
ನವದೆಹಲಿ(ಏ.16): ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ‘ಇ-ಸಂಜೀವಿನಿ’ ಟೆಲಿ ಮೆಡಿಸಿನ್ ಸೇವೆಗಳು ಶನಿವಾರದಿಂದ ದೇಶಾದ್ಯಂತ ಇರುವ 1 ಲಕ್ಷ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಅಭ್ಯುದಯ ಕೇಂದ್ರಗಳಿಗೆ (ಆಸ್ಪತ್ರೆಗಳಿಗೆ) ವಿಸ್ತರಣೆಯಾಗಲಿವೆ. ಈ ಮೂಲಕ ಕುಗ್ರಾಮಗಳ ರೋಗಿಗಳು ಕೂಡಾ ಇಂಥ ಆಸ್ಪತ್ರೆಗಳಿಗೆ ತೆರಳಿ ಅಥವಾ ತಮ್ಮ ಮೊಬೈಲ್, ಕಂಪ್ಯೂಟರ್ ಬಳಸಿಕೊಂಡು, ಇ- ಸಂಜೀವಿನಿಯಲ್ಲಿ ನೋಂದಾಯಿತರಾಗಿರುವ ದೇಶದ ಯಾವುದೇ ವೈದ್ಯರ ಜೊತೆ ನೇರ ಸಮಾಲೋಚನೆ ನಡೆಸಿ ತಮ್ಮ ವೈದ್ಯಕೀಯ ಅಗತ್ಯ ಪೂರೈಸಿಕೊಳ್ಳಬಹುದಾಗಿದೆ.
2019ರಲ್ಲಿ ಆರಂಭವಾಗಿದ್ದ ಈ ಸೇವೆಯನ್ನು ನಿತ್ಯ 40 ಸಾವಿರಕ್ಕೂ ಹೆಚ್ಚು ರೋಗಿಗಳು ಬಳಸಿಕೊಳ್ಳುತ್ತಿದ್ದಾರೆ. ಈ ಸೇವೆ ಬಳಸಿಕೊಳ್ಳುವಲ್ಲಿ ಹಾಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಅದರ ನಡುವೆಯೇ ಅದನ್ನು ಇದೀಗ ಇನ್ನೂ 1 ಲಕ್ಷ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸುವ ಮೂಲಕ ಕೇಂದ್ರ ಸರ್ಕಾರ ಜನರ ನೆರವಿಗೆ ಧಾವಿಸಿದೆ. ದೇಶದಲ್ಲಿ ಈಗ 1.17 ಲಕ್ಷ ಆಯುಷ್ಮಾನ್ ಭಾರತ ಆರೋಗ್ಯ ಕೇಂದ್ರಗಳಿವೆ.
ಕೇಂದ್ರ ಆರೋಗ್ಯ ಖಾತೆ ಸಚಿವ ಮನ್ಸುಖ್ ಮಾಂಡವೀಯ ಯೋಜನೆ ಜಾರಿಗೆ ಮಾಡಲಾಗಿರುವ ಸಿದ್ಧತೆಗಳನ್ನು, ಶುಕ್ರವಾರ ಎಲ್ಲಾ ರಾಜ್ಯಗಳ ಆರೊಗ್ಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸುವ ಮೂಲಕ ಪರಿಶೀಲನೆ ನಡೆಸಿದರು.
ಬಳಸುವುದು ಹೇಗೆ?
ಆಸಕ್ತರು ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ’e-Sanjeevani OPD’ಎಂಬ ಆ್ಯಪ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಅದರಲ್ಲಿ ಟೋಕನ್ ಸಿಕ್ಕ ಬಳಿಕ ತಮ್ಮ ಸಮೀಪದ ಆಯುಷ್ಮಾನ್ ಭಾರತ ಟೆಲಿಮೆಡಿಸಿನ್ ಕೇಂದ್ರದಲ್ಲಿ ತಮ್ಮ ಸರದಿ ಬರುವವರೆಗೂ ಕಾದು, ಬಳಿಕ ವೈದ್ಯರ ಜೊತೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಪಡೆಯುಬಹುದು. ಸೂಕ್ತ ಮೊಬೈಲ್ ಸೌಲಭ್ಯ ಹೊಂದಿದವರು ನೇರವಾಗಿ ತಮ್ಮ ಮೊಬೈಲ್ನಲ್ಲಿ ಇ-ಸಂಜೀವಿನಿ ಆ್ಯಪ್ ಬಳಸಿ ನೋಂದಣಿ ಮಾಡಿಸಿಕೊಂಡು, ವೈದ್ಯರ ಜತೆ ಸಮಾಲೋಚನೆ ನಡೆಸಬಹುದು.
ಏನಿದು ಯೋಜನೆ?
ಇದು ದೇಶದ ಯಾವುದೇ ವ್ಯಕ್ತಿ ದೇಶದ ಯಾವುದೇ ನೋಂದಾಯಿತ ವೈದ್ಯರ ಜೊತೆ ನೇರ ಸಮಾಲೋಚನೆ ನಡೆಸಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ. ಇದು ಪೂರ್ಣ ಉಚಿತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ