ಧ್ವನಿವರ್ಧಕ ಮುಟ್ಟಿದರೆ ಯಾರೊಬ್ಬರನ್ನೂ ಬಿಡೋದಿಲ್ಲ, ಬಹಿರಂಗ ಎಚ್ಚರಿಕೆ ನೀಡಿದ ಪಿಎಫ್ಐ!

By Suvarna NewsFirst Published Apr 16, 2022, 12:49 PM IST
Highlights

ಮೇ 3 ರ ಒಳಗಾಗಿ ಮಹಾರಾಷ್ಟ್ರದ ಎಲ್ಲಾ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ, ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದರ ನಡುವೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಬಹಿರಂಗ ಎಚ್ಚರಿಕೆಯನ್ನು ನೀಡಿದೆ.

ಮುಂಬೈ (ಏ. 16): ಮಸೀದಿಗಳ ( mosque) ಮೇಲಿನ ಧ್ವನಿವರ್ಧಕಗಳನ್ನು (loudspeakers)  ತೆಗೆದುಹಾಕುವ ಸಾಹಸವನ್ನು ಮಾಡಬೇಡಿ. ಹಾಗೇನಾದರೂ ಧ್ವನಿವರ್ಧಕಗಳನ್ನು ತೆಗೆದಲ್ಲಿ ಯಾರೊಬ್ಬರನ್ನೂ ಬಿಡೋದಿಲ್ಲ ಎಂದು ಉಗ್ರ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಶುಕ್ರವಾರ ಬಹಿರಂಗ ಎಚ್ಚರಿಕೆ ನೀಡಿದೆ. ಹಲವು ರಾಜ್ಯಗಳಲ್ಲಿ ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗಳಲ್ಲಿ ಪಿಎಫ್ಐ (PFI) ಸಂಘಟನೆಯ ಪಾತ್ರ ದೊಡ್ಡದಾಗಿ ಗೋಚರಿಸಿರುವ ನಡುವೆ ಸಂಘಟನೆ ಈ ಎಚ್ಚರಿಕೆಯನ್ನು ನೀಡಿದೆ.

ಕೆಲವರಿಗೆ ಅಜಾನ್ (Azaan) ಕೇಳುವ ಬಗ್ಗೆ ಸಮಸ್ಯೆಗಳಿವೆ. ಆದರೆ, ಇದನ್ನೇ ನೆಪ ಮಾಡಿಕೊಂಡು ಧ್ವನಿವರ್ಧಕಗಳನ್ನು ಮುಟ್ಟಿದರೆ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಅವರು ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರ್ಕಾರವು ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ ಎಂಎನ್ ಎಸ್ (MNS) ಪ್ರತಿ ಮಸೀದಿಯ ಮುಂದೆ ಸ್ಪೀಕರ್‌ನಲ್ಲಿ ಹನುಮಾನ್ ಚಾಲೀಸಾವನ್ನು ನುಡಿಸುತ್ತದೆ ಎಂದು ಅವರು ಹೇಳಿದ್ದರು.

ಶುಕ್ರವಾರ ಪಿಎಫ್‌ಐನ ಮುಂಬ್ರಾ ಅಧ್ಯಕ್ಷ ಮತೀನ್ ಶೇಖಾನಿ (Abdul Mateen Sheikhani) ಮಾತನಾಡಿ, ಕೆಲವರು ಪರಿಸ್ಥಿತಿಯನ್ನು ಕದಡಲು ಬಯಸುತ್ತಾರೆ ಮತ್ತು ಯಾರಾದರೂ ಮದರಸಾಗಳು ಮತ್ತು ಧ್ವನಿವರ್ಧಕಗಳನ್ನು ಮುಟ್ಟಿದರೆ, ಸಂಘಟನೆಯು ಯಾರನ್ನೂ ಬಿಡುವುದಿಲ್ಲ. "ಕೆಲವರಿಗೆ ಆಜಾನ್‌ನಲ್ಲಿ ಸಮಸ್ಯೆಗಳಿವೆ, ಕೆಲವರಿಗೆ ನಮ್ಮ ಮಸೀದಿಗಳು ಮತ್ತು ಮದರಸಾಗಳಲ್ಲಿ ಸಮಸ್ಯೆಗಳಿವೆ. ನಾನು ಅವರಿಗೆ ಒಂದೇ ಒಂದು ಸಂದೇಶವನ್ನು ನೀಡಲು ಬಯಸುತ್ತೇನೆ. ನಮಗೆ ಶಾಂತಿ ಬೇಕು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಒಂದು ಧ್ಯೇಯವನ್ನು ಹೊಂದಿದೆ. ನಮ್ಮನ್ನು ಮುಟ್ಟಬೇಡಿ, ಮುಟ್ಟಿದರೆ ಯಾರೇ ಆಗಿರಲಿ ಅವರನ್ನು ಬಿಡೋದಿಲ್ಲ. ಮದರಸಾಗಳು ಹಾಗೂ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ಮುಟ್ಟಿದರೆ ಅಲ್ಲಿ ಪಿಎಫ್ಐ ಇರುತ್ತದೆ' ಎಂದು ಬಹಿರಂಗವಾಗಿ ಹೇಳಿದ್ದಾರೆ.

ಮುಂಬ್ರಾ ಪೊಲೀಸರು ಪಿಎಫ್‌ಐನ ಅಬ್ದುಲ್ ಮತೀನ್ ಶೇಖಾನಿ ವಿರುದ್ಧ ಐಪಿಸಿ ಸೆಕ್ಷನ್ 188 ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಸೆಕ್ಷನ್ 37(3) ಮತ್ತು 135 ರ ಅಡಿಯಲ್ಲಿ  ಅಕ್ರಮ ಸಭೆ ಹಾಗೂ ದ್ವೇಷ ಭಾಷಣದ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.

ಏಪ್ರಿಲ್ 2 ರಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಮಾವೇಶದಲ್ಲಿ ಮಾತನಾಡಿದ್ದ ರಾಜ್ ಠಾಕ್ರೆ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಹಾಕುವಂತೆ ಹೇಳಿದ್ದರು. ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ, 'ಹನುಮಾನ್ ಚಾಲೀಸಾ' ನುಡಿಸುವ ಸಲುವಾಗಿ ತಮ್ಮ ಪಕ್ಷವು ಮಸೀದಿಗಳ ಹೊರಗೆ ಧ್ವನಿವರ್ಧಕಗಳನ್ನು ಹಾಕುತ್ತದೆ ಎಂದು ಅವರು ಹೇಳಿದ್ದರು. ಥಾಣೆಯಲ್ಲಿ ನಡೆದ ಮತ್ತೊಂದು ಸಮಾವೇಶದಲ್ಲಿ ಅವರು ಮತ್ತೊಮ್ಮೆ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು. ಅವರ ಎಚ್ಚರಿಕೆಯ ನಂತರ, ಕೆಲವು ಎಂಎನ್‌ಎಸ್ ನಾಯಕರು ಧ್ವನಿವರ್ಧಕಗಳಲ್ಲಿ 'ಹನುಮಾನ್ ಚಾಲೀಸಾ' ನುಡಿಸಿದ್ದು, ರಾಜ್ಯ ಪೊಲೀಸರು ಇವರನ್ನು ತಡೆದಿದ್ದಾರೆ. ಇನ್ನೂ ಕೆಲವರನ್ನು ಬಂಧಿಸಿ ದಂಡವನ್ನೂ ವಿಧಿಸಲಾಗಿತ್ತು.

ಹಣದುಬ್ಬರ, ಬೆಲೆ ಏರಿಕೆ ಬಗ್ಗೆ ಧ್ವನಿವರ್ಧಕದಲ್ಲಿ ಮಾತನಾಡಿ: ರಾಜ್ ಠಾಕ್ರೆ ಮಾತುಗಳಿಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸರ್ಕಾರದ ಸಚಿವ ಆದಿತ್ಯ ಠಾಕ್ರೆ, "ಇದು ಪರವಾಗಿಲ್ಲ. ಧ್ವನಿವರ್ಧಕಗಳನ್ನು ತೆಗೆದುಹಾಕುವ ಬದಲು, ಏರುತ್ತಿರುವ ಹಣದುಬ್ಬರದ ಬಗ್ಗೆ ಮಾತನಾಡಲು ಒಬ್ಬರು ಅದನ್ನು ಬಳಸಬೇಕು. ನಾವು ಡೀಸೆಲ್, ಸಿಎನ್‌ಜಿ ಬೆಲೆಗಳ ಬಗ್ಗೆ ಮಾತನಾಡಬೇಕು ಮತ್ತು 60 ವರ್ಷಗಳ ಹಿಂದೆ ಹೋಗದೆ, ಕಳೆದ ಎರಡು-ಮೂರು ವರ್ಷಗಳಲ್ಲಿ ಏನಾಯಿತು ಎಂಬುದರ ಕುರಿತು ಮಾತನಾಡೋಣ' ಎಂದು ರಾಜ್ ಠಾಕ್ರೆ ಮಾತುಗಳಿಗೆ ಲೇವಡಿ ಮಾಡಿದ್ದಾರೆ.

click me!