
ನವದೆಹಲಿ(ಡಿ.21): ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಸದ್ಯ ಹರ್ಯಾಣದಲ್ಲಿ ಸಂಚರಿಸುತ್ತಿದೆ. ಕನ್ಯಾಕುಮಾರಿಯಿಂದ ಆರಂಭಿಸಿರುವ ಈ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ. ಹಲವು ಅಡೆತಗಳನ್ನು ನಿವಾರಿಸಿ ಯಶಸ್ವಿಯಾಗಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಹೊಸ ಸಂಕಷ್ಟ ಎದುರಾಗಿದೆ. ಕೇಂದ್ರ ಸರ್ಕಾರ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದು, ಯಾತ್ರೆ ಮುಂದೂಡುವಂತೆ ಮನವಿ ಮಾಡಿದೆ. ಒಂದು ವೇಳೆ ಯಾತ್ರೆ ಮುಂದುವರಿಸುವುದಾದದರೆ ಈ ನಿಯಮಗಳನ್ನು ಪಾಲಿಸಲು ಸೂಚಿಸಿದೆ. ಇದಕ್ಕೆ ಕಾರಣ ಚೀನಾದಲ್ಲಿ ಸ್ಫೋಟಗೊಂಡಿರುವ ಕೋವಿಡ್. ಚೀನಾ, ಜಪಾನ್, ಅಮೆರಿಕ, ಬ್ರೆಜಿಲ್ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್ ಸ್ಪೋಟಗೊಂಡಿದೆ. ಇದರ ಪರಿಣಾಮ ಭಾರತಕ್ಕೆ ತಟ್ಟುವ ಮೊದಲೇ ಎಚ್ಚೆತ್ತುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಒಂದೊಂದೆ ನಿರ್ಬಂಧಗಳನ್ನು ಜಾರಿಗೆ ತರುತ್ತಿದೆ. ಇದರ ಅಂಗವಾಗಿ ಅತೀ ಹೆಚ್ಚಿನ ಮಂದಿ ಭಾಗವಹಿಸುತ್ತಿರುವ ಭಾರತ್ ಜೋಡೋ ಯಾತ್ರೆಯ ಮುಂದುವರಿಸುವುದಾದರೆ ಕೋವಿಡ್ ನಿಯಮ ಪಾಲಿಸಲು ಸೂಚನೆ ನೀಡಲಾಗಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡಿವಿಯಾ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅಶೋಕ್ ಗೆಹ್ಲೋಟ್ಗೆ ಪತ್ರ ರವಾನಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ಹೆಚ್ಚಿನ ಮಂದಿ ಪಾಲ್ಗೊಳ್ಳುತ್ತಿರುವ ಕಾರಣ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಲಿದೆ. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಿ. ಕನಿಷ್ಠ ಎರಡು ಡೋಸ್ ಲಸಿಕೆ ಪಡೆದವರು ಮಾತ್ರ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಿ. ಈ ಮೂಲಕ ಕೋವಿಡ್ ಹರಡದಂತೆ ತಡೆಯಲು ಸಹಕರಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚೀನಾ ಗಡಿಗೆ ರಾಹುಲ್ ಸೂಚನೆ ಮೇರೆಗೆ ಸೇನೆ ಕಳಿಸಿದ್ದಲ್ಲ: ಜೈಶಂಕರ್ ತಿರುಗೇಟು
ಮೂವರು ಸಂಸದರು ಚೀನಾದಲ್ಲಿನ ಕೋವಿಡ್ ಕುರಿತು ಕಳವಳ ವ್ಯಕ್ತಪಡಿಸಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಕೆಲ ಸಲಹೆಗಳನ್ನು ನೀಡಿದ್ದಾರೆ. ಯಾತ್ರೆ ಸೇರಿದಂತೆ ಯಾವುದೇ ರ್ಯಾಲಿಗಳಲ್ಲಿ ಕೋವಿಡ್ ಮಾರ್ಗಸೂಚಿ ಕಟ್ಟು ನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಸಾಲು ಸಾಲು ಚುನಾವಣೆಗಳು ಇರುವುದರಿಂದ ಮತ್ತೊಂದು ಕೋವಿಡ್ ಅಲೆಗೆ ಭಾರತ ತುತ್ತಾಗಬಾರದು. ಹೀಗಾಗಿ ಈಗಲೇ ಮುನ್ನಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮಂದಿ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ಸಲಹೆ ನೀಡಿದ್ದಾರೆ.
ಕೇಂದ್ರದ ‘ಹಿಂದಿ ಹೇರಿಕೆ’ಗೆ ರಾಹುಲ್ ತೀವ್ರ ವಿರೋಧ
ಈ ಸಲಹೆ ಆಧರಿಸಿ ಮನ್ಸುಕ್ ಮಾಂಡವಿಯಾ, ಭಾರತ್ ಜೋಡೋ ಯಾತ್ರೆಗೆ ಕೆಲ ಮನವಿ ಮಾಡಿದ್ದಾರೆ. 105 ದಿನಗಳನ್ನು ಪೂರೈಸಿರುವ ಈ ಯಾಾತ್ರೆ 9 ರಾಜ್ಯಗಳ 44 ಜಿಲ್ಲೆಗಳಲ್ಲಿ ಸಂಚಾರ ಮಾಡಿದೆ. ಇನ್ನು 548 ಕಿಲೋಮೀಟರ್ ಬಾಕಿ ಉಳಿದಿದೆ. ದೆಹಲಿ, ಪಂಜಾಬ್ ಮೂಲಕ ಜಮ್ಮು ಕಾಶ್ಮೀರದಲ್ಲಿ ಸಮಾರೋಪಗೊಳ್ಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ