
ನವದೆಹಲಿ (ಮೇ.12): ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿಯಲ್ಲಿ ಭಾರತೀಯ ಸೇನೆಯ ಮಹತ್ವದ ಜಯದಲ್ಲಿ ಬೆಂಗಳೂರಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೂಡಾ ಮಹತ್ವದ ಪಾತ್ರ ವಹಿಸಿದೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಸೇನೆಯ ಪ್ರಮುಖ ಘಟಕ, ಉಗ್ರರ ಲಾಂಚ್ಪ್ಯಾಡ್ಗಳ ಬಗ್ಗೆ ನಿಖರ ಚಿತ್ರದ ಮೂಲಕ ಮಾಹಿತಿ ನೀಡಿದ್ದೇ ದೇಶದ ಅತ್ಯುನ್ನತ ಬಾಹ್ಯಾಕಾಶ ಸಂಸ್ಥೆ ಇಸ್ರೋ. ದಾಳಿಗೂ ಮುನ್ನ, ದಾಳಿಯ ವೇಳೆ ಮತ್ತು ದಾಳಿಯ ಬಳಿಕ ದಿನದ 24 ಗಂಟೆಗಳ ಕಾಲವೂ ಸತತವಾಗಿ ಪಾಕಿಸ್ತಾನದ ಮೇಲೆ ನಿಗಾ ಇಟ್ಟು, ಭಾರತೀಯ ಸೇನೆಗೆ ಅತ್ಯಮೂಲ್ಯ ಮಾಹಿತಿಯನ್ನು ನೀಡಿದೆ.
ಆಗಸದಿಂದ ಕಣ್ಣು: ಪಾಕ್ ಮೇಲೆ ದಾಳಿಗೆ ನಿರ್ಧರಿಸುತ್ತಲೇ ಭಾರತೀಯ ಸೇನೆ ಇಸ್ರೋದ ನೆರವು ಕೋರಿತ್ತು. ಅದರಂತೆ ಪಾಕಿಸ್ತಾನದ ಸೇನಾ ನೆಲೆಗಳು, ಉಗ್ರರ ನೆಲೆಗಳು, ಉಗ್ರರ ಲಾಂಚ್ಪ್ಯಾಡ್ಗಳ ಅತ್ಯಂತ ಸ್ಪಷ್ಟ ಫೋಟೋಗಳನ್ನು ಇಸ್ರೋ ಸೆರೆಹಿಡಿದು ಸೇನೆಗೆ ನೀಡಿತ್ತು. ಇದು ಸೇನೆಯು, ಯಾವ ಸ್ಥಳಗಳ ಮೇಲೆ ದಾಳಿ ಮಾಡಬೇಕೆಂದು ನಿರ್ಧರಿಸಿ ನಿಖರವಾಗಿ ಆ ಸ್ಥಳಗಳ ಮೇಲೆ ದಾಳಿ ನಡೆಸಲು ಅನುವು ಮಾಡಿಕೊಟ್ಟಿತು.
ಇಸ್ರೋದ ಉಪಗ್ರಹಗಳು 0.6 ಮೀ ನಿಂದ 0.35 ಮೀ. ರವರೆಗಿನ ಸ್ಪಷ್ಟತೆಯೊಂದಿಗೆ ಸೇನಾ ನೆಲೆ ಮತ್ತು ಭಯೋತ್ಪಾದಕ ಅಡಗುತಾಣದ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆ ಹಿಡಿದಿತ್ತು. ಅಲ್ಲದೆ ಮಿಲಿಟರಿ ನೆಲೆಗಳು, ಶಸ್ತ್ರಾಸ್ತ್ರ ಡಿಪೋಗಳು, ರಾಡಾರ್ ಕೇಂದ್ರಗಳು ಮತ್ತು ಪಾಕಿಸ್ತಾನಿ ಪಡೆಗಳ ಯುದ್ಧತಂತ್ರದ ಚಲನವಲನಗಳ ಮೇಲೆ ಕಣ್ಗಾವಲಿಟ್ಟಿತ್ತು. ಈ ಉಪಗ್ರಹಗಳು ಶತ್ರುಗಳ ಚಲನವಲನಗಳನ್ನು ಪತ್ತೆಹಚ್ಚುವ ಮೂಲಕ ಸೇನೆಗೆ ನಿಖರವಾದ ಗುಪ್ತಚರ ಮಾಹಿತಿಯನ್ನು ಒದಗಿಸಿ ಮಿಲಿಟರಿ ಕಾರ್ಯಾಚರಣೆಗಳಿಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು .
ಭಾರತಕ್ಕೆ ಮತ್ತಷ್ಟು ಬ್ರಹ್ಮೋಸ್ ಬಲ: ಉತ್ಪಾದನಾ ಘಟಕಕ್ಕೆ ರಾಜನಾಥ್ ಚಾಲನೆ
ಇಸ್ರೋ ಸಂಗ್ರಹಿಸಿದ ಈ ಮಾಹಿತಿಗಳು ಭಾರತದ ಕಾರ್ಯಾಚರಣೆಯಲ್ಲಿ ಶತ್ರುಗಳನ್ನು ಎದುರಿಸಲು, ರಾಡಾರ್ ಹಿಮ್ಮೆಟ್ಟಿಸಲು ಮತ್ತು ಪಾಕಿಸ್ತಾನ ಉಡಾಯಿಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ತಟಸ್ಥಗೊಳಿಸಲು ನೆರವಾದವು. ಮಾತ್ರವಲ್ಲದೇ ಇಸ್ರೋ ಉಪಗ್ರಹಗಳು ನೈಜ ಸಮಯದ ಚಿತ್ರಗಳು ಮತ್ತು ವಿಡಿಯೋ ತುಣುಕನ್ನು ಒದಗಿಸುವ ಮೂಲಕ ಗಡಿ ಪ್ರದೇಶದಲ್ಲಿ ಪಾಕ್ನ ಸಂಭಾವ್ಯ ದಾಳಿ ತಡೆಯಲು ಮತ್ತು ಭದ್ರತಾ ಸಂಸ್ಥೆಗಳು ತ್ವರಿತ ಕ್ರಮ ಕೈಗೊಳ್ಳಲು ಅನುಕೂಲ ಮಾಡಿಕೊಟ್ಟಿತ್ತು ಎಂದು ಮೂಲಗಳು ತಿಳಿಸಿವೆ.
ಭಾರತ-ಪಾಕ್ ಯುದ್ಧ ಹಿನ್ನೆಲೆ ಏನು?:
ಏಪ್ರಿಲ್ 22, 2025ರಂದು ಭಾರತದ ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಹಿಂದೂಗಳನ್ನು ಧರ್ಮ ಕೇಳಿ ಬಲಿ ಪಡೆದಿದ್ದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರದ ಮೂಲಕ ಮೇ 7, 2025ರಂದು ತಕ್ಕ ಪಾಠ ಕಲಿಸಿತ್ತು. ನಾಗರಿಕರ ಪ್ರಾಣಕ್ಕೆ ಕುತ್ತಾಗದಂತೆ ಪಾಕ್ ಉಗ್ರರ ಅಡಗು ತಾಣಗಳ ಮೇಲೆ ಭಾರತ ದಾಳಿ ನಡೆಸಿ, 9 ಉಗ್ರ ತಾಣಗಳನ್ನು ನಾಶ ಪಡಿಸಿದೆ. ಅಷ್ಟೇ ಅಲ್ಲ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಕ.ಸೋಫಿಯಾ ಖುರೇಷಿ ಮೂಲಕ ಭಾರತೀಯ ಮಹಿಳೆಯ ಸಿಂಧೂರ ಕಿತ್ತು ಕೊಂಡಿದ್ದಕ್ಕೆ ತೆಗೆದುಕೊಂಡ ಕ್ರಮಕ್ಕೆ ಇಡೀ ಜಗತ್ತಿಗೆ ಮಹಿಳೆಯರ ನೇತೃತ್ವದಲ್ಲಿಯೇ ಸಾರಿ ಸಾರಿ ಹೇಳಿದೆ. ಇಡೀ ಜಗತ್ತಿಗೆ ಈ ಮಹಿಳಾ ನಾಯಕರಿಂದಲೇ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದು, ದೇಶದ ನಾರಿ ಶಕ್ತಿ ಸಾಮರ್ಥ್ಯವನ್ನು ಸಾರಿ ಸಾರಿ ಹೇಳಿದಂತಾಗಿದೆ. ಅಷ್ಟೇ ಅಲ್ಲ ಹಿಂದೂ ಎನ್ನುವ ಕಾರಣಕ್ಕೆ 26 ಅಮಾಯಕಕನ್ನು ಬಲಿ ಪಡೆದಿದ್ದಕ್ಕೆ ಪ್ರತೀಕಾರವಾಗಿ ಹಿಂದು-ಮುಸ್ಲಿಂ ಜಂಟಿಯಾಗಿಯೇ ನಡೆದ ಕಾರ್ಯಾಚರಣೆ ಬಗ್ಗೆ ಪತ್ರಿಕಾ ಗೋಷ್ಠಿ ನಡೆಯಿಸಿ, ದೇಶದ ಭದ್ರತಾ ವಿಷಯವಾಗಿ ಭಾರತದಲ್ಲಿ ಮಹಿಳೆಯರೊಡಗೂಡಿ ಹಿಂದೂ-ಮುಸ್ಲಿಂ ಎಂದೆಂದಿಗೂ ಒಂದೇ ಎಂದು ಜಗತ್ತಿಗೆ ಸಾರಿ ಹೇಳಿದ ಭಾರತದ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಭಾರತ ಅಳವಡಿಸಿಕೊಂಡಿರುವ ರಷ್ಯಾದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ಸ್ ಪಾಕಿಸ್ತಾನದ ಪಾಲಿಗೆ ದುಸ್ವಪ್ನವಾಗಿದೆ. ಭಾರತದ 15 ನಗರಗಳ ಮಿಲಿಟರಿ ಮತ್ತು ರೇಡಾರ್ ವ್ಯವಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಪಾಕ್ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದರೂ ಅವುಗಳನ್ನೆಲ್ಲ ಆಗಸದಲ್ಲೇ ಕರಾರುವಕ್ಕಾಗಿ ಹೊಡೆದುರುಳಿಸುವಲ್ಲಿ ಈ ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿದೆ. ಇದು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿದೆ. 'ಸುದರ್ಶನ ಚಕ್ರ' ಎಂದೇ ಕರೆಯಲ್ಪಡುವ ಈ ಏರ್ ಡಿಫೆನ್ಸ್ ಸಿಸ್ಟಮ್ ಭಾರತದ ಪಾಲಿನ ರಕ್ಷಾ ಕವಚವಾಗಿದೆ. ವಿಶ್ವದಲ್ಲೇ ಅತ್ಯಾಧುನಿಕ ಎನ್ನಲಾದ ಈ ರಕ್ಷಣಾ ವ್ಯವಸ್ಥೆ 600 ಕಿ.ಮೀ.ದೂರದಿಂದಲೇ ತನ್ನನ್ನ ಬರುವ ಗುರಿಯನ್ನು ಗುರುತಿಸಿ, 400 ಕಿ.ಮೀ.ದ ದೂರದಲ್ಲೇ ಅವುಗಳನ್ನು ಹೊಡೆದುರುಳಿಸಬಲ್ಲದು. ಭಾರತ ಇಂಥ ನಾಲ್ಕು ಎಸ್-400 ಡಿಫೆನ್ಸ್ ಸಿಸ್ಟಮ್ ಅನ್ನು ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ನ ರಕ್ಷಣೆಗಾಗಿ ನಿಯೋಜಿಸಿದೆ.
ಭಾರತ-ಫಾಕಿಸ್ತಾನ ಸಂಘರ್ಷದ ಪ್ರತಿ ಕ್ಷಣದ ಮಾಹಿತಿಗಾಗಿ ಸುವರ್ಣ ನ್ಯೂಸ್ಗೆ ಟ್ಯೂನ್ ಆಗಿರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ