ಅಂತ್ಯಕ್ರಿಯೆ ಮೆರವಣಿಗೆ ವೇಳೆ ನೋಡನೋಡುತ್ತಿದ್ದಂತೆಯೇ ಮಾನವ ಸರಪಳಿ ರಚಿಸಿ ದಾರಿ ಮಾಡಿಕೊಟ್ಟ ಶಿವಭಕ್ತರು

Published : Aug 11, 2026, 04:38 PM IST
Kanwariyas

ಸಾರಾಂಶ

Communal harmony news: ಸಿವಾಯಾ ಗ್ರಾಮದ ನಿವಾಸಿ, 40 ವರ್ಷದ ನಿಜಾಮ್ ಎಂಬುವವರು ದಿಢೀರ್ ಹೃದಯಾಘಾತದಿಂದ ನಿಧನರಾದಾಗ, ಅವರ ಅಂತ್ಯಯಾತ್ರೆಯನ್ನು ಹೆದ್ದಾರಿಯ ಇನ್ನೊಂದು ಬದಿಯಲ್ಲಿರುವ ಸ್ಮಶಾನಕ್ಕೆ ಕೊಂಡೊಯ್ಯುವುದು ಕುಟುಂಬಸ್ಥರಿಗೆ ದೊಡ್ಡ ಸವಾಲಾಗಿತ್ತು.

ದೆಹಲಿ-ಡೆಹ್ರಾಡೂನ್ ಹೈವೇಯ ಸಿವಾಯಾ ಗ್ರಾಮ ರವಿವಾರದಂದು ಮಾನವೀಯತೆ ಮತ್ತು ಕೋಮು ಸೌಹಾರ್ದತೆಗೆ ಸಾಕ್ಷಿಯಾದ ವಿಶಿಷ್ಟ ಘಟನೆಯೊಂದು ನಡೆದಿದೆ. ಹೃದಯಾಘಾತದಿಂದ ಮೃತಪಟ್ಟ ಯುವಕನ ಶವವನ್ನು ಹೈವೇಯ ಇನ್ನೊಂದು ಬದಿಯಲ್ಲಿರುವ ಸ್ಮಶಾನಕ್ಕೆ (ಕಬ್ರಿಸ್ತಾನ್) ಕೊಂಡೊಯ್ಯಲು, ಶಿವಭಕ್ತರು(ಕಾವಡಿಯಾಗಳು) ಸ್ವತಃ ಮುಂದೆ ಬಂದು ಸಾವಿರಾರು ಜನರಿದ್ದ ಮೆರವಣಿಗೆಯನ್ನು ತಡೆದು ಅಂತ್ಯಯಾತ್ರೆಗೆ ದಾರಿ ಮಾಡಿಕೊಟ್ಟರು.

ಕಾವಡ್ ಯಾತ್ರೆಯ ಅಂತಿಮ ಹಂತ

ರವಿವಾರ ಸಿವಾಯಾ ಗ್ರಾಮದ ನಿವಾಸಿ 40 ವರ್ಷದ ನಿಜಾಮ್ ಎಂಬುವವರು ದಿಢೀರ್ ಹೃದಯಾಘಾತದಿಂದ ಮೃತಪಟ್ಟರು. ಕುಟುಂಬಸ್ಥರು ಶವಸಂಸ್ಕಾರಕ್ಕೆ ಸಿದ್ಧತೆ ನಡೆಸಿದಾಗ, ಹೈವೇಯ ಕಾವಡ್ ಮಾರ್ಗದಲ್ಲಿ ಶಿವಭಕ್ತರ ಭಾರಿ ಜನಸ್ತೋಮವೇ ಸಾಗುತ್ತಿತ್ತು. ಸ್ಮಶಾನವು ಹೈವೇಯ ಇನ್ನೊಂದು ಬದಿಯಲ್ಲಿದ್ದ ಕಾರಣ, ಅಂತ್ಯಯಾತ್ರೆ ನಡೆಸುವುದು ಕುಟುಂಬಸ್ಥರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಕಾವಡ್ ಯಾತ್ರೆಯ ಅಂತಿಮ ಹಂತವಾಗಿದ್ದರಿಂದ ದೆಹಲಿ-ಡೂನ್ ಹೈವೇಯಲ್ಲಿ ಪ್ರತಿ ನಿಮಿಷವೂ ಸಾವಿರಾರು ಸಂಖ್ಯೆಯಲ್ಲಿ ಕಾವಡಿಯಾಗಳು ಸಾಗುತ್ತಿದ್ದರು. ಇದನ್ನು ಕಂಡು ಗ್ರಾಮಸ್ಥರು ಪೋಲಿಸ್ ಆಡಳಿತದ ಸಹಾಯ ಕೋರಿದರು.

ದೌರಾಲಾ ಠಾಣಾಧಿಕಾರಿ ಸುಮನ ಕುಮಾರ್ ಸಿಂಗ್ ಅವರು ಪೋಲಿಸ್ ಪಡೆಯೊಂದಿಗೆ ಸ್ಥಳಕ್ಕೆ ತಲುಪಿದರು. ಪೋಲಿಸರ ಸಮ್ಮುಖದಲ್ಲೇ ಅಂತ್ಯಯಾತ್ರೆ ಹೈವೇ ಸಮೀಪಕ್ಕೆ ಬರುತ್ತಿದ್ದಂತೆ, ಅಲ್ಲಿಂದ ಸಾಗುತ್ತಿದ್ದ ಕಾವಡಿಯಾಗಳಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಯಿತು. ಶವಯಾತ್ರೆಯನ್ನು ಕಂಡು ಕೆಲವು ಕಾವಡಿಯಾಗಳು ಸ್ವತಃ ಜವಾಬ್ದಾರಿ ತೆಗೆದುಕೊಂಡು ತಕ್ಷಣವೇ ಒಬ್ಬರನ್ನೊಬ್ಬರು ತಡೆದರು. ನೋಡನೋಡುತ್ತಿದ್ದಂತೆಯೇ ಸಾವಿರಾರು ಕಾವಡಿಯಾಗಳ ಗುಂಪು ಹೈವೇಯಲ್ಲಿ ನಿಂತುಬಿಟ್ಟಿತು. ನಿಜಾಮ್ ಅವರ ಅಂತ್ಯಯಾತ್ರೆ ಹೈವೇ ದಾಟಿದ ನಂತರವೇ ಕಾವಡಿಯಾಗಳು ಮುಂದೆ ಸಾಗಿದರು.

ಮಾನವ ಸರಪಳಿ ರಚಿಸಿ ದೆಹಲಿ-ಡೆಹ್ರಾಡೂನ್ ಹೈವೇ ತಡೆದ ಭಕ್ತರು

ಕಾವಡಿಯಾಗಳ ಒಂದು ಗುಂಪು ಸ್ವತಃ ಮುಂದೆ ಬಂದು ಅಂತ್ಯಯಾತ್ರೆಗೆ ದಾರಿ ಮಾಡಿಕೊಡಲು ನಿರ್ಧರಿಸಿತು. ಅವರು ಒಬ್ಬರನ್ನೊಬ್ಬರು ತಡೆಯುತ್ತಾ ಹೈವೇಯಲ್ಲಿ ಸಾಗುತ್ತಿದ್ದ ಕಾವಡ್ ಯಾತ್ರೆಯ ಭಾರಿ ಜನಸಂದಣಿಯನ್ನು ತಡೆದು ನಿಲ್ಲಿಸಿದರು. ಕೆಲವು ಕಾವಡಿಯಾಗಳು ಪರಸ್ಪರ ಕೈಜೋಡಿಸಿ ಮಾನವ ಸರಪಳಿ ರಚಿಸಿ ಹೈವೇಯಲ್ಲಿ ನಿಂತುಕೊಂಡರು. ಇಡೀ ಅಂತ್ಯಯಾತ್ರೆಯು ಗೌರವಪೂರ್ವಕವಾಗಿ ಹೈವೇ ದಾಟಿ ಸ್ಮಶಾನದತ್ತ ಸಾಗುವವರೆಗೂ ಸಾವಿರಾರು ಕಾವಡಿಯಾಗಳು ಶಾಂತಿಯುತವಾಗಿ ಹೈವೇಯಲ್ಲೇ ಕಾಯ್ದು ನಿಂತರು. ಅಂತ್ಯಯಾತ್ರೆ ಸಾಗಿದ ನಂತರವಷ್ಟೇ ಕಾವಡಿಯಾಗಳು 'ಹರ ಹರ ಮಹಾದೇವ' ಜಯಘೋಷದೊಂದಿಗೆ ತಮ್ಮ ಗಮ್ಯಸ್ಥಾನದತ್ತ ಹೆಜ್ಜೆ ಹಾಕಿದರು.

ಕಾವಡಿಯಾಗಳ ಈ ಗೌರವ ಮತ್ತು ಭ್ರಾತೃತ್ವದ ನಡವಳಿಕೆಗೆ ಇಡೀ ಪ್ರದೇಶದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿವಭಕ್ತರ ಈ ಉಪಕ್ರಮವು ಜಾತ್ಯತೀತ ಸಂಸ್ಕೃತಿ (ಗಂಗಾ-ಜಮುನಿ ತಹಜೀಬ್) ಹಾಗೂ ಮಾನವೀಯತೆಗೆ ಸಾಕ್ಷಿಯಾಗಿದ್ದು, ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾವಿ ವೈದ್ಯೆಗೆ ಚೀಟಿಂಗ್.. IPL ಸ್ಟಾರ್, ಡೆಲ್ಲಿ ಕ್ಯಾಪಿಟಲ್ಸ್‌ನ ಹೀರೋ ಅರೆಸ್ಟ್‌..!
ಬರೀ ಒಳ ಉಡುಪು ಧರಿಸಿ ದಾಖಲೆಗೆ ಸಹಿ ಮಾಡಿದ ಎಎಪಿ ಶಾಸಕ! ಕೆಂಡ ಕಾರಿದ ಸಿಎಂ ರೇಖಾ ಗುಪ್ತಾ