
ನವದೆಹಲಿ(ನ.23): ಮಹತ್ವದ ದತ್ತಾಂಶ ರಕ್ಷಣಾ ಮಸೂದೆಯ ಕರಡು ವರದಿಯನ್ನು(Data Protection Draft Bill) ಸಂಸತ್ತಿನ ಜಂಟಿ ಸದನ ಸಮಿತಿ (JPC), ಸೋಮವಾರ ಬಹುಮತದಿಂದ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ನ.29ರಿಂದ ಆರಂಭ ಆಗುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯ ಕರಡು ವರದಿ ಮಂಡನೆ ಆಗಲಿದೆ.
ದತ್ತಾಂಶ ರಕ್ಷಣೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ 2019ರಲ್ಲೇ ದತ್ತಾಂಶ ರಕ್ಷಣಾ ಮಸೂದೆಯನ್ನು (The Personal Data Protection Bill, 2019’) ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಆದರೆ ಇದರ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯ ಇದ್ದ ಹಿನ್ನೆಲೆಯಲ್ಲಿ ಪರಿಶೀಲನೆಗೆಂದು ಜೆಪಿಸಿಗೆ (Joint Parliamentary Committee) ಒಪ್ಪಿಸಲಾಗಿತ್ತು.
ಈಗ ಇದಕ್ಕೆ ಜೆಪಿಸಿ ಒಪ್ಪಿಗೆ ಸೂಚಿಸಿದೆಯಾದರೂ ತಮ್ಮ ಅಭಿಪ್ರಾಯಗಳನ್ನು ಪರಿಗಣಿಸಿಲ್ಲ ಎಂದು ಸಮಿತಿ ಸದಸ್ಯರಾದ ಜೈರಾಂ ರಮೇಶ್ ಹಾಗೂ ಡೆರಿಕ್ ಓಬ್ರಿಯಾನ್ ಆಕ್ಷೇಪ ಸಲ್ಲಿಸಿದ್ದಾರೆ. ದತ್ತಾಂಶ ರಕ್ಷಣಾ ಕಾಯ್ದೆಯಿಂದ ಸರ್ಕಾರಿ ಇಲಾಖೆಗಳನ್ನು ಸಂಪೂರ್ಣ ಹೊರಗಿಡುವುದು ಸರಿಯಲ್ಲ ಎಂಬುದು ಜೈರಾಂ ಆಕ್ಷೇಪವಾಗಿದೆ.
ಮಸೂದೆಯಲ್ಲೇನಿದೆ?:
ನಾಗರಿಕರ ದತ್ತಾಂಶಗಳನ್ನು ಖಾಸಗಿ ಕಂಪನಿಗಳು ಹಾಗೂ ಸರ್ಕಾರ ಹೇಗೆ ಬಳಸಿಕೊಳ್ಳಬೇಕು ಎಂಬ ನಿಯಮಗಳಿವೆ. ದತ್ತಾಂಶ ದುರ್ಬಳಕೆಯಿಂದ ನಾಗರಿಕರಿಗೆ ಸಂಪೂರ್ಣ ರಕ್ಷಣೆ ನೀಡುತ್ತವೆ. ನಾಗರಿಕರು ತಮ್ಮ ದತ್ತಾಂಶ ಬಳಕೆ ಮಾಡಕೂಡದು ಎಂದು ಯಾವುದೇ ಸಂದರ್ಭದಲ್ಲಿ ನಿರ್ಬಂಧ ವಿಧಿಸಬಹುದಾಗಿದೆ. ದತ್ತಾಂಶ ಹಕ್ಕು ರಕ್ಷಣೆಗೆ ದತ್ತಾಂಶ ರಕ್ಷಣಾ ಪ್ರಾಧಿಕಾರ ರಚಿಸಬೇಕಾಗುತ್ತದೆ. ಒಂದು ವೇಳೆ ನಾಗರಿಕರ ದತ್ತಾಂಶವನ್ನು ಕಂಪನಿಗಳು ದುರ್ಬಳಕೆ ಮಾಡಿಕೊಂಡರೆ ಆ ಕಂಪನಿಗಳ ಒಟ್ಟು ವಾರ್ಷಿಕ ವಹಿವಾಟಿನ ಶೇ.4ರಷ್ಟುದಂಡ ವಿಧಿಸಬಹುದಾಗಿದೆ. ಆದರೆ ರಾಷ್ಟ್ರೀಯ ಭದ್ರತೆ ವಿಷಯಗಳಲ್ಲಿ ಈ ಕಾಯ್ದೆಯು ಸರ್ಕಾರಿ ಇಲಾಖೆಗೆ ಅನ್ವಯಿಸುವುದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ