
ಲಖನೌ(ಡಿ.26) ಇಂಡಿ ಒಕ್ಕೂಟದ ಮಿತ್ರ ಪಕ್ಷಗಳು ಹಿಂದೂ ಧರ್ಮ, ಹಿಂದಿ ಭಾಷೆ ವಿಚಾರವಾಗಿ ಆಡುತ್ತಿರುವ ಮಾತು ಮೈತ್ರಿ ಕೂಟಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ. ಉದಯನಿಧಿ ಸ್ಟಾಲಿನ್, ಎ ರಾಜಾ ಬಳಿಕ ಇದೀಗ ಸಮಾಜವಾದಿ ಪಾರ್ಟಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಈಗಲೇ ಹಿಂದೂ ಧರ್ಮ, ಸನಾತನ, ಹಿಂದುತ್ವದ ವಿರುದ್ಧ ಮಾತನಾಡಿ ಹಲವರ ಆಕ್ರೋಶಕ್ಕೆ ತುತ್ತಾಗಿರುವ ಸ್ವಾಮಿ ಪ್ರಸಾದ್ ಮೌರ್ಯ ಇದೀಗ ಹಿಂದೂ ಧರ್ಮವಲ್ಲ, ಅದು ವಂಚನೆ ಎಂದಿದ್ದಾರೆ. ಇದೇ ಹಿಂದೂ ಧರ್ಮ ಕೆಲವರಿಗೆ ದಂಧೆಯಾಗಿದೆ ಎಂದು ಕಾರ್ಯಕ್ರಮದ ಭಾಷಣದಲ್ಲಿ ಹೇಳಿದ್ದಾರೆ.
ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಭಾಷಣದಲ್ಲಿ ಹಿಂದೂ ಧರ್ಮದ ಕುರಿತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ , ಪ್ರಧಾನಿ ನರೇಂದ್ರ ಮೋದಿ, ಸಚಿವ ನಿತಿನ್ ಗಡ್ಕರಿ ಹೇಳಿದ ಮಾತುಗಳನ್ನು ಉಲ್ಲೇಖಿಸಿ ಈ ವಿವಾದಾತ್ಮ ಹೇಳಿಕೆ ನೀಡಿದ್ದಾರೆ. ಹಿಂದೂ ಒಂದು ಧರ್ಮವಲ್ಲ, ಅದು ಜೀವನ ಪದ್ಧತಿ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮೋದಿ ಕೂಡ ಹಿಂದೂ ಧರ್ಮ ಇಲ್ಲ ಎಂದಿದ್ದಾರೆ. ಇದು ಯಾರ ಭಾವನೆಗೂ ಧಕ್ಕೆಯಾಗಲಿಲ್ಲ. ಆದರೆ ಸ್ವಾಮಿ ಪ್ರಸಾದ್ ಮೌರ್ಯ ಏನಾದರು ಹೇಳಿದರೆ ಧಾರ್ಮಿಕ ಭಾವನೆಗೆ ಧಕ್ಕೆ, ವಿವಾದಾತ್ಮಕ ಹೇಳಿಕೆಯಾಗುತ್ತದೆ ಎಂದು ಮೌರ್ಯ ಕಿಡಿ ಕಾರಿದ್ದಾರೆ.
ಭಾರತ ಯಾವತ್ತೂ ಹಿಂದೂ ದೇಶವಲ್ಲ: ಎಸ್ಪಿ ಮುಖಂಡ
ಮಾತು ಮುಂದುವರಿಸಿದ ಸ್ವಾಮಿ ಪ್ರಸಾದ್ ಮೌರ್ಯ, ಹಿಂದೂ ಒಂದು ಧರ್ಮವಲ್ಲ, ಅಂದು ವಂಚನೆ ಸುಳ್ಳಿನ ಕಂತೆ, ಕೆಲವರಿಗೆ ಹಿಂದೂ ಧರ್ಮ ಒಂದು ದಂಧೆ ಎಂದು ಹೇಳಿಕೆ ನೀಡಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪದೇ ಪದೇ ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಾ, ಅಸಂಖ್ಯಾತ ಹಿಂದೂಗಳಿಗೆ ಅವಮಾನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂತಹ ನಾಯಕರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ವಾಮಿ ಪ್ರಸಾದ್ ಮೌರ್ಯ ಹಲವು ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದೆ. ಹಿಂದೂ ಧರ್ಮ ಎಂಬುದೇ ಇಲ್ಲ. ಇಂದಿನ ಎಲ್ಲ ಸಮಸ್ಯೆಗಳಿಗೂ ಬ್ರಾಹ್ಮಣವಾದ ಕಾರಣ’ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಸಭೆಯೊಂದರಲ್ಲಿ ಅವರು ಮಾತ ನಾಡಿ, ‘ಹಿಂದೂ ಧರ್ಮ ಎಂಬುದೇ ಇಲ್ಲ. ಬ್ರಾಹ್ಮಣ ಧರ್ಮವನ್ನೇ ಹಿಂದೂ ಧರ್ಮ ಎಂದು ಕರೆಯಲಾಗುತ್ತದೆ ಎಂದಿದ್ದರು. ಪ್ರಪಂಚದಲ್ಲಿ ಜನಿಸುವ ಎಲ್ಲರಿಗೂ ಎರಡು ಕೈ, ಎರಡು ಕಾಲು, ಎರಡು ಕಿವಿ ಮತ್ತು ಎರಡು ಕಣ್ಣುಗಳಿದ್ದರೆ, ಲಕ್ಷ್ಮಿ ದೇವಿಗೆ ಮಾತ್ರ ಹೇಗೆ ನಾಲ್ಕು ಕೈಗಳು ಇರುತ್ತವೆ? ಎಂದು ಪ್ರಶ್ನಿಸುವ ಮೂಲಕ ಲಕ್ಷ್ಮಿ ದೇವಿಗೆ ಅವಮಾನ ಮಾಡಿದ್ದರು. ಇನ್ನು ರತ್ನಚರಿತ ಮಾನಸ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು.
ಗ್ಯಾನವಾಪಿ ಮಸೀದಿಯಂತೆ ದೇಗುಲಗಳ ಸಮೀಕ್ಷೆ ಮಾಡಬೇಕು: ಎಸ್ಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ