
ನವದೆಹಲಿ (ಜನವರಿ 11, 2024): ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಬೆಂಬಲ ಸಿಗುತ್ತಿರುವ ನಡುವೆಯೇ ಮಾಲ್ಡೀವ್ಸ್ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ.
ದತ್ತಾಂಶಗಳ ಪ್ರಕಾರ 2023ರಲ್ಲಿ 2,09,198 ಭಾರತೀಯರು ಮಾಲ್ಡೀವ್ಸ್ ಪ್ರವಾಸ ಮಾಡಿ ಮೊದಲ ಸ್ಥಾನದಲ್ಲಿದ್ದರು. ಅಂದರೆ ಪ್ರತಿದಿನಕ್ಕೆ ಸರಾಸರಿ 572 ಭಾರತೀಯರು ಮಾಲ್ಡೀವ್ಸ್ಗೆ ಭೇಟಿ ನೀಡಿ ಅಲ್ಲಿನ ಪ್ರವಾಸೋದ್ಯಮಕ್ಕೆ ಶೇ.11.1 ರಷ್ಟು ಕೊಡುಗೆ ನೀಡಿದ್ದರು. ಆದರೆ 2024ರಲ್ಲಿ ಜನವರಿ 8ರವರೆಗೆ ಕೇವಲ 3,334 ಭಾರತೀಯರು ಮಾತ್ರ ಮಾಲ್ಡೀವ್ಸ್ ಪ್ರವಾಸ ಮಾಡಿದ್ದು, ದಿನದ ಸರಾಸರಿಯಲ್ಲಿ ಕೇವಲ 400 ಮಂದಿ ಭೇಟಿ ನೀಡಿದ್ದಾರೆ. ಇದರೊಂದಿಗೆ ಭಾರತ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ. ರಷ್ಯಾ, ಇಟಲಿ ಮತ್ತು ಬ್ರಿಟನ್ ಪ್ರವಾಸಿಗರು ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.
ಇದನ್ನು ಓದಿ: ಮಾಲ್ಡೀವ್ಸ್ ಸಚಿವರ ಜನಾಂಗೀಯ ಟ್ವೀಟ್: ಸಾಮಾಜಿಕ ಜಾಲತಾಣದಲ್ಲಿ #BoycottMaldives ಟ್ರೆಂಡ್
ಈ ಕುರಿತು ಮಾತನಾಡಿದ ಮಾಲ್ಡೀವ್ಸ್ನ ಟ್ರಾವೆಲ್ ಏಜೆಂಟ್ವೊಬ್ಬರು, ‘ಭಾರತೀಯ ಪ್ರವಾಸಿಗರ ಕುಸಿತ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿರದಿದ್ದರೂ ಮುಂದಿನ ದಿನಗಳಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ. ಈಗ ಬರುತ್ತಿರುವವರೆಲ್ಲರೂ ಮುಂಚೆಯೇ ಪ್ರವಾಸ ಬುಕ್ ಮಾಡಿದ್ದವರಾಗಿದ್ದಾರೆ ಮತ್ತು ನಮಗೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಬುಕಿಂಗ್ ಬರುತ್ತಿದೆ’ ಎಂದು ತಿಳಿಸಿದ್ದಾರೆ.
ಭಾರತದ ಬಗ್ಗೆ ಸುಳ್ಳು ಹೇಳಿದ್ದ ಮುಯಿಜ್
ಲಂಡನ್: ಅಧ್ಯಕ್ಷರಾಗಿ ಚುನಾಯಿತರಾಗುತ್ತಿದ್ದಂತೆಯೇ ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಸೂಚಿಸಿ ಟೀಕೆಗೆ ಗುರಿಯಾಗಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ ತಮ್ಮ ದೇಶದಲ್ಲಿ ಭಾರತೀಯ ಸೇನೆ ಇರುವುದರಿಂದ ಆಗಬಹುದಾದ ಪರಿಣಾಮಗಳ ಕುರಿತು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಚುನಾವಣೆಗಳಲ್ಲಿ ಕರುಣೆ ಗಿಟ್ಟಿಸಿ ಗೆದ್ದಿದ್ದಾರೆ ಎಂದು ಯೂರೋಪಿಯನ್ ಒಕ್ಕೂಟ ವರದಿ ಮಾಡಿದೆ.
ಪ್ರಧಾನಿ ಭೇಟಿ ನಂತರ MakeMyTripನಲ್ಲಿ ಲಕ್ಷದ್ವೀಪ ಸರ್ಚ್ನಲ್ಲಿ 3,400% ಏರಿಕೆ: ನೂತನ ಅಭಿಯಾನ ಪ್ರಾರಂಭ!
ಮಾಲ್ಡೀವ್ಸ್ ಆಹ್ವಾನದ ಮೇರೆಗೆ 11 ವಾರಗಳ ಕಾಲ ಅಲ್ಲಿನ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಯ ವೀಕ್ಷಕರಾಗಿ ತೆರಳಿದ್ದ ಯುರೋಪಿಯನ್ ಯೂನಿಯನ್ ತನ್ನ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಅದರಲ್ಲಿ ಮೊಹಮ್ಮದ್ ಮುಯಿಜ್ ಅವರು ಪ್ರತಿಪಕ್ಷಗಳ ಮೈತ್ರಿಕೂಟ ಮಾಡಿಕೊಂಡು ಭಾರತದ ವಿರುದ್ಧ ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲ ಕಡೆ ವ್ಯವಸ್ಥಿತವಾಗಿ ಸುಳ್ಳು ಸುದ್ದಿ ಹಬ್ಬುವಂತೆ ತಂತ್ರ ಹೆಣೆದರು. ಅಲ್ಲದೆ ಭಾರತವನ್ನು ಅವಹೇಳನಕಾರಿ ಪದಗಳಲ್ಲಿ ನಿಂದಿಸಿ ಜನರ ಅಲೆ ತಮ್ಮತ್ತ ತಿರುಗುವಂತೆ ನೋಡಿಕೊಂಡರು. ಅಲ್ಲದೆ ಭಾರತೀಯ ಸೇನೆ ಇರುವಿಕೆಯಿಂದ ತಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ಬರುವ ಜೊತೆಗೆ ನಮ್ಮ ದೇಶದಲ್ಲಿ ಭ್ರಷ್ಟಾಚಾರ, ನಿರುದ್ಯೋಗಗಳು ಹಾಗೆಯೇ ಮುಂದುವರೆಯಲಿದೆ ಎಂದು ಜನರನ್ನು ನಂಬಿಸಿ ಶೇ.54ರಷ್ಟು ಮತಗಳನ್ನು ಪಡೆಯಲು ಪ್ರಮುಖ ಕಾರಣ ಎಂದು ವರದಿ ಉಲ್ಲೇಖಿಸಿದೆ.
ಜೊತೆಗೆ ಮಾಲ್ಡೀವ್ಸ್ ಚುನಾವಣಾ ಆಯೋಗದ ಪ್ರಕ್ರಿಯೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಪ್ರಕ್ರಿಯೆಯನ್ನು ಮತ್ತಷ್ಟು ಸುಲಲಿತಗೊಳಿಸಲು 20 ಅಂಶಗಳನ್ನು ಶಿಫಾರಸು ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ