
ನವದೆಹಲಿ (ಮೇ.5): ಯುದ್ಧದ ಸಿದ್ಧತೆಗಳ ಕುರಿತು ವಾಯುಪಡೆಯ ಮುಖ್ಯಸ್ಥ ಭಾನುವಾರ ಪ್ರಧಾನಿ ಮೋದಿಗೆ ವಿವರಣೆ ನೀಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ವಾಯುಪಡೆಯು ಅಲರ್ಟ್ ಆಗಿದೆ ಎಂದು ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಭಾನುವಾರ ನಡೆದ ಸಭೆಯಲ್ಲಿ ಪ್ರಧಾನಿಗೆ ತಿಳಿಸಿದರು. ಪಶ್ಚಿಮ ಗಡಿಯಲ್ಲಿ ನಮ್ಮ ರಕ್ಷಣಾ ಜಾಲವು ಸಂಪೂರ್ಣವಾಗಿ ಸಕ್ರಿಯವಾಗಿದೆ ಮತ್ತು ರಫೇಲ್ನಂತಹ ಯುದ್ಧ ವಿಮಾನಗಳು ಸಹ ಸಿದ್ಧವಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇದರ ನಡುವೆ, ಸೋಮವಾರ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಪತ್ತೆಹಚ್ಚಿವೆ. ಇಲ್ಲಿ 5 ಐಇಡಿಗಳು, ವೈರ್ಲೆಸ್ ಸೆಟ್ಗಳು ಮತ್ತು ಕೆಲವು ಬಟ್ಟೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪೂಂಚ್ನ ಸುರನ್ಕೋಟ್ನ ಮರ್ಹೋಟ್ ಗ್ರಾಮದಲ್ಲಿ ಈ ಅಡಗುತಾಣ ಪತ್ತೆಯಾಗಿದೆ. ಇದು ಭಯೋತ್ಪಾದಕರ ಅಡಗುತಾಣ ಎಂದು ಭದ್ರತಾ ಪಡೆಗಳು ಹೇಳಿವೆ.
ಇದರ ಬೆನ್ನಲ್ಲಿಯೇ, ಶ್ರೀನಗರ ಕೇಂದ್ರ ಜೈಲು ಮತ್ತು ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ದಾಳಿಗಳಿಗೆ ಸಹಾಯ ಮಾಡುವ ಅನೇಕ ಭಯೋತ್ಪಾದಕರನ್ನು ಈ ಜೈಲುಗಳಲ್ಲಿ ಇರಿಸಲಾಗಿದೆ. ಗುಪ್ತಚರ ಎಚ್ಚರಿಕೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನೊಂದೆಡೆ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಚೆನಾಬ್ ನದಿಗೆ ನಿರ್ಮಿಸಲಾದ ಬಾಗ್ಲಿಹಾರ್ ಮತ್ತು ಸಲಾಲ್ ಅಣೆಕಟ್ಟುಗಳ ದ್ವಾರಗಳನ್ನು ಮುಚ್ಚಿದೆ. ಈ ಅಣೆಕಟ್ಟುಗಳಿಂದ ನೀರು ಪಾಕಿಸ್ತಾನಕ್ಕೆ ಹೋಗುತ್ತಿತ್ತು. ಪಹಲ್ಗಾಮ್ ದಾಳಿಯ ನಂತರ ಭಾರತ ಸಿಂಧೂ ನದಿ ಜಲ ಒಪ್ಪಂದವನ್ನು ರದ್ದುಗೊಳಿಸಿದೆ, ಇದರಿಂದಾಗಿ ಪಾಕಿಸ್ತಾನ ಸರ್ಕಾರ ಅಸಮಾಧಾನಗೊಂಡಿದೆ.
ಚೆನಾಬ್ಗೆ ನಿರ್ಮಿಸಲಾದ 2 ಅಣೆಕಟ್ಟುಗಳ ನೀರೂ ಕೂಡ ಸ್ಟಾಪ್: ಸೋಮವಾರ, ರಿಯಾಸಿ ಜಿಲ್ಲೆಯ ಸಲಾಲ್ ಅಣೆಕಟ್ಟಿನ ದ್ವಾರಗಳನ್ನು ಮುಚ್ಚಲಾಯಿತು. ಅದೇ ಸಮಯದಲ್ಲಿ, ಈಗ ಕಾಶ್ಮೀರದ ಕಿಶನ್ಗಂಗಾ ಅಣೆಕಟ್ಟಿನ ಮೂಲಕ ಝೀಲಂ ನದಿಯ ನೀರನ್ನು ನಿಲ್ಲಿಸುವ ಯೋಜನೆ ಇದೆ.
ರಕ್ಷಣಾ ಕಾರ್ಯದರ್ಶಿ ಜೊತೆ ಮೋದಿ ಮೀಟಿಂಗ್: ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಪ್ರಧಾನಿ ಮೋದಿ ಅವರನ್ನು ಪ್ರಧಾನಿ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಇದಕ್ಕೂ ಮೊದಲು, ವಾಯುಪಡೆಯ ಮುಖ್ಯಸ್ಥರು ಭಾನುವಾರ ಮತ್ತು ನೌಕಾಪಡೆಯ ಮುಖ್ಯಸ್ಥರು ಶನಿವಾರ ಪ್ರಧಾನಿ ಅವರನ್ನು ಭೇಟಿಯಾಗಿದ್ದರು.
ಸತತ 11ನೇ ದಿನ ಕದನವಿರಾಮ ಉಲ್ಲಂಘಿಸಿದ ಪಾಕ್:ಪಾಕಿಸ್ತಾನ ಸತತ 11 ನೇ ದಿನವೂ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನ ಸೇನೆಯು ಮೇ 4-5 ರ ರಾತ್ರಿ ಕುಪ್ವಾರಾ, ಬಾರಾಮುಲ್ಲಾ, ಪೂಂಚ್, ರಾಜೌರಿ, ಮೆಂಧರ್, ನೌಶೇರಾ, ಸುಂದರ್ಬಾನಿ ಮತ್ತು ಅಖ್ನೂರ್ ಪ್ರದೇಶಗಳಲ್ಲಿ ಎಲ್ಒಸಿ ಮೇಲೆ ಗುಂಡು ಹಾರಿಸಿತು. ಭಾರತೀಯ ಸೇನೆಯು ಪ್ರತ್ಯುತ್ತರ ನೀಡಿ ಲಘು ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿತು.
ಯುಎನ್ಎಸ್ಸಿಯಲ್ಲಿ ಸಭೆ: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಕುರಿತು ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಮಹತ್ವದ ಸಭೆ ನಡೆಯಲಿದೆ. ಇದರಲ್ಲಿ ಎರಡೂ ದೇಶಗಳು ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ನಿಲುವನ್ನು ಮಂಡಿಸಲಿವೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದ ಆಕ್ರಮಣಕಾರಿ ಕ್ರಮಗಳು, ಪ್ರಚೋದನೆ ಮತ್ತು ಪ್ರಚೋದನಕಾರಿ ಹೇಳಿಕೆಗಳ ಜೊತೆಗೆ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವ ಬಗ್ಗೆ ಪಾಕಿಸ್ತಾನವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಲಿದೆ.
ಪಾಕಿಸ್ತಾನ ಸಂಸತ್ತಿನ ವಿಶೇಷ ಅಧಿವೇಶನ: ಭಾರತದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸೋಮವಾರ ರಾಷ್ಟ್ರೀಯ ಅಸೆಂಬ್ಲಿಯ (ಸಂಸತ್ತು) ವಿಶೇಷ ಅಧಿವೇಶನ ಕರೆದಿದ್ದಾರೆ. ಸಂಜೆ 5 ಗಂಟೆಗೆ ನಿಗದಿಯಾಗಿರುವ ಈ ಅಧಿವೇಶನದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚೆ ಆಗಲಿದೆ. ಮಾಧ್ಯಮ ವರದಿಗಳ ಪ್ರಕಾರ, ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಭಾರತ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಮಂಡಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ