
ಬೆಂಗಳೂರು (ಮೇ.8): ಆರ್ಸಿಬಿ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವು ಬೆಂಗಳೂರಿನಿಂದ ಕೈತಪ್ಪಲು ಕ್ರೀಡಾಂಗಣದ ಸಾಮರ್ಥ್ಯ ಕಾರಣವಲ್ಲ, ಬದಲಾಗಿ ಸರ್ಕಾರದ ದುರಾಸೆ ಕಾರಣ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಕಾಂಗ್ರೆಸ್ ಸರ್ಕಾರವು 'ಕ್ರೀಡಾಂಗಣದ ಸಾಮರ್ಥ್ಯ' ಕಡಿಮೆ ಇದೆ ಎಂಬ ಕುಂಟು ನೆಪ ಹೇಳಿ ಜನರ ದಾರಿ ತಪ್ಪಿಸುತ್ತಿದ್ದರೆ, ಇತ್ತ ಬಿಸಿಸಿಐ ಅಸಲಿ ಕಾರಣವನ್ನು ಬಿಚ್ಚಿಟ್ಟಿದೆ. ಹಾಗಾದರೆ ಬೆಂಗಳೂರಿನಿಂದ ಐಪಿಎಲ್ ಫೈನಲ್ ಕೈತಪ್ಪಲು ಅಸಲಿ ಕಾರಣವೇನು? ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಬಾಯಲ್ಲೇ ಕೇಳಿ.
ಕಾಂಗ್ರೆಸ್ ಸರ್ಕಾರ 'ಕ್ರೀಡಾಂಗಣದ ಸಾಮರ್ಥ್ಯ"ದ ಬಗ್ಗೆ ಸುಳ್ಳು ಕಥೆಗಳನ್ನು ಹೇಳುತ್ತಿದ್ದರೆ, ಇತ್ತ ಬಿಸಿಸಿಐ ಸತ್ಯವನ್ನೇ ಬಿಚ್ಚಿಟ್ಟಿದೆ: ಕೇವಲ ತಮ್ಮ ವಿವಿಐಪಿ (VVIP) ಬಳಗಕ್ಕಾಗಿ ಬರೋಬ್ಬರಿ 10,000 ಉಚಿತ ಟಿಕೆಟ್ಗಳಿಗಾಗಿ ಇವರು ಬೇಡಿಕೆಯಿಟ್ಟಿದ್ದರು! .
ಈ ಉಚಿತ ಟಿಕೆಟ್ಗಳ ಪಟ್ಟಿಯಲ್ಲಿ 900 ಟಿಕೆಟ್ಗಳು ಶಾಸಕರಿಗೆ ಹಾಗೂ 700 ಟಿಕೆಟ್ಗಳು ನೇರವಾಗಿ ಸರ್ಕಾರಕ್ಕೆ ಬೇಕೆಂದು ಪಟ್ಟು ಹಿಡಿಯಲಾಗಿತ್ತು ಎಂದು ಹೇಳಲಾಗುತ್ತಿದೆ.
ಕೇವಲ ಐಷಾರಾಮಿ ಸವಲತ್ತುಗಳಿಗಾಗಿ ಹಠಕ್ಕೆ ಬಿದ್ದ ಪರಿಣಾಮವಾಗಿ ಇಂದು ಬೆಂಗಳೂರಿನ ಕ್ರೀಡಾಭಿಮಾನಿಗಳು ಐಪಿಎಲ್ ಫೈನಲ್ರ ರಣರೋಚಕ, ಅದ್ಭುತ ಪಂದ್ಯವನ್ನ ಕಳೆದುಕೊಳ್ಳುವಂತಾಗಿದೆ.
ಇನ್ನೊಂದೆಡೆ, ರಿಯಾಯಿತಿ ದರದಲ್ಲಿ ಸರ್ಕಾರದಿಂದ ಜಮೀನು ಪಡೆದ ಕೆಎಸ್ಸಿಎ (KSCA) ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಿ ಸವಲತ್ತುಗಳನ್ನು ಅನುಭವಿಸುತ್ತಿರುವ ಈ ಸಂಸ್ಥೆ, ಸಾಮಾನ್ಯ ಅಭಿಮಾನಿಗಳಿಗೆ ಮಾತ್ರ 'ಡೈನಾಮಿಕ್ ಪ್ರೈಸಿಂಗ್' ಹೆಸರಲ್ಲಿ ಟಿಕೆಟ್ ದರ ಏರಿಸಿ ಲೂಟಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಚಿನ್ನಸ್ವಾಮಿ ಕ್ರೀಡಾಂಗಣವು ಕನ್ನಡಿಗರ ಮತ್ತು ಅಭಿಮಾನಿಗಳ ಆಸ್ತಿಯೇ ಹೊರತು, ರಾಜಕಾರಣಿಗಳ ಖಾಸಗಿ ಪಾರ್ಟಿ ಹಾಲ್ ಅಲ್ಲ. ವಿವಿಐಪಿ ಬಾಕ್ಸ್ನಲ್ಲಿ ಕುಳಿತು ಉಚಿತವಾಗಿ ತಿಂಡಿ ತಿನ್ನಲು ಮತ್ತು ಮಜಾ ಮಾಡಲು ಅಭಿಮಾನಿಗಳ ಭಾವನೆಯನ್ನೇ ಸರ್ಕಾರ ಒತ್ತೆ ಇಟ್ಟಿದೆ. ಬೆಂಗಳೂರಿನ ಜನತೆ ಈ ನಂಬಿಕೆ ದ್ರೋಹವನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಐಪಿಎಲ್ ಫೈನಲ್ ಮ್ಯಾಚ್ ಬೆಂಗಳೂರಿನಿಂದ ಗುಜರಾತ್ಗೆ ಸ್ಥಳಾಂತರಗೊಂಡ ವಿಚಾರವಾಗಿ ನಿನ್ನೆಯಷ್ಟೇ ಸಚಿವ ಪ್ರಿಯಾಂಕ್ ಖರ್ಗೆ ಬಿಸಿಸಿಐ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕರ್ನಾಟಕಕ್ಕೆ ಬರಬೇಕಾದ ಬಂಡವಾಳ ಮತ್ತು ಐಪಿಎಲ್ ಪಂದ್ಯಗಳನ್ನು ಗುಜರಾತ್ಗೆ ಹೈಜಾಕ್ ಮಾಡಲಾಗುತ್ತಿದೆ. ಸೆಮಿಕಂಡಕ್ಟರ್ ಯೋಜನೆಗಳಿಗೆ ಕಂಪನಿಗಳು ಕರ್ನಾಟಕವನ್ನು ಆಯ್ಕೆ ಮಾಡಿದರೂ ಅವುಗಳನ್ನು ಅಸ್ಸಾಂ ಅಥವಾ ಗುಜರಾತ್ಗೆ ಕೊಂಡೊಯ್ಯಲಾಗುತ್ತಿದೆ. ಬಿಸಿಸಿಐನಲ್ಲಿ ಜಯ್ ಶಾ ಇರುವುದರಿಂದ ಅವರಿಗೆ ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ, ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದರು. ಅದರೆ ಐಪಿಎಲ್ ಫೈನಲ್ ಮ್ಯಾಚ್ ಬೆಂಗಳೂರು ಕೈತಪ್ಪಲು ಅಸಲಿ ಕಾರಣವೇನು ಎಂಬುದನ್ನ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಯಲು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ