
ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಮನಕಲಕುವ ಘಟನೆಯಿದು. 55 ವರ್ಷದ ಮಗ ಭಾನುವಾರ ಸಾವನ್ನಪ್ಪಿದ್ದ. ಈ ಸುದ್ದಿ ತಿಳಿದ ಕೆಲವೇ ನಿಮಿಷಗಳಲ್ಲಿ 75 ವರ್ಷದ ತಾಯಿಯೂ ಆಘಾತದಿಂದ ಪ್ರಾಣ ಬಿಟ್ಟಿದ್ದಾರೆ. ಒಂದೇ ಮನೆಯಿಂದ ತಾಯಿ-ಮಗನ ಶವಯಾತ್ರೆ ಹೊರಟಿದ್ದು, ಇಡೀ ನಗರವೇ ಕಣ್ಣೀರು ಹಾಕಿದೆ. ಮಧ್ಯಪ್ರದೇಶದ ಇಂದೋರ್ನಿಂದ ಬಂದಿರೋ ಈ ಸುದ್ದಿ ಕೇಳಿದ್ರೆ ಎಂಥವರ ಕಣ್ಣಲ್ಲೂ ನೀರು ಬರುತ್ತೆ. ಇಲ್ಲಿ ತಾಯಿ-ಮಗನ ಪಾಶಕ್ಕೆ ಸಾಕ್ಷಿಯಾದ ಒಂದು ಮನಕಲಕುವ ಘಟನೆ ನಡೆದಿದೆ.
ನಗರದ ಭಂಡಾರಿ ಮಿಲ್ ಮಾರ್ಗ್ನಲ್ಲಿರುವ ಶ್ರೀನಾಥ್ ವಿಹಾರ್ ಅಪಾರ್ಟ್ಮೆಂಟ್ನಲ್ಲಿ ಈ ದುರಂತ ಸಂಭವಿಸಿದೆ. ಇಲ್ಲಿ ವಾಸವಿದ್ದ 55 ವರ್ಷದ ರಾಜುಲ್ ಶರ್ಮಾ ಭಾನುವಾರ ಸಾವನ್ನಪ್ಪಿದ್ದರು. ಮಗನ ಸಾವಿನ ಸುದ್ದಿ ಕೇಳಿದ ಕೆಲವೇ ನಿಮಿಷಗಳಲ್ಲಿ ಅವರ 75 ವರ್ಷದ ತಾಯಿ ಕಿರಣ್ ಶರ್ಮಾ ಕೂಡ ಆಘಾತದಿಂದ ಪ್ರಾಣ ಬಿಟ್ಟಿದ್ದಾರೆ. ಒಂದೇ ಮನೆಯಿಂದ ತಾಯಿ-ಮಗನ ಶವಯಾತ್ರೆ ಒಟ್ಟಿಗೆ ಹೊರಟ ದೃಶ್ಯ ನೋಡಿದವರ ಎದೆ ಹಿಂಡುವಂತಿತ್ತು. ಸಂಬಂಧಿಕರು ಮತ್ತು ಸ್ಥಳೀಯರು ಕಣ್ಣೀರು ಹಾಕಿ, "ವಿಧಿಯೇ, ಇದೇನಪ್ಪಾ ನಿನ್ನ ಆಟ" ಅಂತಾ ಮರುಗಿದ್ದಾರೆ.
ಮಗನ ಶವ ನೋಡಿ ಕುಸಿದುಬಿದ್ದ ತಾಯಿ
ಕಂಪ್ಯೂಟರ್ ಡಿಸೈನರ್ ಆಗಿದ್ದ ರಾಜುಲ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಮನೆಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದವು. ಈ ವಿಷಯ ತಾಯಿ ಕಿರಣ್ ಶರ್ಮಾ ಅವರಿಗೆ ತಿಳಿಯಬಾರದು ಅಂತಾ ಕುಟುಂಬದವರು ಅವರನ್ನು ಪಕ್ಕದಲ್ಲೇ ಇರುವ ಮಗಳ ಮನೆಗೆ ಕಳುಹಿಸಿದ್ದರು. ಆದರೆ, ಅವರು ಲಿಫ್ಟ್ನಿಂದ ಹೊರಬಂದಾಗ ಮನೆಯಲ್ಲಿ ಮಗನ ಶವ ಇರುವುದನ್ನು ನೋಡಿಬಿಟ್ಟರು. ಜೋರಾಗಿ ಅಳುತ್ತಾ ಮಗನ ತಲೆ ಸವರಿ, ಅಲ್ಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಅಷ್ಟರಲ್ಲಾಗಲೇ ಅವರು ಪ್ರಾಣ ಬಿಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಸೋಮವಾರ ತಾಯಿ ಮತ್ತು ಮಗ ಇಬ್ಬರ ಅಂತ್ಯಸಂಸ್ಕಾರವನ್ನು ಒಟ್ಟಿಗೆ ನೆರವೇರಿಸಲಾಯಿತು.
"ದೇವರೇ, ಯಾರಿಗೂ ಈ ಸ್ಥಿತಿ ತರಬೇಡ..."
ಮೃತ ರಾಜುಲ್ ಅವರ ಚಿಕ್ಕಪ್ಪ ರಾಜೇಶ್ ಅವರು, "ನನ್ನ ಅತ್ತಿಗೆ ಮತ್ತು ಸೋದರಳಿಯ ಇಬ್ಬರಿಗೂ ಬಹಳ ಹಿಂದೆಯೇ ಬೈಪಾಸ್ ಸರ್ಜರಿ ಆಗಿತ್ತು. ನಮ್ಮ ಕುಟುಂಬದಲ್ಲಿ ಹಲವರಿಗೆ ಈ ಸಮಸ್ಯೆ ಇದೆ. ಆದರೆ ಪರಿಸ್ಥಿತಿ ಇಷ್ಟು ಕೆಟ್ಟದಾಗಿರಲಿಲ್ಲ. ಹೀಗೆ ಆಗುತ್ತೆ ಅಂತ ನಾವು ಅಂದುಕೊಂಡಿರಲಿಲ್ಲ. ನಮ್ಮ ಕುಟುಂಬದ ಮೇಲೆ ದುಃಖದ ಬೆಟ್ಟವೇ ಬಿದ್ದಿದೆ. ದೇವರು ನಮ್ಮಿಂದ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ. ಈ ನೋವು ಸಹಿಸಲು ಆಗ್ತಿಲ್ಲ" ಎಂದು ತಮ್ಮ ನೋವನ್ನು ತೋಡಿಕೊಂಡರು. ಅಕ್ಕಪಕ್ಕದ ಮನೆಯವರೂ ಈ ಘಟನೆಯಿಂದ ಕಣ್ಣೀರು ಹಾಕುತ್ತಿದ್ದಾರೆ. "ಈ ಆಘಾತದಿಂದ ಆ ಕುಟುಂಬ ಹೇಗೆ ಹೊರಬರುತ್ತದೋ ಗೊತ್ತಿಲ್ಲ. ಒಂದೇ ದಿನ ಎರಡು ಜೀವಗಳು ಹೋಗಿದ್ದು ತುಂಬಾ ದುಃಖದ ಸಂಗತಿ. ದೇವರು ಯಾರಿಗೂ ಇಂತಹ ಪರಿಸ್ಥಿತಿ ತರಬಾರದು" ಎಂದು ಹೇಳಿದ್ದಾರೆ.
ಈ ದುಃಖದ ನಡುವೆಯೂ ಮೃತರ ಕುಟುಂಬ ಮಾನವೀಯತೆ ಮೆರೆದಿದೆ. ತಾಯಿ ಮತ್ತು ಮಗ ಇಬ್ಬರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. 'ಮುಸ್ಕಾನ್ ಗ್ರೂಪ್'ನ ಕಾರ್ಯಕರ್ತರ ಸಹಾಯದಿಂದ ಈ ನೇತ್ರದಾನ ಪ್ರಕ್ರಿಯೆ ನಡೆದಿದೆ. "ನಮ್ಮವರು ನಮ್ಮ ಜೊತೆಗಿಲ್ಲ, ಆದರೆ ಅವರ ಕಣ್ಣುಗಳಿಂದ ನಾಲ್ಕು ಜನರ ಬಾಳಿಗೆ ಬೆಳಕು ಸಿಗಲಿದೆ. ಅವರ ಮೂಲಕವೇ ನಮ್ಮವರು ಈ ಜಗತ್ತನ್ನು ನೋಡುತ್ತಿದ್ದಾರೆ ಎಂದು ನಾವು ಭಾವಿಸುತ್ತೇವೆ" ಎಂದು ಕುಟುಂಬದವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ