
ಟೋಕ್ಯೊ/ನವದೆಹಲಿ: ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ "ಮುಂಬೈ-ಅಹಮದಾಬಾದ್ ಬುಲೆಟ್ ರೈಲು" (Mumbai-Ahmedabad Bullet Train) ಯೋಜನೆ ವಿಳಂಬವಾಗಲು ಭಾರತದ ಸಚಿವರು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸ್ವಹಿತಾಸಕ್ತಿಗಳೇ ಕಾರಣ ಎಂದು ಜಪಾನ್ನ ಮಾಜಿ ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಜಪಾನ್ ಮಾಜಿ ಸಚಿವರ ಈ ಹೇಳಿಕೆ ಈಗ ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆದರೆ, ಭಾರತ ಸರ್ಕಾರವು ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಯೋಜನೆ ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಜಪಾನ್ ಸಹಯೋಗದೊಂದಿಗೆ 2017ರಲ್ಲಿ ಆರಂಭವಾದ ಭಾರತದ ಮೊದಲ ಹೈ-ಸ್ಪೀಡ್ ರೈಲು (HSR) ಯೋಜನೆಗೆ ಸಂಬಂಧಿಸಿದಂತೆ ಜಪಾನ್ನ ಮಾಜಿ ನ್ಯಾಯ ಸಚಿವ ಹಿಡೆಕಿ ಮಕಿಹಾರಾ ಅವರು ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಸರಣಿ ಪೋಸ್ಟ್ಗಳನ್ನು ಹಾಕುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
"ಬುಲೆಟ್ ರೈಲು ಯೋಜನೆ ವಿಳಂಬಕ್ಕೆ ಜಪಾನ್ ಯಾವುದೇ ರೀತಿಯಲ್ಲೂ ಹೊಣೆಯಲ್ಲ. ನಾನು ಒಳಗೊಂಡಿದ್ದ ಭಾರತದ ಈ 'ಶಿಂಕನ್ಸೆನ್' (Shinkansen) ಯೋಜನೆ ಸಂಪೂರ್ಣವಾಗಿ ಭಾರತದ ಸಚಿವರು ಮತ್ತು ಅಧಿಕಾರಿಗಳ ಅಜಾಗರೂಕತೆ ಹಾಗೂ ಬೇಜವಾಬ್ದಾರಿತನದಿಂದ ತಡವಾಯಿತು. ಭಾರತೀಯ ಅಧಿಕಾರಿಗಳು ಪದೇ ಪದೇ ಭರವಸೆಗಳನ್ನು ನೀಡಿದರಾದರೂ, ಅವುಗಳನ್ನು ಜಾರಿಗೊಳಿಸಲಿಲ್ಲ. ಈ ದುರವಸ್ಥೆಗೆ ನೇರವಾಗಿ ಸಂಬಂಧಪಟ್ಟ ಸಚಿವರೇ ಕಾರಣ. ಇದರೊಂದಿಗೆ ಮೂಲ ಶಿಂಕನ್ಸೆನ್ ಮಾದರಿಯಲ್ಲಿ ಭಾರತವು ಬದಲಾವಣೆಗಳನ್ನು ಮಾಡುತ್ತಿದ್ದು, ಇದು ಉಭಯ ದೇಶಗಳ ಸಹಭಾಗಿತ್ವಕ್ಕೆ ತೊಡಕಾಗಬಹುದು," ಎಂದು ಮಕಿಹಾರಾ ನೇರವಾಗಿ ಆರೋಪಿಸಿದ್ದಾರೆ.
ಜಪಾನ್ ಮಾಜಿ ಸಚಿವರ ಈ ಆರೋಪಗಳಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರರಾದ ರಣಧೀರ್ ಜೈಸ್ವಾಲ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಜಪಾನ್ ನಾಯಕರ ಪೋಸ್ಟ್ ಅನ್ನು ನಾವು ಗಮನಿಸಿದ್ದೇವೆ ಎಂದ ಅವರು, ಇದು ವಾಸ್ತವಾಂಶಗಳಿಂದ ದೂರವಾಗಿದೆ ಎಂದಿದ್ದಾರೆ.
ಅದು ಕೇವಲ ಅವರ ವೈಯಕ್ತಿಕ ಅಭಿಪ್ರಾಯವಾಗಿದೆಯೇ ಹೊರತು ಅದರಲ್ಲಿ ಯಾವುದೇ ವಾಸ್ತವಾಂಶಗಳಿಲ್ಲ. ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ಸದ್ಯ ಅತ್ಯುತ್ತಮವಾಗಿ ಕಾರ್ಯಾನುಷ್ಠಾನಗೊಳ್ಳುತ್ತಿದ್ದು, ಉತ್ತಮ ಪ್ರಗತಿ ಕಾಣುತ್ತಿದೆ. ಜಪಾನ್ ದೇಶವು ಭಾರತಕ್ಕೆ ಪೂರೈಸಲಿರುವ ಅತ್ಯಾಧುನಿಕ 'ಇ20' (E20) ಶ್ರೇಣಿಯ ಬುಲೆಟ್ ರೈಲುಗಳು ಪ್ರಸ್ತುತ ಅಭಿವೃದ್ಧಿ ಹಾಗೂ ಉತ್ಪಾದನಾ ಹಂತದಲ್ಲಿದ್ದು, ತಾಂತ್ರಿಕ ಕಾರಣಗಳಿಂದಾಗಿ ಅವು 2030ರ ಹೊತ್ತಿಗೆ ಭಾರತಕ್ಕೆ ಲಭ್ಯವಾಗಲಿವೆ ಎಂದು ರಣಧೀರ್ ಜೈಸ್ವಾಲ್ ಸ್ಪಷ್ಟನೆ ನೀಡಿದ್ದಾರೆ.
ಯೋಜನೆಯ ಪ್ರಗತಿಯ ಕುರಿತು ದೇಶದ ಜನತೆಗೆ ಮಾಹಿತಿ ನೀಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಬುಲೆಟ್ ರೈಲು ಯೋಜನೆಯ ಮೊದಲ ಹಂತವು ಆಗಸ್ಟ್ 15, 2027 ರಂದು ಅಧಿಕೃತವಾಗಿ ಚಾಲನೆಗೊಳ್ಳಲಿದೆ ಎಂದು ಪ್ರಕಟಿಸಿದ್ದಾರೆ.
ಗುಜರಾತ್ನ ಸೂರತ್ನಿಂದ ಬಿಲಿಮೊರಾ (Surat-Bilimora Section) ನಡುವಿನ ಮಾರ್ಗದಲ್ಲಿ ಮೊದಲ ಹಂತದ ರೈಲು ಸಂಚಾರ ಆರಂಭವಾಗಲಿದ್ದು, ಆ ಬಳಿಕ ಹಂತ ಹಂತವಾಗಿ ಇಡೀ ಮುಂಬೈ-ಅಹಮದಾಬಾದ್ ಕಾರಿಡಾರ್ನಲ್ಲಿ ಪೂರ್ಣಪ್ರಮಾಣದಲ್ಲಿ ಬುಲೆಟ್ ರೈಲು ಓಡಲಿದೆ ಎಂದು ರೈಲ್ವೆ ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ. ಜಪಾನ್ ರಾಜತಾಂತ್ರಿಕರ ಹೇಳಿಕೆಗಳ ನಡುವೆಯೂ ಭಾರತವು ತನ್ನ ನಿಗದಿತ ಗಡುವಿನೊಳಗೆ ಯೋಜನೆಯನ್ನು ಮುಗಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ