IAF Chopper Crash in TamilNadu: 2015ರ ಚೀತಾ ಹೆಲಿಕಾಪ್ಟರ್‌ ಕ್ರ್ಯಾಶ್‌ನಲ್ಲಿ ಪವಾಡಸದೃಶವಾಗಿ ಪಾರಾಗಿದ್ದ ಬಿಪಿನ್‌ ರಾವತ್!

By Suvarna NewsFirst Published Dec 8, 2021, 3:30 PM IST
Highlights

*ತಮಿಳುನಾಡಿನಲ್ಲಿ ಭಾರತೀಯ ವಾಯುಸೇನೆ ವಿಮಾನ ಪತನ
*ಸಿಡಿಎಸ್ ಜನರಲ್ ಬಿಪಿನ್ ರಾವತ್ ಆರೋಗ್ಯ ಚಿಂತಾಜನಕ
*2015ರಲ್ಲಿ  ಹೆಲಿಕಾಪ್ಟರ್‌ ಕ್ರ್ಯಾಶ್‌ ಪಾರಾಗಿದ್ದ ಬಿಪಿನ್ ರಾವತ್‌

ತಮಿಳುನಾಡು(ಡಿ. 08): ವೆಲ್ಲಿಂಗ್ಟನ್‌(ಡಿ.08): ಸಿಡಿಎಸ್ ಜನರಲ್ ಬಿಪಿನ್ ರಾವತ್ (Chief of Defence Staff, General Bipin Rawat),  ಪತ್ನಿ ಮಧುಲಿಕಾ ರಾವತ್ ಸೇರಿ ಒಟ್ಟು 9 ಮಂದಿ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್‌ (Indian Air Force helicopter Crash) ತಮಿಳುನಾಡಿನ ಕೂನೂರಿನಲ್ಲಿ (Tamil Nadu's Coonoor) ಬುಧವಾರ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆಂದು ಪ್ರಾಥಮಿಕ ವರದಿ ತಿಳಿಸಿದೆ. ದುರ್ಘಟನೆಯಲ್ಲಿ ಗಾಯಗೊಂಡವರನ್ನು ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಎಸ್‌ ಬಿಪಿನ್ ರಾವತ್ ಆರೋಗ್ಯ ಚಿಂತಾಜನಕವಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

2015ರ ಫೆಬ್ರವರಿಯಲ್ಲೂ ಕೂಡ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಸೇರಿದಂತೆ ಮೂವರು ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಚೀತಾ ಹೆಲಿಕಾಪ್ಟರ್‌ (Cheetah helicopter) ನಾಗಾಲ್ಯಾಂಡ್‌ನ ದಿಮಾಪುರ್ ಜಿಲ್ಲೆಯ ರಂಗಪಹಾರ್ ಹೆಲಿಪ್ಯಾಡ್ (Rangapahar helipad) ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಪತನಗೊಂಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಟೇಕಾಫ್‌ ಅದ ಕೆಲವೇ ಸೆಕೆಂಡ್‌ಗಳಲ್ಲಿ ನೆಲದಿಂದ ಸುಮಾರು 20 ಅಡಿ ಎತ್ತರದಲ್ಲಿ ಎಂಜಿನ್ (Engine) ಸ್ಥಗಿತಗೊಂಡಿತ್ತು. ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣ ಗಾಯಗಳಾಗಿದ್ದವು. ಈ ಅಪಘಾತದಲ್ಲಿ ಹೆಲಿಕಾಪ್ಟರ್ ತೀವ್ರ ಹಾನಿಗೊಳಗಾಗಿತ್ತು.

ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಸೇನಾ ಅಧಿಕಾರಿ ಇದ್ದರು ಆದರೆ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಕೊಹಿಮಾದ ರಕ್ಷಣಾ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಎಮ್ರಾನ್ ಮುಸಾವಿ (Emron Musavi) ತಿಳಿಸಿದ್ದರು. ಈ ಹೆಲಿಕಾಪ್ಟರ್‌ ಕ್ರ್ಯಾಶ್‌ನಲ್ಲಿ ಪವಾಡ ಸದೃಶವಾಗಿ  ಬಿಪಿನ್‌ ರಾವತ್ ಪಾರಾಗಿದ್ದರು.

ಹವಮಾನ ವೈಪರೀತ್ಯ ಹಿನ್ನೆಲೆ ಇಂಜಿನ್ ನಿಷ್ಕ್ರಿಯ?

ಈಗ ಸಿಡಿಎಸ್ ಜನರಲ್ ಬಿಪಿನ್ ರಾವತ್  ಪತ್ನಿ ಮಧುಲಿಕಾ ರಾವತ್ ಸೇರಿ ಒಟ್ಟು 9 ಮಂದಿ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್‌  ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಪತನಗೊಂಡಿದೆ. ಹವಮಾನ ವೈಪರೀತ್ಯ ಹಿನ್ನೆಲೆ ಇಂಜಿನ್ ನಿಷ್ಕ್ರಿಯಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ದುರಂತ ಎಷ್ಟು ತೀವ್ರವಾಗಿತ್ತು ಎಂದರೆ ಹೆಲಿಕಾಪ್ಟರ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಊಟಿ ಸ್ಟಾಫ್ ಕಾಲೇಜಿನಲ್ಲಿ ಸಿಡಿಎಸ್ ರಾವತ್ ಉಪನ್ಯಾಸ ಕಾರ್ಯಕ್ರಮವಿತ್ತು. ಇಲ್ಲಿಂದ ಸೂರೂರಿಗೆ ಹೋಗಿ ಅಲ್ಲಿಂದ ದೆಹಲಿಗೆ ಮರಳಬೇಕಿತ್ತು. ಸಿಡಿಎಸ್ ಜನರಲ್ ಬಿಪಿನ್ ರಾವತ್ ಕೂಡ ಹೆಲಿಕಾಪ್ಟರ್‌ನಲ್ಲಿದ್ದರು. ಯಾರನ್ನೆಲ್ಲಾ ಈವರೆಗೆ ರಕ್ಷಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹೆಲಿಕಾಪ್ಟರ್‌ನಲ್ಲಿ ಜನರಲ್ ರಾವತ್ ಕೂಡ ಇದ್ದರು ಎಂದು ಹೇಳಲಾಗುತ್ತಿದೆ.‌

ಎಂಐ-17 ಹೆಲಿಕಾಪ್ಟರ್ ಅನ್ನು ವಿವಿಐಪಿ ಚಲನೆಯಲ್ಲಿ ಬಳಸಲಾಗುತ್ತದೆ

ಸೇನಾ ಅಧಿಕಾರಿಗಳು ಹೋಗುವ ಹೆಲಿಕಾಪ್ಟರ್ ಟ್ವಿನ್ ಇಂಜಿನ್ ಹೊಂದಿದೆ. ಅಪಘಾತ ನಡೆದ ಎಂಐ 17ರಲ್ಲಿ ಪ್ರಧಾನಿ, ರಕ್ಷಣಾ ಸಚಿವರಂತಹ ವಿವಿಐಪಿಗಳೂ ಸವಾರಿ ಮಾಡುತ್ತಾರೆ. ಸೇನೆ ಮತ್ತು ವಾಯುಪಡೆ ಈ ಹೆಲಿಕಾಪ್ಟರ್ ಅನ್ನು ವಿವಿಐಪಿಗಾಗಿ ಬಳಸುತ್ತವೆ. ಇದರಲ್ಲಿ ಎರಡು ಎಂಜಿನ್ ಗಳಿದ್ದು, ಯಾವುದೇ ಸಂದರ್ಭದಲ್ಲೂ ಮತ್ತೊಂದು ಎಂಜಿನ್ ಬಳಸಿ ಸರಿಯಾದ ಜಾಗಕ್ಕೆ ತರಬಹುದು ಎನ್ನಲಾಗಿದೆ.

click me!