ಗಣರಾಜ್ಯೋತ್ಸವ ಪರೇಡ್‌ಗೆ ಸೆಂಟ್ರಲ್‌ ವಿಸ್ತಾ ಯೋಜನೆಯ ಕಾರ್ಮಿಕರಿಗೆ ಆಹ್ವಾನ: ಪ್ರಧಾನಿ ಮೋದಿ!

By Santosh NaikFirst Published Sep 8, 2022, 8:16 PM IST
Highlights

ದೇಶದಲ್ಲಿ ವಸಹಾತುಶಾಹಿಯ ಕುರುಹುಗಳನ್ನು ಸಂಪೂರ್ಣವಾಗಿ ಹೊರಹಾಕುವ ಇರಾದೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಪೂರ್ಣವಾಗಿ ನವೀಕೃತಗೊಂಡ ಸೆಂಟ್ರಲ್‌ ವಿಸ್ತಾ ಅವೆನ್ಯೂವನ್ನು ಅನಾವರಣ ಮಾಡಿದರು. ಅದಲ್ಲದೆ, ರಾಜಪಥವನ್ನು ಈ ವೇಳೆ ಕರ್ತವ್ಯಪಥ ಎನ್ನುವ ಹೆಸರಲ್ಲಿ ಮರುನಾಮಕರಣ ಮಾಡಲಾಗಿದ್ದು, ಇಂಡಿಯಾ ಗೇಟ್‌ನ ಬಳಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಿದರು. ನವದೆಹಲಿ ಮಹಾನಗರ ಪಾಲಿಕೆ ಕೂಡ ರಾಜಪಥದ ಮರುನಾಮಕರಣಕ್ಕೆ ಒಪ್ಪಿಗೆ ಸೂಚಿಸಿದೆ. ಇಂಡಿಯಾ ಗೇಟ್‌ನಿಂದ ರಾಷ್ಟ್ರಪತಿ ಭವನಕ್ಕೆ 3.20 ಕಿಲೋಮೀಟರ್‌ ದೂರದ ದಾರಿಯನ್ನು ಇನ್ನು ಕರ್ತವ್ಯಪಥ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

ನವದೆಹಲಿ (ಸೆ. 8): ದೇಶದ ಅಭಿವೃದ್ಧಿಯ ಸಂಕೇತ ಎನ್ನುವಂತೆ ಸಂಪೂರ್ಣವಾಗಿ ನವೀಕರಣಗೊಂಡಿರುವ ಸೆಂಟ್ರಲ್‌ ವಿಸ್ತಾ ಅವೆನ್ಯೂವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅನಾವರಣ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಮ್ಮ ಬೆಂಗಾಲವಲು ಪಡೆಯೊಂದಿಗೆ ಸೆಂಟ್ರಲ್‌ ವಿಸ್ತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರ್ತವ್ಯ ಪಥವನ್ನು ತಲುಪಿತ್ತು. ಅವರೊಂದಿಗೆ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್, ಗಜೇಂದ್ರ ಚೌಹಾಣ್, ಪ್ರಧಾನಿ ಆರ್ಥಿಕ ಮಂಡಳಿ ಸದಸ್ಯ ಕೆ ಸಂಜೀವ್ ಸನ್ಯಾಲ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿದ್ದರು. ಆರಂಭದಲ್ಲಿ ನೇತಾಜಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ನಂತರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ದೇಶದ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿಗೆ ಗೌರವ ಸಲ್ಲಿಸಿದರು. ಇಂಡಿಯಾ ಗೇಟ್‌ನಲ್ಲಿ ನಿರ್ಮಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಈ ಪ್ರತಿಮೆ 28 ಅಡಿ ಎತ್ತರವಿದೆ. ಪ್ರತಿಮೆಯನ್ನು ಗ್ರಾನೈಟ್ ಕಲ್ಲಿನ ಮೇಲೆ ನಿರ್ಮಿಸಲಾಗಿದೆ. ನೇತಾಜಿಯವರ ಹೊಲೊಗ್ರಾಮ್ ಪ್ರತಿಮೆಯನ್ನು ಜನವರಿ 23 ರಂದು ಪರಾಕ್ರಮ ದಿನದಂದು ಅನಾವರಣಗೊಳಿಸಲಾಯಿತು. ಈ ಎರಡೂ ನಿರ್ಮಾಣ ಕಾರ್ಯಗಳು ಸೆಂಟ್ರಲ್‌ ವಿಸ್ತಾ ಮರು-ಅಭಿವೃದ್ಧಿ ಯೋಜನೆಯ ಭಾಗವಾಗಿದೆ.

ನೇತಾಜಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ, ಪ್ರಧಾನಿ ಮೋದಿ ಅವರು ಹೊಸ ಸೆಂಟ್ರಲ್ ವಿಸ್ಟಾ ಅವೆನ್ಯೂದಲ್ಲಿನ ವಸ್ತು ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ, ಅವರು ಜನವರಿ 26 ರಂದು ಗಣರಾಜ್ಯೋತ್ಸವ ಪರೇಡ್‌ಗೆ ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆಯಲ್ಲಿ ಕೆಲಸ ಮಾಡುವ ಎಲ್ಲ ಜನರನ್ನು ಆಹ್ವಾನಿಸುವುದಾಗಿ ಘೋಷಣೆ ಮಾಡಿದರು. ಇದೇ ವೇಳೆ ಸೆಂಟ್ರಲ್‌ ವಿಸ್ತಾ ಯೋಜನೆಯಲ್ಲಿ ಶ್ರಮವಹಿಸಿದ್ದ ಕಾರ್ಮಿಕರ ಜೊತೆ ಮಾತನಾಡಿದರು. ಜನವರಿ 26ರ ಗಣರಾಜ್ಯೋತ್ಸವ ಪರೇಡ್‌ಗೆ ಶ್ರಮಜೀವಿಗಳನ್ನು ಆಹ್ವಾನಿಸುವುದು ಹೆಮ್ಮೆಯ ವಿಚಾರ ಎಂದು ಪ್ರಧಾನಿ ಈ ವೇಳೆ ಹೇಳಿದರು.
 

| PM Modi interacts with workers who were involved in the redevelopment project of Central Vista in Delhi

PM Modi told 'Shramjeevis' that he will invite all of them who worked on the redevelopment project of Central Vista for the 26th January Republic Day parade pic.twitter.com/O4eNAmK7x9

— ANI (@ANI)

ವಸಾಹತುಶಾಹಿ ಕಹಿ ನೆನಪು ಅಳಿಸಲು Rajpathಗೆ ಇನ್ನು ‘ಕರ್ತವ್ಯಪಥ’ ಎಂದು ಮರುನಾಮಕರಣ..!

ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಕಾರ್ಯಕ್ರಮದ ವೇಳೆ ಹೇಳಿದ್ದಾರೆ. ನಾವು ಏಕತೆ ಮತ್ತು ಒಗ್ಗಟ್ಟಿನಿಂದ ಬದುಕಬೇಕು ಮತ್ತು ಪ್ರತಿಯೊಬ್ಬ ನಾಗರಿಕನು ತನ್ನ ಕರ್ತವ್ಯವನ್ನು ನಿರ್ವಹಿಸಬೇಕು. 130 ಕೋಟಿ ಭಾರತೀಯರ ಕನಸನ್ನು ನನಸು ಮಾಡಲು ಇಂದು ನಮ್ಮ ಮುಂದೆ ಭವ್ಯವಾದ ಹಾದಿ ತೆರೆದುಕೊಳ್ಳುತ್ತಿರುವಂತೆ ತೋರುತ್ತಿದೆ ಎಂದು ಹರ್ದೀಪ್ ಸಿಂಗ್ ಪುರಿ ಕರ್ತವ್ಯದ ಪಥದ ಬಗ್ಗೆ ಹೇಳಿದರು.

ಸೆಂಟ್ರಲ್‌ ವಿಸ್ತಾ ಯೋಜನೆಯಿಂದ ಕರ್ತವ್ಯ ಪಥದಲ್ಲಿ ಆಗಿರುವ ಬದಲಾವಣೆಯ ನೋಟ!

ಕರ್ತವ್ಯ ಪಥ ಎನ್ನುವ ಹೆಸರೇ ಏಕೆ: ಈ ಮಾರ್ಗಕ್ಕೆ ಕರ್ತವ್ಯಪಥ (Kartavya Path) ಎನ್ನುವ ಹೆಸರೇ ಏಕೆ ಎನ್ನುವ ಬಗ್ಗೆಯೂ ಪ್ರಧಾನಿ ಮಾತನಾಡಿದ್ದಾರೆ. ಇದು ಬರೀ ಇಟ್ಟಿಗೆ ಹಾಗೂ ಕಲ್ಲುಗಳಿಂದಾದ ಮಾರ್ಗವಲ್ಲ ಎನ್ನುವುದು ಎಲ್ಲರೂ ಅರಿಯಬೇಕು. ಭಾರತ ಎನ್ನುವ ದೇಶದ ಪ್ರಜಾಪ್ರಭುತ್ವದ ಮಾರ್ಗ, ಇಷ್ಟು ವರ್ಷಗಳ ಕಾಲ ಸಿದ್ಧಾಂತಕ್ಕಾಗಿ ನಿಂತ ದೇಶದ ಪಥ. ಇಂಡಿಯಾ ಗೇಟ್‌ನ ಬಳಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಪ್ರತಿಮೆ ಅಥವಾ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನೋಡಲು ದೇಶದ ಜನ ಬರುತ್ತಾರೆ. ಇವೆಲ್ಲವೂ ಅವರಿಗೆ ಯಾವ ರೀತಿಯ ಸ್ಫೂರ್ತಿ ನೀಡುತ್ತದೆ ಎಂದರೆ, ದೇಶಕ್ಕಾಗಿ ಅವರ ಕರ್ತವ್ಯವನ್ನು ನೆನಪಿಸುತ್ತದೆ. ಅದಕ್ಕಾಗಿಯೇ ಈ  (Central Vista)ಹೆಸರನ್ನು ಇಡಲಾಗಿದೆ ಎಂದು ಪ್ರಧಾನಿ  (Pm Narendra Modi) ಹೇಳಿದರು.

ರಾಜಪಥ (Rajpath) ಎನ್ನುವುದು ಬ್ರಿಟಿಷರಿಗಾಗಿ ಇತ್ತು. ಅವರಿಗೆ ಭಾರತೀಯರು ಗುಲಾಮರಾಗಿದ್ದರು. ರಾಜಪಥ ಎನ್ನುವ ಹೆಸರೇ, ಗುಲಾಮಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಾಗಿದೆ. ಅದಲ್ಲದೆ, ಇದರ ನಿರ್ಮಾಣ ಕೂಡ ಗುಲಾಮಗಿರಿಯ ರೀತಿಯಲ್ಲೇ ಆಗಿತ್ತು. ಇಂದು ಅದರ ವಾಸ್ತುಶಿಲ್ಪವೂ ಬದಲಾಗಿದೆ ಮತ್ತು ಅದರ ಚೈತನ್ಯವೂ ಬದಲಾಗಿದೆ. ಇಂದಿನ ಈ ಸಂದರ್ಭದಲ್ಲಿ, ಕರ್ತವ್ಯದ ಹಾದಿಯನ್ನು ಮಾತ್ರ ಮಾಡದೆ, ತಮ್ಮ ದುಡಿಮೆಯ ಪರಾಕಾಷ್ಠೆಯ ಮೂಲಕ ದೇಶಕ್ಕೆ ಕರ್ತವ್ಯದ ಹಾದಿಯನ್ನು ತೋರಿಸಿದ ಕಾರ್ಮಿಕ ಸಹೋದ್ಯೋಗಿಗಳಿಗೆ ನಾನು ವಿಶೇಷ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ಹೇಳಿದರು.

click me!