ಕೊರೋನಾ ವೈರಸ್ ಹಾಗೂ ಲಾಕ್ಡೌನ್ ವೇಳೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಕಳೆದೆರಡು ತಿಂಗಳಿನಿಂದ ಭಾರತೀಯ ಸೇನೆ ನಿರಂತರವಾಗಿ ಉಗ್ರರ ಜೊತೆ ಹೋರಾಟ ಮಾಡುತ್ತಲೇ ಇದೆ. ಇದೀಗ ಸತತ 2 ದಿನದ ಗುಂಡಿನ ಚಕಮಕಿಯಲ್ಲಿ 9 ಉಗ್ರರನ್ನು ಹೊಡೆದುರುಳಿಸಿದೆ.
ಶೋಪಿಯಾನ್(ಜೂ.08): ಜಮ್ಮ ಕಾಶ್ಮೀರದಲ್ಲಿ ಬಹುದೊಡ್ಡ ಸ್ಫೋಟಕ್ಕೆ ಸಜ್ಜಾಗಿದ್ದ ಹಿಜ್ಬುಲ್ ಮುಜಾಹೀದ್ದಿನ್ ಸಂಘಟನೆಯ 9 ಉಗ್ರರನ್ನು ಭಾರತೀಯ ಸೇನೆ ಗುಂಡಿಕ್ಕಿ ಹತ್ಯೆ ಮಾಡಿದೆ. ಇದರಲ್ಲಿ ಹಿಜ್ಬುಲ್ ಮುಜಾಹೀದ್ದಿನ್ ಇಬ್ಬರು ಕಮಾಂಡರ್ಗಳೂ ಸೇರಿದ್ದಾರೆ. ಜಮ್ಮ-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಪಿನ್ಜೋರ ವಲಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರ ಅಡಗುತಾಣವನ್ನು ಪುಡಿ ಪುಡಿ ಮಾಡಲಾಗಿದೆ.
ಕಾಶ್ಮೀರದಲ್ಲಿ ಪಾಕ್ನ 3 ಉಗ್ರಗಾಮಿಗಳ ಹತ್ಯೆ!
ಭಾನುವಾರ(ಜೂ.07) ಹಾಗೂ ಸೋಮವಾರ(ಜೂ.08) ಎರಡು ದಿನ ಭಾರತೀಯ ಸೇನೆ ಖಚಿತ ಮಾಹಿತಿ ಮೇರೆಗೆ ಪಿನ್ಜೋರ ವಲಯದಲ್ಲಿ ಸರ್ಚ್ ಆಪರೇಶನ್ ನಡೆಸಿತ್ತು. ಭಾರತೀಯ ಸೇನೆ ಹಾಗೂ ಸಿಎಆರ್ಪಿಎಫ್ ಜಂಟಿಯಾಗಿ ಕಾರ್ಯಚರಣೆ ನಡೆಸಿತ್ತು. ಈ ವೇಳೆ ಅಡಗಿದ್ದ ಉಗ್ರರು ಸೇನೆ ಮೇಲೆ ಗುಂಡಿನ ಸುರಿಮಳೈಗೆದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸೇನೆ ಅಷ್ಟೇ ಖಾರವಾಗಿ ತಿರುಗೇಟು ನೀಡಿತು.
ಮುಂಬೈನಲ್ಲಿ ಪಾಕಿಸ್ತಾನ ISI ಗೂಡಚರ್ಯನ ಬಂಧನ; ತಪ್ಪಿತು ಭಾರಿ ಅನಾಹುತ!
ಭಾನುವಾರ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ ಸೇನೆ, ನಿರಂತರವಾಗಿ ಕೂಂಬಿಂಗ್ ಆಪರೇಶನ್ ಮುಂದುವರಿಸಿತ್ತು. ಸೋಮವಾರ ಬೆಳಗ್ಗೆ ಮತ್ತೆ ಐವರು ಉಗ್ರರನ್ನು ಸೇನೆ ಹೊಡೆದುರುಳಿಸಿತು. ಇದೀಗ ಶೋಪಿಯಾನ್ ಜಿಲ್ಲೆಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಇಷ್ಟೇ ಅಲ್ಲ ಯಾರೂ ಕೂಡ ಮನೆಯಿಂದ ಹೊರ ಬರಬೇಡಿ ಎಂದು ಸೇನೆ ಸೂಚನೆ ನೀಡಿದೆ.