ಮೂಡಿಸಲು ಪ್ರಚಾರೋಂದಲಗಳನ್ನು ನಡೆಸಲು ಆದ್ಯತೆ ಕೊಡಲಾಯಿತು ಎಂದರು. 

ವಿವಿಧ ರಾಜ್ಯಗಳು ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಹಿತಾಸಕ್ತಿದಾರರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರ ‘ರಾಷ್ಟ್ರೀಯ ಶಿಕ್ಷಣ ನೀತಿ’ ಅಡಿಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣಗೆ ನಾಂದಿ ಹಾಡಿದೆ. ಎಲ್ಲ ರಾಜ್ಯಗಳು ಅನುಷ್ಠಾನಕ್ಕೆ ಮುಂದಾಗಿದ್ದು ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಮುನ್ನುಡಿ ಸಿಕ್ಕಿದೆ. 

 

click me!