
ನವದೆಹಲಿ (ಡಿ.28): 1991ರಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಮಾಡಿದ ಒಂದು ಕರೆಯು ವಿತ್ತ ತಜ್ಞನಾಗಿದ್ದ ಡಾ। ಮನಮೋಹನ ಸಿಂಗ್ ಅವರನ್ನು ರಾಜಕೀಯಕ್ಕೆ ಕರೆತಂದಿತು ಎಂಬುದು ಕುತೂಹಲದ ವಿಷಯ. ಸಿಂಗ್ ನೆದರ್ಲೆಂಡ್ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿ ರಾತ್ರಿ ಮಲಗಿದ್ದರು. ಆಗ ಪಿವಿಎನ್ ಅವರ ಸೂಚನೆ ಮೇರೆಗೆ 1991ರಲ್ಲಿ ರಾವ್ ಅವರ ಮುಖ್ಯ ಕಾರ್ಯದರ್ಶಿ ಆಗಿದ್ದ ಪಿ.ಸಿ. ಅಲೆಕ್ಸಾಂಡರ್ ಅವರು ಡಾ। ಸಿಂಗ್ಗೆ ಕರೆ ಮಾಡಿ, ‘ನೀವು ದೇಶದ ವಿತ್ತ ಮಂತ್ರಿ ಆಗಿರಿ’ ಎಂದರು. ಅದಕ್ಕೆ ಡಾ। ಸಿಂಗ್ ಅನುಮಾನ ಮಾಡಿದರಂತೆ. ಆಗ ಅಲೆಕ್ಸಾಂಡರ್, ‘ಒಂದು ಚಾನ್ಸ್ ತಗೊಳ್ಳಿ. ನೀವು ಯಶಸ್ವಿಯಾದರೆ ಇಬ್ಬರೂ ಶ್ರೇಯ ಪಡೆಯೋಣ. ವಿಫಲ ಆದರೆ ನಾನು ತಲೆದಂಡ ಅನುಭವಿಸುವೆ’ ಎಂದು ಚಟಾಕಿ ಹಾರಿಸಿದರು ಎಂದು ಪುದ್ತಕವೊಂದರಲ್ಲಿ ಬರೆಯಲಾಗಿದೆ.
ಸಿಂಗ್ ಸ್ಮರಣೀಯ, ಬೇಸರದ ಕ್ಷಣಗಳು!: ಅಮೆರಿಕದ ಜತೆಗಿನ ಅಣು ಒಪ್ಪಂದ ಪ್ರಧಾನಿಯಾಗಿ ಡಾ.ಮನಮೋಹನ ಸಿಂಗ್ ಅವರ ಅವಿಸ್ಮರಣೀಯ ಕ್ಷಣವಾಗಿದ್ದರೆ, ದೇಶದ ಆರೋಗ್ಯ ಕ್ಷೇತ್ರಕ್ಕೆ ಅಂದುಕೊಂಡಷ್ಟು ಕೊಡುಗೆ ನೀಡಲು ಸಾಧ್ಯವಾಗದಿದ್ದದ್ದು ಜೀವನದ ಅತ್ಯಂತ ಬೇಸರದ ಸಂಗತಿ! ಪ್ರಧಾನಿಯಾಗಿ ನಿಮ್ಮ ಜೀವನದ ಅತ್ಯಂತ ಅವಿಸ್ಮರಣೀಯ ಮತ್ತು ಬೇಸರದ ಕ್ಷಣ ಯಾವುದು ಎಂದು ಪಿಎಂ ಆಗಿದ್ದಾಗ ತಮ್ಮ ಕೊನೇ ಸುದ್ದಿಗೋಷ್ಠಿಯಲ್ಲಿ ತೂರಿಬಂದ ಪ್ರಶ್ನೆಗೆ ಡಾ.ಸಿಂಗ್ ಈ ಉತ್ತರ ನೀಡಿದ್ದರು.
2005ರಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಜತೆಗೆ ಅಣು ಒಪ್ಪಂದಕ್ಕೆ ಸಹಿಹಾಕಿದ್ದು ಅತ್ಯಂತ ಸಂತಸದ ಕ್ಷಣ. ಈ ಒಪ್ಪಂದ ದೇಶದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗೆ ಕಾರಣವಾಯಿತು ಮತ್ತು ಹಲವು ರೀತಿಯಲ್ಲಿ ದೇಶದ ತಾಂತ್ರಿಕ ಬೆಳವಣಿಗೆಗೂ ಪೂರಕವಾಯಿತು ಎಂದು ಹೇಳಿಕೊಂಡಿದ್ದಾರೆ ಸಿಂಗ್.ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ: ಮಕ್ಕಳು, ಮಹಿಳೆಯರ ಆರೋಗ್ಯ ಸೇರಿ ಒಟ್ಟಾರೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಧಾನಿಯಾಗಿ ಸಾಕಷ್ಟು ಕೊಡುಗೆ ನೀಡಬೇಕಿತ್ತು. ನಾವು ಆರಂಭಿಸಿದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಸಾಧನೆ ಪ್ರಶಂಸನೀಯವಾದರೂ ಈ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಮಾಡಬಹುದಿತ್ತು ಎಂಬ ಬೇಸರವಿದೆ ಎಂದು ಹೇಳಿಕೊಂಡಿದ್ದರು.
ಅಣು ಒಪ್ಪಂದಕ್ಕಾಗಿ ಕುರ್ಚಿ ಬಿಡಲು ಮುಂದಾಗಿ ಅಮೆರಿಕನ್ನರ ಬೆವರಿಳಿಸಿದ್ದ ಮನಮೋಹನ ಸಿಂಗ್!
ಸಂಪುಟದಲ್ಲಿ ಮನಮೋಹನ್ ವ್ಯಕ್ತಿತ್ವದ ಗುಣಗಾನ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನಕ್ಕೆ ಕೇಂದ್ರ ಕ್ಯಾಬಿನೆಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂತಾಪ ಸೂಚಿಸಲಾಗಿದ್ದು, ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ಸಂತಾಪಸೂಚಕ ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ಈ ಗೊತ್ತುವಳಿಯಲ್ಲಿ, ‘ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ರಾಷ್ಟ್ರೀಯ ಜೀವನದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಅಗಲಿಕೆಯಿಂದ ದೇಶವು ಓರ್ವ ಚಾಣಾಕ್ಷ ಆಡಳಿತಗಾರ ಹಾಗೂ ವಿಶಿಷ್ಟ ನಾಯಕನನ್ನು ಕಳೆದುಕೊಂಡಿದೆ’ ಎಂದು ಬರೆಯಲಾಗಿದೆ. ಈ ಸಂದರ್ಭದಲ್ಲಿ ಸಿಂಗ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಜ.1ರ ವರೆಗೆ ಶೋಕಾಚರಣೆ ಘೋಷಿಸಲಾಗಿದ್ದು, ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಈ ವೇಳೆ ಯಾವುದೇ ಮನರಂಜನೆ ಕಾರ್ಯಕ್ರಮ ನಡೆಯುವುದಿಲ್ಲ ಎಂದ ತೀರ್ಮಾನಿಸಲಾಯಿತು. ಅಂತೆಯೇ, ಎಲ್ಲಾ ಕೇಂದ್ರ ಸರ್ಕಾರದ ಕಚೇರಿಗಳಿಗೆ ಅರ್ಧ ದಿನದ ರಜೆ ಘೋಷಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ