
ನವದೆಹಲಿ: ಬೆಂಗಳೂರು ಮೂಲದ ಮಹಾ ವಂಚಕ ಸುಕೇಶ್ ಚಂದ್ರಶೇಖರ್ ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಸ್ಫೋಟಕ ಆರೋಪಗಳ ಸುರಿಮಳೆಗೈದಿದ್ದು, ರಾಜ್ಯಸಭೆ ಸ್ಥಾನಕ್ಕಾಗಿ ಕೇಜ್ರಿಗೆ ತಾನು 50 ಕೋಟಿ ರು. ನೀಡಿದ್ದೆ ಎಂದು ಹೇಳಿದ್ದಾನೆ. ಅಲ್ಲದೆ, ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಹಾಗೂ ಹಾಲಿ ಆಪ್ ನಾಯಕ ಭಾಸ್ಕರ ರಾವ್ ಅವರನ್ನು ಆಪ್ಗೆ ಸೇರಿಸುವಂತೆ ಕೇಜ್ರಿವಾಲ್ ತನ್ನ ಮೇಲೆ ಒತ್ತಡ ಹೇರುತ್ತಿದ್ದರು ಎಂದೂ ಆರೋಪಿಸಿದ್ದಾನೆ.
ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ (sukesh chandrashekar) ತನ್ನ ವಕೀಲರಿಗೆ ಕೈಬರಹದ ಪತ್ರವೊಂದನ್ನು ಬರೆದಿದ್ದಾನೆ. ಅದರಲ್ಲಿ ತಾನು ಈ ಹಿಂದೆ ಕೇಜ್ರಿವಾಲ್ ಅವರಿಗೆ ಆಪ್ನ ರಾಜ್ಯಸಭೆ (Rajyasabha seat)ಸ್ಥಾನಕ್ಕಾಗಿ ಹಾಗೂ ದಕ್ಷಿಣ ಭಾರತದಲ್ಲಿ (South India)ಪಕ್ಷದ ಪ್ರಮುಖ ಹುದ್ದೆಗಾಗಿ 50 ಕೋಟಿ ರು. ನೀಡಿದ್ದೆ. ಅಲ್ಲದೆ ಕೇಜ್ರಿವಾಲ್ ಅವರು ಭಾಸ್ಕರ ರಾವ್ (Bhaskar Rao) ಆಪ್ಗೆ ಸೇರುವಂತೆ ಮಾಡಲು ತನ್ನ ಮೇಲೆ ಸತತ ಒತ್ತಡ ಹೇರುತ್ತಾ, ತನ್ನನ್ನು ಹಿಂಬಾಲಿಸುತ್ತಿದ್ದರು ಎಂದು ಆರೋಪಿಸಿದ್ದಾನೆ. ಈ ಪತ್ರವನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುವಂತೆಯೂ ಅದರಲ್ಲಿ ಕೋರಿದ್ದಾನೆ.
ಜೈಲಿನಲ್ಲಿ ಸುರಕ್ಷಿತವಾಗಿರಲು AAP ನಾಯಕ ಸತ್ಯೇಂದ್ರ ಜೈನ್ಗೆ 10 ಕೋಟಿ ನೀಡಿದ್ದೆ: ಸುಖೇಶ್ ಚಂದ್ರಶೇಖರ್
ಈ ಆರೋಪಗಳನ್ನು ನಿರಾಕರಿಸಿರುವ ಆಪ್, ವಂಚಕ ಸುಕೇಶ್ ಚಂದ್ರಶೇಖರ್ನ ನೆರವಿನಿಂದ ಬಿಜೆಪಿ ದೆಹಲಿ ಮಹಾನಗರ ಪಾಲಿಕೆ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಸುಕೇಶ್ ಬಿಜೆಪಿಯ ‘ಸ್ಟಾರ್ ಪ್ರಚಾರಕ’ನಾಗಿದ್ದಾನೆ ಎಂದು ಪ್ರತ್ಯಾರೋಪ ಮಾಡಿದೆ.
500 ಕೋಟಿ ರು. ದೇಣಿಗೆಗೆ ಒತ್ತಡ:
ನ.4ರಂದು ತನ್ನ ವಕೀಲರಿಗೆ (Lawyer)ಸುಕೇಶ್ ಪತ್ರ ಬರೆದಿದ್ದು, ತಾನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ಗೆ (Leftinent Governer) ದೂರು ನೀಡಿದ ನಂತರ ದೆಹಲಿ ಸಚಿವ ಸತ್ಯೇಂದ್ರ ಜೈನ್ (Sathyendra Jain) ಹಾಗೂ ತಿಹಾರ್ ಜೈಲಿನ ಮಾಜಿ ಡಿ.ಜಿ. ತನಗೆ ಬೆದರಿಕೆ ಹಾಕುತ್ತಿದ್ದಾರೆ. ಕೇಜ್ರಿವಾಲ್ ಏಕೆ ಪಕ್ಷಕ್ಕೆ 500 ಕೋಟಿ ರು. ದೇಣಿಗೆ ನೀಡುವ 20-30 ಮಂದಿಯನ್ನು ಕರೆತರುವಂತೆ ನನ್ನ ಮೇಲೆ ಒತ್ತಡ ಹೇರಿದ್ದರು? ನನ್ನನ್ನು ಕೇಜ್ರಿವಾಲ್ ‘ದೇಶದ ಅತಿದೊಡ್ಡ ವಂಚಕ’ ಎಂದು ಕರೆದಿದ್ದಾರೆ. ಹಾಗಿದ್ದರೆ ಅವರೇಕೆ ನನಗೆ ರಾಜ್ಯಸಭೆ ಸೀಟು ನೀಡುತ್ತೇನೆ ಎಂದು ಹೇಳಿ 50 ಕೋಟಿ ರು. ಪಡೆದರು? ಹಾಗಿದ್ದರೆ ಅವರು ಮಹಾ ವಂಚಕರೇ? ನಾನು ಕೇಜ್ರಿವಾಲ್ ವಿರುದ್ಧ ಮುಂದಿನ ವಾರ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾನೆ.
ಭಾರತದಿಂದ ಎಸ್ಕೇಪ್ ಆಗಲು ಪ್ರಯತ್ನ, ಸಾಕ್ಷ್ಯ ನಾಶ; ಜಾಕ್ವೆಲಿನ್ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಟ್ಟ ED
ಔತಣದಲ್ಲಿ 50 ಕೋಟಿ ರು. ನೀಡಿದ್ದೆ:
2016ರಲ್ಲಿ ಹಯಾತ್ ಭಿಕಾಜಿ ಕಾಮಾ ಪ್ಲೇಸ್ನಲ್ಲಿ ಕೇಜ್ರಿವಾಲ್ ಸತ್ಯೇಂದ್ರ ಜೈನ್ ಜೊತೆ ನನ್ನ ಔತಣದಲ್ಲಿ ಪಾಲ್ಗೊಂಡಿದ್ದರು. ಅಲ್ಲೇ ಅವರ ಸೂಚನೆ ಮೇಲೆ ಕೈಲಾಶ್ ಗೆಹ್ಲೋಟ್ಗೆ 50 ಕೋಟಿ ರು. ನೀಡಿದ್ದೆ. ನಂತರ ಭಾಸ್ಕರ ರಾವ್ರನ್ನು ಆಪ್ಗೆ ಸೇರಿಸುವಂತೆ ಕೇಜ್ರಿ ನನ್ನ ಮೇಲೆ ನಿರಂತರ ಒತ್ತಡ ಹೇರುತ್ತಿದ್ದರು. 2017ರಲ್ಲಿ ತಿಹಾರ್ ಜೈಲಿಗೆ ಸತ್ಯೇಂದ್ರ ಜೈನ್ ನನ್ನನ್ನು ಭೇಟಿ ಮಾಡಲು ಬಂದಿದ್ದರು. ಆಗ ಕೇಜ್ರಿವಾಲ್ ಕರೆ ಮಾಡಿ ‘ಎಲ್ಲಾ ಚೆನ್ನಾಗಿದೆಯಾ? ಸತ್ಯೇಂದ್ರ ಜೈನ್ಗೆ ಏನಾದರೂ ಹೇಳುವುದಿದೆಯಾ’ ಎಂದು ಕೇಳಿದ್ದರು. ಸತ್ಯೇಂದ್ರ ಜೈನ್ರ ಐಫೋನ್ನಲ್ಲಿ ಕೇಜ್ರಿವಾಲ್ ಸಂಖ್ಯೆ ಎಕೆ-2 ಎಂದು ಸೇವ್ ಆಗಿದೆ’ ಎಂದು ಸುಕೇಶ್ ವಿವರ ನೀಡಿದ್ದಾನೆ.
ಜೈಲಿನಲ್ಲಿ ನನಗೆ ರಕ್ಷಣೆ ನೀಡಲು ಸತ್ಯೇಂದ್ರ ಜೈನ್ ನನ್ನಿಂದ 10 ಕೋಟಿ ರು. ಪಡೆದಿದ್ದಾರೆ. ಸತ್ಯೇಂದ್ರ ಜೈನ್ರ ಕಾರ್ಯದರ್ಶಿ ಪ್ರತಿ ತಿಂಗಳು 2 ಕೋಟಿ ರು. ನೀಡುವಂತೆ ನನಗೆ ಹೇಳಿದ್ದ ಎಂದೂ ಸುಕೇಶ್ ಆರೋಪಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ