
ಬೆಂಗಳೂರು (ಜು.6): ಭಾರತವು ಜುಲೈ 14 ರಂದು ಮಧ್ಯಾಹ್ನ 2.35 ಕ್ಕೆ ಬಾಹ್ಯಾಕಾಶ ನೌಕೆಯ ಮೂಲಕ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಿದೆ. ಇಸ್ರೋ ಅಧಿಕೃತವಾಗಿ ಗುರುವಾರ ಇದರ ಮಾಹಿತಿ ನೀಡಿದೆ. ಈ ಹಿಂದೆ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಚಂದ್ರಯಾನವನ್ನು ಜುಲೈ 12 ಮತ್ತು ಜುಲೈ 19 ರ ನಡುವೆ ಉಡಾವಣೆ ಮಾಡಲಾಗುವುದು ಎಂದು ತಿಳಿಸಿದ್ದರು. ಉಡಾವಣಾ ರಾಕೆಟ್ ಸಜ್ಜಾಗಿದೆ. ಬುಧವಾರವೇ ಉಡಾವಣಾ ವಾಹನದಲ್ಲಿ ಚಂದ್ರಯಾನ-3 ಯೋಜನೆಯ ಎಲ್ಲಾ ಭಾಗಗಳನ್ನು ಜೋಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಚಂದ್ರಯಾನ-3 ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಲ್ಲಿ ಯಶಸ್ವಿಯಾದರೆ, ಭಾರತ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ. ಈ ಹಿಂದೆ ಅಮೆರಿಕ, ರಷ್ಯಾ ಮತ್ತು ಚೀನಾ ತಮ್ಮ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಇಳಿಸಿದ್ದವು.
2019ರ ಜುಲೈ 22 ರಂದು ಇಸ್ರೋ ಚಂದ್ರಯಾನ-2 ಯೋಜನೆಯನ್ನು ಉಡ್ಡಯನ ಮಾಡಿತ್ತು. ಅದಾದ ನಾಲ್ಕು ವರ್ಷಗಳ ಬಳಿಕ ಚಂದ್ರಯಾನ-3 ಯೋಜನೆಯ ಮೂಲಕ ಚಂದ್ರನ ನೆಲದ ಮೇಲೆ ಕಾಲಿಡುವ ತನ್ನ ಪ್ರಯತ್ನವನ್ನು ಮುಂದುವರಿಸಲಿದೆ. ಜುಲೈ 22 ರಂದು ಉಡ್ಡಯನವಾಗಿದ್ದ ಚಂದ್ರಯಾನ-2 ಎರಡು ತಿಂಗಳ ಬಳಿಕ ಅಂದರೆ, 2019ರ ಸೆಪ್ಟೆಂಬರ್ 7 ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಈ ವೇಳೆ ವಿಕ್ರಮ್ ಲ್ಯಾಂಡರ್ ಚಂದ್ರನ ಈವರೆಗೂ ಅಗೋಚರ ಪ್ರದೇಶವಾಗಿರುವ ದಕ್ಷಿಣ ಧ್ರುವದಲ್ಲಿ ಇಳಿಯುವ ಪ್ರಯತ್ನ ಮಾಡಿತ್ತು. ಆದರೆ, ವಿಕ್ರಮ್ ಲ್ಯಾಂಡರ್ ಚಂದ್ರನ ನೆಲಕ್ಕೆ ಬೀಳುವಾಗ ಸಂಪೂರ್ಣವಾಗಿ ಕ್ರ್ಯಾಶ್ ಆಗಿತ್ತು. ಅಂದಿನಿಂದ ಇಸ್ರೋ ಚಂದ್ರಯಾನ-3 ಯೋಜನೆಯಲ್ಲಿ ತನ್ನ ಕೆಲಸವನ್ನು ಆರಂಭ ಮಾಡಿತ್ತು.
ರಷ್ಯಾದ ಯೋಜನೆ ಪೋಸ್ಟ್ಪೋನ್: ಇನ್ನೊಂದೆಡೆ, ರಷ್ಯಾ ತನ್ನ ಮೂನ್ ಲ್ಯಾಂಡರ್ ಮಿಷನ್ ಅನ್ನು ಮುಂದೂಡಿದೆ. ಮೂಲಸೌಕರ್ಯದ ಹೆಚ್ಚುವರಿ ಪರಿಶೀಲನೆಗಳನ್ನು ಪೂರ್ಣಗೊಳಿಸದ ಕಾರಣ ಇದನ್ನು ಮಾಡಲಾಗಿದೆ. 2022ರಲ್ಲಿ ರಷ್ಯಾದ ಈ ಮಿಷನ್ ತಾಂತ್ರಿಕ ಸಮಸ್ಯೆಗಳಿಂದ ಮುಂದೂಡಲ್ಪಟ್ಟಿತು. ಇಂತಹ ಪರಿಸ್ಥಿತಿಯಲ್ಲಿ ಭಾರತದ ಚಂದ್ರಯಾನ-3 ರಷ್ಯಾಕ್ಕಿಂತ ಮೊದಲು ಚಂದ್ರನ ಮೇಲೆ ಇಳಿಯುವ ಅವಕಾಶ ಪಡೆದುಕೊಂಡಿದೆ.
ಚಂದ್ರಯಾನ 3 ಅಧಿಕೃತ ಘೋಷಣೆಯನ್ನು ಮಾಡಿದ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಚಂದ್ರಯಾನ-2ನಲ್ಲಿ ಆಗಿರುವ ತಪ್ಪುಗಳನ್ನು ನಾವು ತಿದ್ದಿಕೊಂಡಿದ್ದೇವೆ. ಪ್ರತಿ ಬಾರಿಯೂ ಯಶಸ್ಸು ಸಾಧಿಸಬೇಕು ಅಂದರೆ ಸಾಧ್ಯವಿಲ್ಲ. ಆದರೆ, ತಪ್ಪಾದ ಯೋಜನೆಗಳಿಂದ ಕಲಿತು ಮುಂದಕ್ಕೆ ಸಾಗಬೇಕಿದೆ. ಸೋಲು ಅಂದಾ ಮಾತ್ರಕ್ಕೆ ಪ್ರಯತ್ನವನ್ನೇ ಮಾಡಬೇಡಿ ಅಂದರ್ಥವಲ್ಲ. ಚಂದ್ರಯಾನ-3 ಮೂಲಕ ನಾವು ಸಾಕಷ್ಟು ವಿಚಾರಗಳನ್ನು ಕಲಿತುಕೊಳ್ಳಲಿದ್ದೇವೆ. ಖಂಡಿತವಾಗಿ ನಾವು ಇತಿಹಾಸ ಸೃಷ್ಟಿಸಲಿದ್ದೇವೆ ಎಂದು ತಿಳಿಸಿದ್ದಾರೆ.
Chandrayaan-3: ಜುಲೈ 13ಕ್ಕೆ ಭಾರತದ ಚಂದ್ರಯಾನ!
ಇಸ್ರೋ ಚಂದ್ರಯಾನ ಮಿಷನ್ ಅಡಿಯಲ್ಲಿ ಚಂದ್ರನನ್ನು ಅಧ್ಯಯನ ಮಾಡಲು ಬಯಸಿದೆ. ಭಾರತವು 2008 ರಲ್ಲಿ ಮೊದಲ ಬಾರಿಗೆ ಚಂದ್ರಯಾನ-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು, ಇದರ ನಂತರ, 2019 ರಲ್ಲಿ ಚಂದ್ರಯಾನ-2 ಉಡಾವಣೆಯಲ್ಲಿ ಭಾರತ ಸಿಹಿ-ಕಹಿ ಫಲಿತಾಂಶ ಕಂಡಿತ್ತು. ಈಗ ಭಾರತವು ಚಂದ್ರಯಾನ-3 ಅನ್ನು ಉಡಾವಣೆ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇದನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತದೆ. ಚಂದ್ರನತ್ತ ಬಾಹ್ಯಾಕಾಶ ನೌಕೆಯನ್ನು ಕೊಂಡೊಯ್ಯಲು ಇಸ್ರೋ ಮೂರು ಭಾಗಗಳನ್ನು ಸಿದ್ಧಪಡಿಸಿದ್ದು, ಇದನ್ನು ತಾಂತ್ರಿಕ ಭಾಷೆಯಲ್ಲಿ ಮಾಡ್ಯೂಲ್ ಎಂದು ಕರೆಯಲಾಗುತ್ತದೆ. ಚಂದ್ರಯಾನ-3 ಮಿಷನ್ನಲ್ಲಿನ ಮಾಡ್ಯೂಲ್ 3 ಭಾಗಗಳನ್ನು ಹೊಂದಿದೆ. ಈ ಮೂರರ ಹೊರತಾಗಿ ಚಂದ್ರಯಾನ-2 ಇನ್ನೂ ಒಂದು ಭಾಗವನ್ನು ಹೊಂದಿತ್ತು, ಇದನ್ನು ಆರ್ಬಿಟರ್ ಎಂದು ಕರೆಯಲಾಗುತ್ತದೆ. ಈ ಬಾರಿ ಅವರನ್ನು ಕಳುಹಿಸಲಾಗುತ್ತಿಲ್ಲ. ಚಂದ್ರಯಾನ-2 ರ ಆರ್ಬಿಟರ್ ಈಗಾಗಲೇ ಚಂದ್ರನ ಸುತ್ತ ಸುತ್ತುತ್ತಿದೆ. ಈಗ ಇಸ್ರೋ ಇದನ್ನು ಚಂದ್ರಯಾನ-3ರಲ್ಲಿ ಬಳಸಿಕೊಳ್ಳಲಿದೆ.
ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ