
ಭಾರತ ಆಪರೇಷನ್ ಸಿಂದೂರ್ ಹೆಸರಿನಲ್ಲಿ ನಡೆಸಿದ ಉಗ್ರ ಸಂಹಾರ ಕಾರ್ಯಾಚರಣೆಯ ಭಾಗವಾಗಿ ಉಗ್ರರ ಬೆನ್ನಿಗೆ ನಿಂತು ಭಾರತದ ವಿರುದ್ಧ ದಾಳಿ ಮಾಡಿದ ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿತು. ಇಂದು ಮಿಲಿಟರಿ ಕಾರ್ಯಾಚರಣೆಗಳ ಉನ್ನತ ಮಹಾನಿರ್ದೇಶಕರು ಮತ್ತು ಹಿರಿಯ ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದು, ಈ ಸುದ್ದಿಗೋಷ್ಠಿಯಲ್ಲಿ ಅವರು ದಾಳಿಯ ನಂತರ ಪಾಕಿಸ್ತಾನದ ನೂರ್ ಖಾನ್ ಏರ್ಬೇಸ್ನ ಸ್ಥಿತಿಯನ್ನು ವೀಡಿಯೋದಲ್ಲಿ ತೋರಿಸಿದ್ದಾರೆ.
ಈ ನೂರ್ ಖಾನ್ ಏರ್ಬೇಸ್ ಪಾಕಿಸ್ತಾನದ ವಾಯುಸೇನೆಯ ಪ್ರಮುಖ ಕೇಂದ್ರವಾಗಿತ್ತು. ಇದರ ಧ್ವಂಸದ ಬಳಿಕವಷ್ಟೇ ಪಾಕ್ ಸ್ವಲ್ಪ ತಣ್ಣಗಾಗಿ ಶಾಂತವಾಗಿದ್ದು, ಹೀಗಾಗಿ ಈ ದಾಳಿ ಭಾರತದ ಪಾಲಿಗೆ ಮಹತ್ವದಾಗಿದೆ. ನೂರ್ ಖಾನ್ ವಾಯುನೆಲೆಯನ್ನು ಕ್ಷಿಪಣಿ ಹಾರಿಸಿ ಭಾರತ ಧ್ವಂಸ ಮಾಡುವ ಮೂಲಕ ಪಾಕಿಸ್ತಾನದ ಮಿಲಿಟರಿ ಮೂಲಸೌಕರ್ಯಕ್ಕೆ ಆಘಾತಕಾರಿ ಹೊಡೆತ ನೀಡಿದೆ. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಡೆದ ಈ ದಾಳಿಯೂ ಭಯೋತ್ಪಾದಕ ಉಡಾವಣಾ ನೆಲೆಗಳ ಮೇಲೆ ನಿಖರವಾದ ದಾಳಿ ಮಾಡಿತ್ತು.
ಇಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸೇನೆಯ ಅಧಿಕಾರಿಗಳು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದರು. ಏರ್ ಮಾರ್ಷಲ್ ಎ.ಕೆ. ಭಾರ್ತಿ ಸೇರಿದಂತೆ ಭದ್ರತಾ ಪಡೆಯ ಅಧಿಕಾರಿಗಳು ದೃಶ್ಯ ಸಾಕ್ಷ್ಯಗಳ ಸಮೇತ ಈ ದಾಳಿಯನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟರು. ಈ ಹಿಂದೆ ಪಿಎಎಫ್ ಚಕ್ಲಾಲಾ ಎಂದು ಕರೆಯಲ್ಪಡುತ್ತಿದ್ದ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ರಾವಲ್ಪಿಂಡಿಯಲ್ಲಿದ್ದು, ಪಾಕಿಸ್ತಾನದ ಏರ್ ಮೊಬಿಲಿಟಿ ನಿಯಂತ್ರಣ ಕಮಾಂಡ್ನ ನರ ಕೇಂದ್ರದಂತೆ ಕೆಲಸ ಮಾಡುತ್ತದೆ. ಈ ವಾಯುನೆಲೆಯೂ ವಾಯುಗಾಮಿ ಮುಂಚಿನ ಎಚ್ಚರಿಕೆ ವ್ಯವಸ್ಥೆಗಳು, C-130 ಸಾರಿಗೆ ವಿಮಾನಗಳು ಮತ್ತು IL-78 ವೈಮಾನಿಕ ಇಂಧನ ತುಂಬುವ ಟ್ಯಾಂಕರ್ಗಳು ಸೇರಿದಂತೆ ಹೆಚ್ಚಿನ ಮೌಲ್ಯದ ವೈಮಾನಿಕ ಆಸ್ತಿಗಳಿಗೆ ನೆಲೆಯಾಗಿದೆ.
ಪಾಕಿಸ್ತಾನದ ವಾಯುನೆಲೆಯ ಮೇಲಿನ ದಾಳಿಯು ಪಾಕಿಸ್ತಾನದ ವಾಯುಪಡೆಗೆ ಭಾರತದ ವಿರುದ್ಧದ ಕಾರ್ಯತಂತ್ರದಲ್ಲಿ ತೀವ್ರ ಹಿನ್ನಡೆಯನ್ನು ಉಂಟು ಮಾಡಿದೆ. ನಾಶವಾದ ನೆಲೆಯ ದೃಶ್ಯಗಳನ್ನು ಪ್ರದರ್ಶಿಸುತ್ತಾ, ಏರ್ ಮಾರ್ಷಲ್ ಭಾರ್ತಿ, ನಾವು ಎದುರಾಳಿಯ ಉದ್ದ ಮತ್ತು ಅಗಲವನ್ನು ಎರಡನ್ನೂ ಗುರಿಯಾಗಿಸಿಕೊಂಡಿದ್ದೇವೆ ಎಂದರು. ಇದೇ ವೇಳೆ ಅವರು ಐಎಎಫ್ ದಾಳಿಯಿಂದಾಗಿ ದೊಡ್ಡ ಹೊಂಡ ನಿರ್ಮಾಣವಾದ ಪಾಕಿಸ್ತಾನದ ಮತ್ತೊಂದು ರಹೀಮ್ ಯಾರ್ ಖಾನ್ ವಾಯುನೆಲೆಯ ದೃಶ್ಯಗಳನ್ನು ಅವರು ಹಂಚಿಕೊಂಡರು.
ಭಾರತದ ರಕ್ಷಣಾ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು, ವಿಶೇಷವಾಗಿ ದೇಶಿಯ ನಿರ್ಮಿತ ಆಕಾಶ್, ವಾಯು ರಕ್ಷಣಾ ವ್ಯವಸ್ಥೆಯ ಕಾರ್ಯಕ್ರಮತೆಯನ್ನು ಏರ್ ಮಾರ್ಷಲ್ ಇದೇ ವೇಳೆ ಶ್ಲಾಘಿಸಿದರು. ನಮ್ಮ ಯುದ್ಧಕ್ಕೆ ಸಾಬೀತಾದ ವ್ಯವಸ್ಥೆಗಳು ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ ಮತ್ತು ಅವುಗಳನ್ನು ಎದುರಿಸುತ್ತಿವೆ. ಮತ್ತೊಂದು ಪ್ರಮುಖ ಅಂಶವೆಂದರೆ ಸ್ಥಳೀಯ ವಾಯು ರಕ್ಷಣಾ ವ್ಯವಸ್ಥೆಯಾದ ಆಕಾಶ್ ವ್ಯವಸ್ಥೆಯ ಅದ್ಭುತ ಕಾರ್ಯಕ್ಷಮತೆ. ಕಳೆದ ದಶಕದಲ್ಲಿ ಭಾರತ ಸರ್ಕಾರದ ಬಜೆಟ್ ಮತ್ತು ನೀತಿ ಬೆಂಬಲದಿಂದಾಗಿ ಪ್ರಬಲವಾದ ವಾಯು ರಕ್ಷಣಾ ಪರಿಸರವನ್ನು ಒಟ್ಟುಗೂಡಿಸುವುದು ಮತ್ತು ಕಾರ್ಯಗತಗೊಳಿಸುವುದು ಸಾಧ್ಯವಾಗಿದೆ ಎಂದರು.
ಪಾಕಿಸ್ತಾನದ ಕ್ರಮಗಳ ಬಗ್ಗೆ ಪ್ರತಿಕ್ರಿಯಿಸಿದ ಭಾರ್ತಿ, ಪಾಕಿಸ್ತಾನಿ ಸೇನೆಯು ಭಯೋತ್ಪಾದಕರ ಪರವಾಗಿ ಮಧ್ಯಪ್ರವೇಶಿಸಲು ಆಯ್ಕೆ ಮಾಡಿಕೊಂಡಿರುವುದು ವಿಷಾದಕರ ಸಂಗತಿ ಹಾಗಾಗಿ ನಾವು ಅವರಿಗೆ ಅವರಂತೆ ತಿರುಗೇಟು ನೀಡುವ ಆಯ್ಕೆಯನ್ನು ಆರಿಸಿಕೊಂಡೆವು ಎಂದು ಹೇಳಿದರು. ಎಲ್ಲಾ ಭಾರತೀಯ ಮಿಲಿಟರಿ ಸ್ಥಾಪನೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಭವಿಷ್ಯದ ಯಾವುದೇ ಕಾರ್ಯಾಚರಣೆಗಳಿಗೆ ಸದಾ ಸನ್ನದ್ಧವಾಗಿರುತ್ತವೆ ಎಂದು ಅವರು ಇದೇ ವೇಳೆ ಭರವಸೆ ನೀಡಿದರು.
ಏಪ್ರಿಲ್ 22 ರಂದು ಪಾಕಿಸ್ತಾನ ಬೆಂಬಲಿತ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಘಟನೆಗೆ ನೇರ ಪ್ರತಿಕ್ರಿಯೆಯಾಗಿ ಕೇವಲ 12 ದಿನದಲ್ಲಿ ಮೇ 7 ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಲಾಯಿತು. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಒಂಬತ್ತು ಪ್ರಮುಖ ಭಯೋತ್ಪಾದಕ ಲಾಂಚ್ಪ್ಯಾಡ್ಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿದವು. ನಂತರದ ದಿನಗಳಲ್ಲಿ ಪಾಕಿಸ್ತಾನವು ಭಾರತದತ್ತ ಡೋನ್ಗಳು ಮತ್ತು ಕ್ಷಿಪಣಿಗಳ ದಾಳಿ ನಡೆಸಿತ್ತು ಹಾಗೂ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಇದೆಲ್ಲವನ್ನೂ ತಡೆಹಿಡಿದು ನಾಶಪಡಿಸಿದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ